ETV Bharat / state

ವಿಧಾನಸಭೆ ಚುನಾವಣೆಯಲ್ಲಿ ದ್ವೇಷ-ಮೋಸದ ರಾಜಕೀಯ ಮಾಡಲಾಗಿತ್ತು: ಬಿ.ಶ್ರೀರಾಮುಲು

author img

By ETV Bharat Karnataka Team

Published : Mar 14, 2024, 3:37 PM IST

Updated : Mar 14, 2024, 4:31 PM IST

b sriramulu
ಬಿ ಶ್ರೀರಾಮುಲು

ಮಾಜಿ ಸಚಿವ ಬಿ ಶ್ರೀರಾಮುಲು ಅವರು ದಶಕದ ಬಳಿಕ, ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮಾಜಿ ಸಚಿವ ಬಿ ಶ್ರೀರಾಮುಲು

ಬಳ್ಳಾರಿ : ಮಾಜಿ ಸಚಿವ, ಬಿಜೆಪಿಯ ಪ್ರಮುಖ ನಾಯಕ ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ ಬಿ. ಶ್ರೀರಾಮುಲು ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರು ಬಳ್ಳಾರಿ ಲೋಕಸಭಾ ಅಖಾಡದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ರಾಜ್ಯ ಬಿಜೆಪಿಯ ಪ್ರಬಲ ನಾಯಕರಲ್ಲಿ ಒಬ್ಬರಾಗಿರುವ ಬಿ. ಶ್ರೀರಾಮುಲು ತಮ್ಮ ರಾಜಕೀಯ ಜೀವನದಲ್ಲಿ ಹಲವು ಮಹತ್ತರ ಸವಾಲುಗಳನ್ನು ಎದುರಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಏಕಕಾಲಕ್ಕೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಮರಳಿ ತಮ್ಮ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣಕ್ಕೆ ಬಂದು ಸ್ಪರ್ಧಿಸಿದ್ದರು. ಸಚಿವ ನಾಗೇಂದ್ರ ಅವರ ವಿರುದ್ಧ ಪರಾಭವಗೊಂಡಿದ್ದ ಶ್ರೀರಾಮುಲು ಈಗ ಲೋಕಸಭಾ ಕಣಕ್ಕೆ ಇಳಿಯುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸೋಲಿನ ನಂತರ ಶ್ರೀರಾಮುಲು ಅವರು ಕೆಲ ತಿಂಗಳು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಅವರು, ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದರು. ಕೊನೆಗೂ ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿ. ಶ್ರೀರಾಮುಲು ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅವರ ಎಂಟ್ರಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಣ ರಂಗೇರಿದೆ.

ಬಿ. ಶ್ರೀರಾಮುಲು ಹಿನ್ನೆಲೆ: 1971ರ ಆ. 8 ರಂದು ಜನಿಸಿದ ಬಿ. ಶ್ರೀರಾಮುಲು ಬಿ. ತಿಮ್ಮಪ್ಪ ಹಾಗೂ ಬಿ. ಹೊನ್ನೂರಮ್ಮ ದಂಪತಿಯ ಏಳನೇ ಸುಪುತ್ರ. ಇವರು ಪದವಿ ಶಿಕ್ಷಣ ಪೂರೈಸಿದ್ದಾರೆ. ಆಂಧ್ರ ಮೂಲದ ಲಕ್ಷ್ಮಿ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಮೂವರು ಪುತ್ರಿಯರು, ಓರ್ವ ಪುತ್ರರಿದ್ದಾರೆ. ಬಿ. ಶ್ರೀರಾಮುಲು ಹಾಗೂ ಸ್ನೇಹಿತ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜೋಡಿ ರಾಜ್ಯದಲ್ಲಿ ಗಮನಸೆಳೆದಿತ್ತು. ಬಳಿಕ ರಾಜಕೀಯ ವಲಯದಲ್ಲಿ ರೆಡ್ಡಿ ಬ್ರದರ್ಸ್ ತಂಡದಲ್ಲಿ ರಾಮುಲು ಅವರು ಸಹ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ನಡೆದ ನಾನಾ ಬೆಳವಣಿಗೆಯಿಂದ ಜನಾರ್ದನರೆಡ್ಡಿ ಅವರು ಬಿಜೆಪಿ ಬಿಟ್ಟು ಕೆಆರ್‌ಪಿಪಿ ಹೊಸ ಪಕ್ಷ ಸ್ಥಾಪಿಸಿದ ಬಳಿಕ ಇಬ್ಬರ ನಡುವಿನ ನಂಟು ಈಗ ಅಷ್ಟಕಷ್ಟೇ ಎಂಬಂತಾಗಿದೆ.

ಬಿ. ಶ್ರೀರಾಮುಲು ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದರು. 2006ರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವ, 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವ, 2019ರಲ್ಲಿ ಆರೋಗ್ಯ ಸಚಿವ, ಬಳಿಕ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಮಾಜಿ ಸಚಿವ ಬಿ ಶ್ರೀರಾಮುಲು

ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧೆ: ಮಾಜಿ ಸಚಿವ ಬಿ. ಶ್ರೀರಾಮುಲು ಅವರು ದಶಕಗಳ ಬಳಿಕ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಳೆದ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎನ್. ವೈ ಹನುಮಂತಪ್ಪ ಅವರ ವಿರುದ್ಧ 85,144 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಅವರು, ದಶಕಗಳ ಬಳಿಕ ಪುನಃ ಕೇಂದ್ರ ರಾಜಕೀಯದಲ್ಲಿ ದುಮುಕ್ಕಿದ್ದಾರೆ. ಎರಡನೇ ಬಾರಿಗೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಬಿ. ಶ್ರೀರಾಮುಲು ನಡೆದು ಬಂದ ರಾಜಕೀಯ ಪಥ : ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮೊದಲ ಬಾರಿಗೆ 1996ರಲ್ಲಿ ಬಳ್ಳಾರಿ ನಗರಸಭೆಯ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಇದಾದ ಬಳಿಕ 1999ರಲ್ಲಿ ಮೊದಲ ಬಾರಿಗೆ ರಾಜ್ಯ ರಾಜಕೀಯಕ್ಕೆ ಕಾಲಿಟ್ಟ ರಾಮುಲು ಅವರು, ಮೊದಲ ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

ನಂತರ ಪುನಃ 2004ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಕ್ಷೇತ್ರ ಪುನರ್​ವಿಂಗಡಣೆ ನಂತರ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ಬಿಜೆಪಿಯೊಂದಿಗೆ ಮುನಿಸಿಕೊಂಡು 2011ರಲ್ಲಿ ಬಿಜೆಪಿ ತೊರೆದು, ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. 2011ರ ಉಪಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿ 2014 ರಲ್ಲಿ ಬಿಎಸ್‍ಆರ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ, 2014ರಲ್ಲಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು.

ನಂತರ ಎಂಪಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, 2018ರಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊಳಕಾಲ್ಮೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2023ರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮರಳಿ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ಧನ್ಯವಾದ ಅರ್ಪಿಸಿದ ಮಾಜಿ ಸಚಿವ ಬಿ ಶ್ರೀರಾಮುಲು: ಕೇಂದ್ರ ಲೋಕಸಭೆ ಚುನಾವಣೆ ಪಟ್ಟಿ ಬುಧವಾರ ಬಿಡುಗಡೆಗೊಳಿಸಿದ್ದು, ಬಳ್ಳಾರಿ ಜಿಲ್ಲೆಗೆ ಸ್ಪರ್ಧೆ ಮಾಡಲು ನನಗೆ ಅವಕಾಶ ನೀಡಿರುವ ಪ್ರಧಾನಿ ಮೋದಿ, ನಡ್ಡಾ, ಅಮಿತ್ ಶಾ, ಸಂತೋಷ ಜಿ. ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ನಗರದ ಅಹಂಬಾವಿಯ ಗೃಹ ಕಚೇರಿಯಲ್ಲಿ ಇಂದು ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನನ್ನನ್ನು ವಿಧಾನಸಭೆ ಚುನಾವಣೆಯ ಸೋಲಿನಿಂದ ಅಜ್ಞಾತ ವಾಸಕ್ಕೆ ಕಳುಹಿಸಲಾಗಿತ್ತು. ಆ ಕಾಲ ಈಗ‌ ಮುಗಿದಿದೆ. ವಿಧಾನಸಭೆ ಚುನಾವಣೆಯಲ್ಲಿ ದ್ವೇಷ ಮತ್ತು ಮೋಸದ ರಾಜಕೀಯ ಮಾಡಲಾಗಿತ್ತು. ಆದರೆ ಈಗ ಅದು ನಡೆಯೋಲ್ಲ ಎಂದ ಅವರು, ನಗರಸಭೆ ಸದಸ್ಯನಿಂದ ಜೀವನ ಪ್ರಾರಂಭಿಸಿ ಶಾಸಕ, ಸಂಸದ, ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ಬಳ್ಳಾರಿ ಜನತೆಗೆ ಗೊತ್ತಿದೆ. ಹಾಗಾಗಿ ಈ ಬಾರಿ ನನ್ನ ಜನ ನನ್ನ ಕೈ ಬಿಡಲ್ಲ ಎಂಬ ಆತ್ಮವಿಶ್ವಾಸ ಇದೆ ಎಂದರು.

ಆಡು‌ ಮುಟ್ಟದ ಸೊಪ್ಪಿಲ್ಲ ರಾಮುಲು ಪ್ರೀತಿ ಮಾಡದ ವ್ಯಕ್ತಿ ಇಲ್ಲ ಎಂಬ ಗಾದೆ ಮಾತು ಹೇಳಿದ ಅವರು, ಮೂವತ್ತು ವರ್ಷದ ಸುದೀರ್ಘ ರಾಜಕೀಯ ಈ ಬಾರಿ ನನ್ನ ಕೈ ಹಿಡಿಯುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಜೊತೆಗೆ ನಾಲ್ಕು ನೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ಇದರಿಂದ ಕೇಂದ್ರ ಮತ್ತು ರಾಜ್ಯ ಸುಭಿಕ್ಷೆಯಾಗಲಿದೆ ಎಂದರು. ಇದು ಕೇವಲ ರಾಮುಲು ಚುನಾವಣೆ ಅಲ್ಲ, ಇಡೀ ದೇಶದ ಚುನಾವಣೆ ಆಗಿದೆ. ಜನರು ಮೋದಿ ಅವರನ್ನು ಸಾಕಷ್ಟು ಹತ್ತಿರದಿಂದ ನೋಡಿದ್ದಾರೆ. ಮತ್ತು ಮೋದಿಯವರು ಜನರ ವಿಶ್ವಾಸಗಳಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ದುರಾಡಳಿತ, ದುರಂಹಕಾರ ಮತ್ತು ಕುಟುಂಬ ರಾಜಕೀಯದಿಂದ ಒಂದೇ ಕುಟುಂಬ ರಾಜಕೀಯಕ್ಕೆ ಸೀಮಿತವಾಗಿತ್ತು. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. 1999ರ ಸುಷ್ಮಸ್ವರಾಜ್ ಚುನಾವಣೆ ಬಳಿಕ ಬಿಜೆಪಿ ಗಟ್ಟಿಯಾಗಿದೆ. ಸುಷ್ಮಸ್ವರಾಜ್ ಸೋತ್ರು ನಂತರ ನಿರಂತರವಾಗಿ ಬಿಜೆಪಿ ಬಳ್ಳಾರಿಯಲ್ಲಿ ಗೆದ್ದಿದೆ ಎಂದ ಅವರು, ಕಾಂಗ್ರೆಸ್ ನವರು ಶ್ರೀರಾಮುಲು ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸೋ ಪ್ಲಾನ್ ಮಾಡ್ತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡೋದಿಲ್ಲ ಎಂದರು.

ಇದನ್ನೂ ಓದಿ : ವರಿಷ್ಠರ ಸೂಚನೆಯಂತೆ ಲೋಕಸಭೆಗೆ ಸ್ಪರ್ಧೆ, ಸಮೀಕ್ಷೆ ವರದಿ ಆಧಾರದಲ್ಲಿ ಟಿಕೆಟ್ ಸಿಕ್ಕಿದೆ: ಬೊಮ್ಮಾಯಿ ಸ್ಪಷ್ಟನೆ

Last Updated :Mar 14, 2024, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.