ETV Bharat / state

ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ಪ್ರಶಂಸನಾ ಪತ್ರ ವಿತರಿಸಿದ ಸಿಎಂ

author img

By ETV Bharat Karnataka Team

Published : Mar 1, 2024, 3:07 PM IST

Appreciation letter to the family of organ donor
ಅಂಗಾಂಗ ದಾನಿಗಳ ಕುಟುಂಬಕ್ಕೆ ಪ್ರಶಂಸನಾ ಪತ್ರ

ಅಂಗಾಂಗ ದಾನಿಗಳ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ ಪ್ರಶಂಸನಾ ಪತ್ರಗಳನ್ನು ಹಸ್ತಾಂತರಿಸಿದರು.

ಅಂಗಾಂಗ ದಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಅಂಗಾಂಗ ದಾನಿಗಳ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ ಪ್ರಶಂಸನಾ ಪತ್ರಗಳನ್ನು ನೀಡಿ, ಸಂತೈಸಿ ಧೈರ್ಯ ತುಂಬಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, "ಒಬ್ಬರ ಜೀವ ಹೋದ ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸುವ ಬಗ್ಗೆ ಯೋಚಿಸುವುದು ಸಾಮಾನ್ಯ ಸಂಗತಿಯಲ್ಲ. ಅಂಗಾಂಗ ದಾನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೆಚ್ಚಿನ ಒತ್ತು ನೀಡಿದ್ದಾರೆ" ಎಂದು ತಿಳಿಸಿದರು.

Appreciation letter to the family of organ donor
ಅಂಗಾಂಗ ದಾನಿಗಳ ಕುಟುಂಬಕ್ಕೆ ಪ್ರಶಂಸನಾ ಪತ್ರ

"ದೇಶದಲ್ಲಿಯೇ ಇಂದು ಕರ್ನಾಟಕ ಅಂಗಾಂಗ ದಾನದಲ್ಲಿ ಎರಡನೇ ಸ್ಥಾನದಲ್ಲಿದೆ. ದಾನಿಗಳ ಕುಟುಂಬಕ್ಕೆ ಯಾವುದೇ ತೊಂದರೆಗಳಾದಂತೆ ಸರ್ಕಾರ ಕೂಡ ನೋಡಿಕೊಳ್ಳಲಿದೆ. ಅಂಗಾಂಗ ದಾನಿಗಳ ಪರ ಸರ್ಕಾರ ನಿಲ್ಲಲಿದೆ" ಎಂದು ಹೇಳಿದರು.

ಅಪಘಾತಕ್ಕೀಡಾದ ಶರವಣ ಅವರ ಪತ್ನಿ ಪ್ರಶಂಸನಾ ಪತ್ರ ಸ್ವೀಕರಿಸುವಾಗ ಕಣ್ಣೀರಿಟ್ಟರು. ಇದೇ ವೇಳೆ, ಕೊಲೆಗೀಡಾದ ರಾಮನಗರದ ಕೆ.ಜಿ.ನವೀನ್‌ ಕುಟುಂಬದವರಿಗೆ ನ್ಯಾಯ ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.

"ನೀವು ಕೈಗೊಂಡ ನಿರ್ಧಾರ ಸುಲಭವಲ್ಲ. ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ" ಎಂದು ಸಿಎಂ ಮೆಚ್ಚುಗೆಯ ನುಡಿಗಳನ್ನಾಡಿದರು. "ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ" ಎಂದು ಧೈರ್ಯ ತುಂಬಿದರು. ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ಕೊಟ್ಟರು.

Appreciation letter to the family of organ donor
ಅಂಗಾಂಗ ದಾನಿಗಳ ಕುಟುಂಬಕ್ಕೆ ಪ್ರಶಂಸನಾ ಪತ್ರ

ಇದನ್ನೂ ಓದಿ: ಉಚಿತ ಶಿಕ್ಷಣ-ಆರೋಗ್ಯ ಗ್ಯಾರಂಟಿ ತನ್ನಿ, ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರ ನೇಮಿಸಿ: ಸರ್ಕಾರಕ್ಕೆ ವಿಶ್ವನಾಥ್ ಸಲಹೆ

ಇದಕ್ಕೂ ಮುನ್ನ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, "ಅಂಗಾಂಗ ದಾನ ಕೋರಿ ನೋಂದಾಯಿಸಿಕೊಂಡವರ ಸಂಖ್ಯೆ 8,000ಕ್ಕೂ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಕೇವಲ 178 ಅಂಗಾಂಗ ದಾನ ನಡೆದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಇದು ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ: ಚಿತ್ರರಂಗ, ರಾಜಕೀಯ ಗಣ್ಯರಿಂದ ಅಂತಿಮ ನಮನ

"ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸನಾ ಪತ್ರ ನೀಡಲಿದ್ದಾರೆ. ಒಬ್ಬ ವ್ಯಕ್ತಿ ಅಂಗಾಂಗ ದಾನದ ಮೂಲಕ ಎಂಟು ಜನರಿಗೆ ಜೀವದಾನ ಮಾಡಬಹುದು" ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌ ಹಾಗೂ ಆಯುಕ್ತ ಡಿ.ರಂದೀಪ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.