ETV Bharat / entertainment

ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ: ಚಿತ್ರರಂಗ, ರಾಜಕೀಯ ಗಣ್ಯರಿಂದ ಅಂತಿಮ ನಮನ

author img

By ETV Bharat Karnataka Team

Published : Mar 1, 2024, 11:43 AM IST

Updated : Mar 1, 2024, 1:12 PM IST

ನಿವೃತ್ತ ಐಎಎಸ್​ ಅಧಿಕಾರಿಯಾಗಿದ್ದ ಕೆ. ಶಿವರಾಮ್​ ಅವರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದು, ಎರಡೂ ಕ್ಷೇತ್ರಗಳ ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸುತ್ತಿದ್ದಾರೆ.

K Shivaram last respect in Bengaluru Ravindra Kalakshethra
ನಟ ಕೆ.ಶಿವರಾಮ್​ ಅಂತಿಮ ದರ್ಶನ ಪಡೆಯುತ್ತಿರುವ ಚಿತ್ರರಂಗ, ರಾಜಕೀಯ ಗಣ್ಯರು

ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ

ಬೆಂಗಳೂರು: ಗುರುವಾರ ಇಹಲೋಕ ತ್ಯಜಿಸಿದ ನಟ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ಕೆ. ಶಿವರಾಮ್​ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಶಿವರಾಮ್​ ಅವರ ಅಂತಿ ದರ್ಶನ ಪಡೆಯುತ್ತಿದ್ದಾರೆ.

ಶಿವರಾಮ್ ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕೆಂಗೇರಿಯ ಛಲವಾದಿ ಮಹಾಸಭಾ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಬೆಂಗಲಿಗರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಬೆಂಗಲಿಗರು ಸರ್ಕಾರಕ್ಕೂ ಮನವಿ ನೀಡಿದ್ದಾರೆ. ಸಚಿವ ಹೆಚ್ ಸಿ ಮಹಾದೇವಪ್ಪ ಅವರಿಗೆ ಮನವಿ ಮಾಡಿದ್ದಾರೆ. ಸಚಿವರು ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರದಿಂದ ಅನುಮತಿ ಸಿಕ್ಕರೆ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಲ್ಲದಿದ್ದರೆ, ಬಿಡದಿಯಲ್ಲಿರುವ ಶಿವರಾಮ್ ಅವರ ಜಮೀನಿನಲ್ಲಿ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ.

ಪ್ರತಿಭಟನೆ

ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, "ಕನ್ನಡದಲ್ಲಿ ಐಎಎಸ್​​ ಪರೀಕ್ಷೆ ಬರೆದು ಕನ್ನಡಿಗರ ಮನಸ್ಸು ಗೆದ್ದವರು ಶಿವರಾಮ್​. ನಾನು ಸುಮಾರು 50 ರಿಂದ 75 ಸಮಾರಂಭಗಳಲ್ಲಿ ಅವರನ್ನು ಗೌರವಿಸಿದ್ದೆ. 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದ ಸಬ್ಜೆಕ್ಟ್ ನನ್ನ ಬಳಿ ಇತ್ತು. ನಾಗತಿಹಳ್ಳಿ ಅವರು ಕೇಳಿದಾಗ ಬಿಟ್ಟುಕೊಟ್ಟಿದ್ದೆ. ಶಿವರಾಮ್​ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಸಂತಾಪ ಸೂಚಿಸಿದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ, "ಶಿವರಾಮ್​ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆನೇಕಲ್, ದಾವಣಗೆರೆ ಭಾಗಗಳಲ್ಲಿ ಬಡವರಿಗೆ ಸಾಕಷ್ಟು ನೆರವಾಗಿದ್ದಾರೆ. ಎಲ್ಲರಿಗೂ ಗೌರವ ನೀಡುತ್ತಿದ್ದರು. ಅವರ ಪರ ನನ್ನಿಂದ ಸಾಧ್ಯವಾದ ಕಾರ್ಯಗಳನ್ನು ಮಾಡುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಹೇಳಿದರು.

ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, "ಮೂರು ವರ್ಷ ಅವರೊಟ್ಟಿಗೆ ಟ್ರಾವೆಲ್ ಮಾಡಿದ್ದೆ. ಟೈಗರ್ ಸಿನಿಮಾಗಾಗಿ ನಾನು ಕೆಲಸ ಮಾಡಿದ್ದೆ. ನನ್ನ ಸಹೋದರ ನಂದ ಅದನ್ನು ಡೈರೆಕ್ಟ್ ಮಾಡಿದ್ದ. ಶಿವರಾಮ್​​ ಅವರಿಗೆ ಬೇರೆ ಬೇರೆ ಲುಕ್ಸ್ ಟ್ರೈ ಮಾಡಿದ್ದೆವು. ಒಳ್ಳೆಯ ಪ್ರೊಡಕ್ಷನ್ ಹೌಸ್ ಮಾಡೋಣ ಅಂದಿದ್ದರು. ಇತ್ತೀಚೆಗೆ ಅವರೊಟ್ಟಿಗೆ ಮಾತಾಡಿದ್ದೆ. ನಿಜಕ್ಕೂ ನೋವಾಗುತ್ತಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಕಂಬನಿ ಮಿಡಿದರು.

ಕೆ.ಶಿವರಾಮ್ ಅಂತಿಮ ದರ್ಶನ ಪಡೆದ ನಟ ಹಾಗೂ ನಿರ್ದೇಶಕ ಮದನ್ ಪಟೇಲ್, "ನನ್ನ ಹಾಗೂ ಶಿವರಾಮ್​ ನಡುವಿನ ಸ್ನೇಹ 3 ದಶಕದ್ದಾಗಿದೆ. ಬಡವರ ಮೇಲೆ ಅಪಾರ ಕಾಳಜಿ ಇದ್ದವರಾಗಿದ್ದರು. ಸ್ವಾಭಿಮಾನದ ಸಂಕೇತವಾಗಿದ್ದ ಅವರು, ದಲಿತರಲ್ಲಿ ಸ್ವಾಭಿಮಾನ ಎತ್ತಿ ಹಿಡಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ" ಎಂದು ತಿಳಿಸಿದರು.

ಛಲವಾದಿ ಮಹಾಸಭಾ ಪ್ರತಿಭಟನೆ: ಛಲವಾದಿ ಮಹಾಸಭಾ ಸಂಘದವರು ಕೆ ಶಿವರಾಮ್ ಪಾರ್ಥಿವ ಶರೀರದ ಮುಂದೆ ಪ್ರತಿಭಟನೆ ನಡೆಸಿದರು. ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ನಿನ್ನೆ ಕೆಲ ರಾಜಕಾರಣಿಗಳಿಗೆ ಮನವಿ ಪತ್ರ ನೀಡಲಾಗಿತ್ತು. ಆದರೆ ಸರ್ಕಾರದ ವತಿಯಿಂದ ಯಾವುದೇ ಸ್ಪಂದನೆ ಇಲ್ಲ. ಈ ಕಾರಣಕ್ಕೆ ಛಲವಾದಿ ಸಂಘಟನೆಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ಛಲವಾದಿ ಸಂಘಟನೆಯ ಹಂಸರಾಜ್ ಹೇಳಿದ್ದಾರೆ.

ಇದನ್ನೂ ಓದಿ: SSLC ಫೇಲ್, IAS ಪಾಸ್: ಕಷ್ಟದ ದಿನಗಳನ್ನು ಮೆಟ್ಟಿ ನಿಂತು ಗೆದ್ದ ಹಠವಾದಿ ಕೆ.ಶಿವರಾಮ್

Last Updated : Mar 1, 2024, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.