ETV Bharat / state

ಈ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ, ಚುನಾವಣೆ ನಂತರ ಕಾಂಗ್ರೆಸ್​ ಗ್ಯಾರಂಟಿಗಳು ಬಂದ್ ಆಗಲಿವೆ: ಜೋಶಿ ಭವಿಷ್ಯ - Lok Sabha Election 2024

author img

By ETV Bharat Karnataka Team

Published : Apr 6, 2024, 3:58 PM IST

Updated : Apr 6, 2024, 4:12 PM IST

BJP candidate Prahlad Joshi spoke to ETV Bharat.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಈಟಿವಿ ಭಾರತ್​ದೊಂದಿಗೆ ಮಾತನಾಡಿದರು.

ಭಾರತವನ್ನು ಜಾಗತಿಕವಾಗಿ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ತರುತ್ತೇವೆ ಅನ್ನೋದು ನಮ್ಮ ಗ್ಯಾರಂಟಿ. ಎಲ್ಲರಿಗೂ ಆಹಾರ ಭದ್ರತೆ ಒದಗಿಸುವುದು ನಮ್ಮ ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಈಟಿವಿ ಭಾರತದೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ನನ್ನ ವಿರುದ್ಧ ಪ್ರತಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ. ನಾನು ಅದರ ಬಗ್ಗೆ ಮಾತನಾಡುವದಿಲ್ಲ. ನಮ್ಮ ಕಾರ್ಯತಂತ್ರವನ್ನು ನಾವು ಚೆನ್ನಾಗಿ ಮಾಡುತ್ತಿದ್ದೇವೆ. ಷಡ್ಯಂತ್ರಕ್ಕಿಂತ ರಾಜಕೀಯ ವಿರೋಧಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರಲ್ಲಿಂದು ಈಟಿವಿ‌ ಭಾರತದೊಂದಿಗೆ ಮಾತನಾಡಿದ ಅವರು, ಷಡ್ಯಂತ್ರ ಮೀರಿ ನನಗೆ ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜನರು ನನಗೆ ಆಶೀರ್ವಾದ ಮಾಡ್ತಾರೆ. ಪ್ರತಿ ಸಾರಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದ್ರು, ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಜನ ನಮ್ಮ ಪರವಾಗಿ, ಮೋದಿ ಅವರ ಪರವಾಗಿದ್ದಾರೆ ಎಂದರು.

ಹಿಂದಿನಗಿಂತ ಈ ಬಾರಿ ಹೆಚ್ಚು ಲೀಡ್​ದಲ್ಲಿ ಗೆಲ್ಲುವೆ: ಲಿಂಗಾಯತ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರು ನನಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ಯಾವುದೇ ಲಿಂಗಾಯತ ಪ್ಲೇಕಾರ್ಡ್ ಕೆಲಸ ಮಾಡುವುದಿಲ್ಲ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳು ಬಿಜೆಪಿಗೆ ಬರಲಿವೆ. ಕಾಂಗ್ರೆಸ್ ಪ್ರತಿಸ್ಪರ್ಧಿಗಿಂತ ಅತ್ಯಧಿಕ ಲೀಡ್​​ನಿಂದ ಗೆಲುವು ಸಾಧಿಸುವ ವಿಶ್ವಾಸವನ್ನು ಜೋಶಿ ವ್ಯಕ್ತಪಡಿಸಿದರು.

ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮಾತ್ರ ಇವೆ, ಗ್ಯಾರಂಟಿಯೇ ಇಲ್ಲ. ಈ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲದಂತಾಗಿದೆ.‌ ಈ ಚುನಾವಣೆ ಆದ ನಂತರ ಕಾಂಗ್ರೆಸ್​ನ ಎಲ್ಲಾ ಗ್ಯಾರಂಟಿಗಳು ಬಂದ್ ಆಗಲಿವೆ. ನಾವು ಭಾರತವನ್ನು ಜಾಗತಿಕವಾಗಿ ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ತರುತ್ತೇವೆ, ಎಲ್ಲರಿಗೂ ಕುಡಿಯುವ ನೀರು, ಆಹಾರ ಭದ್ರತೆ ಕೊಡುವುದು ನಮ್ಮ ಗ್ಯಾರಂಟಿ. ನಾವು ಕೇವಲ ಅಧಿಕಾರಕ್ಕೆ ಬರಲು ಗ್ಯಾರಂಟಿ ಕೊಟ್ಟಿಲ್ಲ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದೇ ನಮ್ಮ ಸರ್ಕಾರದ ಗ್ಯಾರಂಟಿ ಎಂದು ಕೇಂದ್ರದ ಸಾಧನೆಯನ್ನು ಸಚಿವರು ವಿವರಿಸಿದರು.

ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ. ಈ ದೇಶದ ಬಡವರಿಗೆ, ಮಹಿಳೆಯರಿಗೆ, ಯುವಕರಿಗೆ, ಹಿಂದುಳಿದ ವರ್ಗಗಳಿಗೆ ಮೋದಿ ಏನು ಅಭಿವೃದ್ಧಿ ಕೊಡುಗೆ ನೀಡಿದ್ದಾರೆ ಅನ್ನುವುದು ಪ್ರತಿಯೊಬ್ಬ ಮತದಾರರಿಗೂ ಗೊತ್ತಿದೆ ಎಂದು ಹೇಳಿದರು. ಇದೇ ವೇಳೆ ದಿಂಗಾಲೇಶ್ವರ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಅವರು ನಿರಾಕರಿಸಿದರು.

ಅಧಿಕಾರಕ್ಕೆ ಬರಲ್ಲ ಆದ್ರೂ ಕಾಂಗ್ರೆಸ್ ಬೇಕಾಬಿಟ್ಟಿ ಗ್ಯಾರಂಟಿ ಘೋಷಣೆ: ಕಾಂಗ್ರೆಸ್​​ನವರು ಭ್ರಷ್ಟಾಚಾರ ಮಾಡಿದ್ರು, ಇವರು ಬಡವರಿಗೆ ಏನೂ ಕೊಟ್ಟಿಲ್ಲ. ಅವರೇನು ಮಾಡಿದ್ರೂ ಜನ ನಂಬಲ್ಲ. ಅಧಿಕಾರಕ್ಕೆ ಬರಲ್ಲ ಅನ್ನುವ ಕಾರಣಕ್ಕೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಘೋಷಣೆ ಮಾಡ್ತಿದಾರೆ ಎಂದು ಜೋಶಿ ಟೀಕಿಸಿದರು.

ಪುಲ್ವಾಮಾ ದಾಳಿ, ಅಕ್ಕಿ ಬಗ್ಗೆ ಮಾತಾಡಿದಾಗ ನನಗೆ ಕನಿಕರ ಉಂಟಾಗುತ್ತೆ. ಪುಲ್ವಾಮಾ ದಾಳಿ ವೇಳೆ ಅಭಿನಂದನ್ ಸಿಕ್ಕಿ ಹಾಕಿಕೊಂಡಾಗ ಕಾಂಗ್ರೆಸ್​​ಗೆ ಖುಷಿಯಾಗಿತ್ತು. ಅವರನ್ನು ಪಾಕಿಸ್ತಾನದವರು ಸಾಯಿಸ್ತಾರೆ. ಅದನ್ನು ಮೋದಿ ತಲೆಗೆ ಕಟ್ಟಬೇಕು ಅಂತಾ ಕಾಯುತ್ತಿದ್ರು. ಆದ್ರೆ ಮೋದಿ‌ ಅದಕ್ಕಿಂತ‌ ಮುಂಚೆ ಹೋಗಿ ಎಚ್ಚರಿಕೆ ನೀಡಿದ್ರು. ಇದು ಕಾಂಗ್ರೆಸ್​​ಗೆ ತಿಳಿಯಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಹರಿಹಾಯ್ದರು.

ಮಂತ್ರಿಗಿರಿ ಉಳಿಸಿಕೊಳ್ಳಲು ಲಾಡ್ ಆರೋಪ: ಸಚಿವ ಸಂತೋಷ್​ ಲಾಡ್ ಅವರು ಮಂತ್ರಿಗಿರಿ ಉಳಿಸಿಕೊಳ್ಳಲು ಏನೇನೋ ಮಾತಾಡ್ತಾರೆ. ಅವರು ಉತ್ಸಾಹದಲ್ಲಿ ಮಾತಾಡುತ್ತಿದ್ದಾರೆ. ಅವರ ಮಂತ್ರಿಗಿರಿ ಉಳಿಯಿಲಿ‌ ಎಂದು ಪ್ರಾರ್ಥನೆ ‌ಮಾಡ್ತೀನಿ. ನೀವು ಸೋತರು ನಿಮ್ಮ ಮಂತ್ರಿಗಿರಿ ಉಳಿಯಲಿ‌ ಎಂದು ಲಾಡ್ ಹೇಳಿಕೆಗೆ ಜೋಶಿ ಅಪಹಾಸ್ಯ ಮಾಡಿದರು.

ಪ್ರಚಾರಕ್ಕೆ ಕುಮಾರಸ್ವಾಮಿ ಬರ್ತಾರೆ: ನನ್ನ‌ ಪರ ಪ್ರಚಾರಕ್ಕೆ ಮಂಡ್ಯ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಬರ್ತಾರೆ. ಹೋದ ಕಡೆಗಳಲ್ಲಿ ನಮಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಮೋದಿ ಪ್ರಧಾನಿ ಆಗಬೇಕೆಂದು ಜನ ತೀರ್ಮಾನ ‌ಮಾಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಇದನ್ನೂ ಓದಿ:'ಮಠದಲ್ಲಿ ಮತಯಾಚಿಸಿಲ್ಲ, ಪ್ರಕರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದೇನೆ': ಬಿ.ವೈ ರಾಘವೇಂದ್ರ - B Y Raghavendra

Last Updated :Apr 6, 2024, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.