ETV Bharat / state

ಪಂಚಾಯಿತಿ ಅನುಮತಿ ಕೊಟ್ಟರೂ ಸರ್ಕಾರದಿಂದಲೇ ವಿವಾದ: ಅಶ್ವತ್ಥನಾರಾಯಣ

author img

By ETV Bharat Karnataka Team

Published : Jan 30, 2024, 4:36 PM IST

ಕೆರೆಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದೇ ಧ್ವಜ ಹಾರಿಸಿದ್ದಾರೆ ಎಂದು ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ
ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ

ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ

ಬೆಂಗಳೂರು : ಅದು ಗ್ರಾಮಸ್ಥರೇ ಹಣ ಸೇರಿಸಿ ನಿಲ್ಲಿಸಿದ ಧ್ವಜಸ್ತಂಭ. ಪಂಚಾಯತ್ ಕೂಡ ರಾಷ್ಟ್ರಧ್ವಜ, ನಾಡಧ್ವಜ, ಭಗವಾಧ್ವಜ ಹಾರಿಸಲು ಅನುಮತಿ ಕೊಟ್ಟಿದೆ. ಆದರೂ ಸರ್ಕಾರವೇ ವಿವಾದ ಮಾಡುತ್ತಿದೆ. ಇವರು ಸಂವಿಧಾನ ಜಾಗೃತಿ ಸಪ್ತಾಹ ಮಾಡುತ್ತಾರೆ. ಈ ಸರ್ಕಾರದವರು ಸಂವಿಧಾನ ಗೌರವಿಸುತ್ತಾರಾ? ಇವರಿಗೆ ಮೊದಲು ಜಾಗೃತಿ ಮೂಡಿಸಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಟೀಕಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೆ ಸಂವಿಧಾನ ಕುರಿತ ಪರಿಜ್ಞಾನ ಇಲ್ಲ. ಇವರು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಕೆರೆಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದೇ ಧ್ವಜ ಹಾರಿಸಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ನೊಟೀಸ್​ ಕೊಡಬೇಕಿತ್ತು ತಾನೇ?. ಈಗಲಾದರೂ ಸರ್ಕಾರ ಗ್ರಾಮಸ್ಥರ ಭಾವನೆಗೆ ಗೌರವ ಕೊಡುವ ಕೆಲಸ ಮಾಡಲಿ. ಏಕಾಏಕಿ ಮುಂಜಾನೆ ಹೋಗಿ ಭಗವಾಧ್ವಜ ಇಳಿಸಿದ್ದು ಸರಿಯೇ?. ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯೇ?. ಸ್ಥಳೀಯರು ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಏಕೆ ಎಫ್‍ಐಆರ್ ದಾಖಲು ಮಾಡಿಲ್ಲ ಎಂದು ಕೇಳಿದ್ದಾರೆ. ರಾಷ್ಟ್ರಧ್ವಜವನ್ನು ಪೂರ್ತಿ ಏರಿಸಿಲ್ಲ. ಇದೇನು ಸರ್ಕಾರವೇ? ಯಾವ ರೀತಿ ನಡವಳಿಕೆ ಇದು? ಇದೊಂದು ತುಘಲಕ್ ಸರ್ಕಾರ. ಕಾನೂನನ್ನು ಇವರು ಗೌರವಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ಮಂಡ್ಯದ ಕೆರೆಗೋಡಿಗೆ ಸ್ಥಳೀಯ ಸಂಸದೆ ಸುಮಲತಾ ಯಾಕೆ ಹೋಗಿಲ್ಲ ಅಂತ‌ ನಾನು ಚರ್ಚೆ ಮಾಡಿಲ್ಲ. ಪಕ್ಷಾತೀತವಾಗಿ ಅಲ್ಲಿ ಹೋರಾಟ ನಡೆದಿದೆ. ಆ ವಿಚಾರದಲ್ಲಿ ಇಡೀ ಸಮಾಜ ಒಟ್ಟಾಗಿದೆ. ಭಗವಾಧ್ವಜಕ್ಕೆ ಕಾಂಗ್ರೆಸ್ ಬಿಟ್ಟು ಎಲ್ಲರೂ ಗೌರವ ಕೊಡುತ್ತಾರೆ. ಇಡೀ ನಾಡಿನಲ್ಲಿ ಎಷ್ಟು ಧ್ವಜ ಕಂಬಗಳಿವೆ. ಅಲ್ಲೆಲ್ಲ ಹೋಗಿ ನೋಡಿಕೊಂಡು ಬಂದಿದ್ದಾರಾ?. ಕಾನೂನು ಪ್ರಕಾರ ಕ್ರಮ‌ ಕೈಗೊಳ್ಳಬಹುದಿತ್ತು. ಗ್ರಾಮಸ್ಥರು ದೂರು ನೀಡಿದ್ದಾರೆ. ಇನ್ನೂ ಏಕೆ ಎಫ್ಐಆರ್ ಮಾಡಿಲ್ಲ. ಯಾವಾಗ ಬೇಕಾದರೂ ರಾಷ್ಟ್ರ ಧ್ವಜ ಹಾರಿಸಬಹುದಾ? ಸಂವಿಧಾನಕ್ಕೆ ಗೌರವ ಇದೆಯಾ? ಕೆರೆಗೋಡು ಜನರು ಕಾಂಗ್ರೆಸ್ ಶಾಸಕರನ್ನ ಆಯ್ಕೆ ಮಾಡಿದ್ದಾರೆ. ಅವರು ಜನರಿಗೆ ಗೌರವ ನೀಡಿಲ್ಲ. ಸಂಸದರು ಏಕೆ ಹೋಗಿಲ್ಲ ಎಂದು ಅವರೇ ಹೇಳಬೇಕು. ಕಾಂಗ್ರೆಸ್​ನವರು ರಾಂಗ್ ವೇ ಹೆಜ್ಜೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರ ಗಮನ ಸೆಳೆದಿದ್ದೇವೆ: ಕಾಂಗ್ರೆಸ್ ಸರ್ಕಾರ ಉನ್ನತ ಶಿಕ್ಷಣದಲ್ಲಿ ಗೊಂದಲ ಏರ್ಪಡಿಸಿದೆ. ಕಾಲಕಾಲಕ್ಕೆ ಕೆಲ ನಿರ್ಣಯ ಮಾಡುವುದು ಬಿಟ್ಟು, ರಾಜಕೀಯ ಮಾಡುತ್ತಿದೆ. ಈ ಬಗ್ಗೆ ರಾಜ್ಯಪಾಲರ ಗಮನ ಸೆಳೆದಿದ್ದೇವೆ. ಪಬ್ಲಿಕ್, ಸ್ಟೇಟ್ ಯೂನಿವರ್ಸಿಟಿಗಳಲ್ಲಿ ಕುಲಪತಿಗಳ ಸ್ಥಾನ ತೆರವಾಗಿದೆ. ಮಂಗಳೂರು, ರಾಣಿ ಚೆನ್ನಮ್ಮ, ವಿಜಯನಗರ, ಕುವೆಂಪು, ತೋಟಗಾರಿಕೆ ವಿವಿ ಬಾಗಲಕೋಟೆ ವಿವಿಗಳಲ್ಲಿ ಕುಲಪತಿಗಳ ಸ್ಥಾನ ಖಾಲಿ ಆಗಿದೆ. ಆದರೂ ನೇಮಕ ಮಾಡುವಲ್ಲಿ ವಿಳಂಬವಾಗಿದೆ ಎಂದಿದ್ದಾರೆ.

ವೇತನ ಕೊಡದೆ ನಿರ್ಲಕ್ಷ್ಯ ಮಾಡಿದೆ: ನೂತನ ವಿವಿಗಳಿಗೆ ಕುಲಪತಿಗಳ ನೇಮಕ ಮಾಡಿದ್ದೆವು. ಆದರೆ, ಅಲ್ಲಿನ ಸಿಬ್ಬಂದಿಗೆ ಹತ್ತು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಎರಡು ಕೋಟಿ ವೇತನ ಕೊಡದೇ ನಿರ್ಲಕ್ಷ್ಯ ಮಾಡಿದೆ. ಹೀಗಾದರೆ ಸಮಾಜ ಕಟ್ಟೋಕೆ ಹೇಗೆ ಸಾಧ್ಯ? ಉನ್ನತ ಶಿಕ್ಷಣ ಕ್ಷೇತ್ರವನ್ನು ಈ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ವರ್ಷಕ್ಕೆ ಎರಡು ಕೋಟಿ ಹಣ ಬಿಡುಗಡೆ ಮಾಡಲು ಇವರಿಗೆ ಆಸಕ್ತಿ ಇಲ್ಲ. ಯಾವುದೂ ಯಶಸ್ವಿ ಆಗಬಾರದು ಅನ್ನೋ ದುರುದ್ದೇಶದಿಂದ ಹಣ ಬಿಡುಗಡೆ ಮಾಡಿಲ್ಲ. ಇವರು ಮಾಡಲ್ಲ, ಮಾಡಿರೋದನ್ನ ಮುಂದಕ್ಕೆ ತೆಗೆದುಕೊಂಡು ಹೋಗಿಲ್ಲ ಎಂದು ಟೀಕಿಸಿದ್ದಾರೆ.

ಕುಲಪತಿಗಳ ನೇಮಕ ತಕ್ಷಣವೇ ಮಾಡಬೇಕು. ಏಳು ವಿವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಸಂಶೋಧನೆ, ಅಭಿವೃದ್ಧಿಗೆ ಹಣದ ಅವಶ್ಯಕತೆ ಇದೆ. ರಾಜ್ಯಪಾಲರಿಗೆ ಮನವಿ ಕೂಡ ಕೊಡಲಿದ್ದೇವೆ‌. ಹಿಂದೆ ನಮ್ಮ‌ ಸರ್ಕಾರ ಇದ್ದಾಗ ಹಣ ಮೀಸಲಿಟ್ಟಿದ್ದೆವು. ಬಜೆಟ್‌ನಲ್ಲಿ ಪ್ಲಾನ್ ಆಫ್ ಆ್ಯಕ್ಷನ್ ಮಾಡಿದ್ದೇವೆ. ಅದನ್ನ ಈ ಸರ್ಕಾರ ಮುಂದುವರೆಸುತ್ತಿಲ್ಲ. ಖಾಲಿ ಇರುವ ವಿವಿಗಳ ಕುಲಪತಿಗಳ ನೇಮಕ ಏಕೆ ಆಗಿಲ್ಲ ಅಂತ ಸಿಎಂ ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹನುಮಧ್ವಜ ವಿವಾದ: ನಾಳೆ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.