ETV Bharat / state

ಆದಿಚುಂಚನಗಿರಿ ಶ್ರೀ ಭೇಟಿಯಾದ ಬೆಂಗಳೂರು ಬಿಜೆಪಿ ಅಭ್ಯರ್ಥಿಗಳು

author img

By ETV Bharat Karnataka Team

Published : Mar 16, 2024, 8:34 AM IST

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿಗಳು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿಗಳು

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಟಿಕೆಟ್ ಘೋಷಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಬೆಂಗಳೂರು: ಲೋಕಸಭಾ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ. ಕಾರ್ಯಕರ್ತರು, ಮುಖಂಡರ ಸಭೆ ಹಾಗೂ ಮಠ ಮಂದಿರಗಳ ಭೇಟಿಯಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿಗಳು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದ ಬಿಜೆಪಿ ಅಭ್ಯರ್ಥಿಗಳು

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಬೋವಿಪಾಳ್ಯದಲ್ಲಿರುವ ಬಿಜಿಎಸ್ ಕಾಲೇಜಿನಲ್ಲಿ ಶುಕ್ರವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಕೇಂದ್ರ ಸಚಿವೆಯೂ ಆಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದ ಅಭ್ಯರ್ಥಿಯಾಗಿರುವ ಸಂಸದ ಪಿಸಿ ಮೋಹನ್ ಭೇಟಿ ಮಾಡಿ ಆಶೀರ್ವಾದ ಪಡೆದರು.

ಕಾರ್ಯಕರ್ತರು, ನಾಯಕರ ಜೊತೆ ಶೋಭಾ ಕರಂದ್ಲಾಜೆ
ಕಾರ್ಯಕರ್ತರು, ನಾಯಕರ ಜೊತೆ ಶೋಭಾ ಕರಂದ್ಲಾಜೆ

ಮತ್ತೊಂದೆಡೆ ಬೆಂಗಳೂರು ದಕ್ಷಿಣಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾದ ಪ್ರಯುಕ್ತ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಇದನ್ನೂ ಓದಿ: ಬೇರೆಯವರು ಟಿಕೆಟ್ ಕೇಳೋದು ತಪ್ಪಲ್ಲ, ಆದ್ರೆ ಅವಮಾನ ಮಾಡೋದು ಸರಿಯಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, "ಹಲವು ಶತಮಾನಗಳ ಆದಿ ಚುಂಚನಗಿರಿ ಮಠದ ಸೇವಾ ಕೈಂಕರ್ಯವನ್ನು ನಿರ್ಮಲಾನಂದನಾಥ ಮಹಾಸ್ವಾಮಿಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದು, ಅವರ ಸಾಮಾಜಿಕ ಸೇವಾ ಕಾರ್ಯಗಳು ನನಗೆ ಎಂದೆಂದಿಗೂ ಸ್ಫೂರ್ತಿ ಒದಗಿಸುತ್ತಿವೆ. ನನ್ನ ರಾಜಕೀಯ ಜೀವನದ ವಿವಿಧ ಮಜಲುಗಳಲ್ಲಿ ಶ್ರೀಗಳ ಮಾರ್ಗದರ್ಶನ ಸಿಕ್ಕಿದ್ದು ನನ್ನ ಸೌಭಾಗ್ಯ. ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶವನ್ನು ಪಕ್ಷ ನನಗೆ ನೀಡಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಬೆಂಗಳೂರಿನ ನಾಗರಿಕರ ಸೇವೆ ಸಲ್ಲಿಸಲು ನನಗೆ ಅತೀವ ಸಂತೋಷ" ಎಂದು ತಿಳಿಸಿದರು.

ಸಭೆ ನಡೆಸಿದ ಶೋಭಾ ಕರಂದ್ಲಾಜೆ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ಎಸ್.ಮುನಿರಾಜು ಅವರೊಂದಿಗೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಸಂಪೂರ್ಣ ಸಹಕಾರ ನೀಡುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಇದನ್ನೂ ಓದಿ: ಉಡುಪಿ ಚಿಕ್ಕಮಗಳೂರು ಟಿಕೆಟ್ ತಪ್ಪಿಸಿದವರಿಗೂ ಟಿಕೆಟ್ ಸಿಕ್ಕಿಲ್ಲ, ಇನ್ನಾದರೂ ಅವರು ಪಾಠ ಕಲಿಯಲಿ: ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.