ETV Bharat / state

ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ

author img

By ETV Bharat Karnataka Team

Published : Feb 17, 2024, 3:48 PM IST

ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ
ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ

ಈಗಿನ ರಾಜಕಾರಣಿಗಳ ಬಗ್ಗೆ ಅಸಹ್ಯ ಅನಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ನೋವಿನ ಸಂಗತಿಯಾಗಿದೆ ಎಂದು ಸಭಾಪತಿ ಬಸವರಾಜ್​ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ

ಧಾರವಾಡ: ಉತ್ತರ ಕನ್ನಡ ಸಂಸದ ಅನಂತಕುಮಾರ್​ ಹೆಗಡೆಗೆ ಕೋರ್ಟ್ ಎಚ್ಚರಿಕೆ ನೀಡಿದ ವಿಚಾರವಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಇದನ್ನು ರಾಜಕಾರಣಿಗಳಾದ ನಾವು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ್​ ಅವರಿಗೆ ನ್ಯಾಯಾಧೀಶರು ಉತ್ತಮವಾದ ಸಲಹೆ ಕೊಟ್ಟಿದ್ದಾರೆ. ಆ ಸಲಹೆಯನ್ನು ಎಲ್ಲ ರಾಜಕಾರಣಿಗಳು ಪಾಲಿಸಬೇಕು. ಈಗಿನ ದಿನಮಾನಗಳಲ್ಲಿ ಅವರನ್ನು ಇವರು ಬೈತಾರೆ, ಇವರನ್ನು ಅವರು ಬೈತಾರೆ ಯಾರಿಗೂ ದೇಶದ ಬಗ್ಗೆ ಚಿಂತನೆ ಇಲ್ಲ. ಈಗಿನ ರಾಜಕಾರಣಿಗಳ ಬಗ್ಗೆ ಅಸಹ್ಯ ಅನಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು, ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

44 ವರ್ಷದಿಂದ ವಿಧಾನ ಪರಿಷತ್​ನಲ್ಲಿದ್ದೇನೆ, ಮಂತ್ರಿಯಾಗಿ ಅನೇಕ ಖಾತೆಗಳನ್ನು ನಿಭಾಯಿಸಿದ್ದೇನೆ. ಆದರೆ ಈಗಿನ ದಿನಮಾನಗಳಲ್ಲಿ ನಡೆಯುತ್ತಿರುವುದು ಒಳ್ಳೆಯದಲ್ಲ. ಎಲ್ಲರೂ ತಿಳಿದುಕೊಳ್ಳಬೇಕು ಆತ್ಮವಂಚನೆ ಮಾಡಿಕೊಳ್ಳಬಾರದು‌. ವಿನಾಕಾರಣ ಪ್ರತಿಯೊಂದಕ್ಕೂ ಟೀಕಿಟಿಪ್ಪಣಿ ಮಾಡಿದರೇ ಸಾಮಾನ್ಯರಂತೆ ವರ್ತಿಸಿದರೆ ಹೇಗೆ? ರಾಜಕಾರಣಿಗಳಿದ್ದವರೂ ಎಲ್ಲರೂ ನ್ಯಾಯಾಧೀಶರ ಸಲಹೆ ಪಾಲಿಸಬೇಕು. ಆಗ ಮಾತ್ರ ಇತರರಿಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿದೆ ಎಂದರು.

ಅನಂತಕುಮಾರ್​ ಹೆಗಡೆ ವಿರುದ್ಧ ಹೈಕೋರ್ಟ್​ ಅಸಮಾಧಾನ: ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಬಳಸಿರುವ ಹೇಳಿಕೆ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 'ಬಳಕೆ ಮಾಡಿರುವುದು ಕೀಳು ಭಾಷೆ. ಇದು ಶೋಭೆ ತರುವಂಥದ್ದಲ್ಲ' ಎಂದು ಕರ್ನಾಟಕ ಹೈಕೋರ್ಟ್ ಇಂದು ಮೌಖಿಕವಾಗಿ ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪರಿಣಾಮ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಸಂಸದ ಅನಂತಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, "ಅವರೊಬ್ಬ (ಅನಂತಕುಮಾರ್ ಹೆಗಡೆ) ಉತ್ತಮ ವಾಗ್ಮಿಯಾಗಿರಬಹುದು. ಇಲ್ಲಿ (ಪೀಠದಲ್ಲಿ) ಕುಳಿತು ನಾವು ಹೆಚ್ಚೇನು ಹೇಳಲಾಗದು. ಅವರು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ, ನ್ಯಾಯಮೂರ್ತಿಗಳಿಗೂ ಅವರು ಗೌರವಾನ್ವಿತ ಮುಖ್ಯಮಂತ್ರಿ. ಅವರಿಗೂ ನಾವು ಗೌರವ ಕೊಡಲ್ಲ ಎಂದರೆ ಹೇಗೆ?. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹಾಗೆಲ್ಲಾ ಮಾತನಾಡಬಾರದು.

ಅವರಿಗೆ ನಾವು ಮತ ಹಾಕುತ್ತೇವೋ, ಇಲ್ಲವೋ ಅನ್ನುವುದು ಬೇರೆ ವಿಚಾರ. ಅವರು ನಮ್ಮ ಮುಖ್ಯಮಂತ್ರಿ. ಏಕವಚನದಲ್ಲಿ ಮಾತನಾಡುವುದು ಶೋಭೆ ತರುವಂಥದಲ್ಲ. ಅವರಾಗಲಿ, ನೀವಾಗಲಿ ಹೀಗೆ ಮಾತನಾಡುವಂತಿಲ್ಲ. ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಮತ್ತೊಂದು ಪಕ್ಷ ಸೋಲುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದೇ ಹೀಗೆ ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ: ಡಿ.ಕೆ. ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿಯಲ್ಲ, ಹಳ್ಳಿಯ ಸಂಸದ - ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.