ETV Bharat / state

ಅಡ್ಡ ಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಕ್ರಮ: ಆರ್. ಅಶೋಕ್

author img

By ETV Bharat Karnataka Team

Published : Feb 27, 2024, 7:41 PM IST

Updated : Feb 27, 2024, 8:25 PM IST

R Ashok and S T Somashekhar
ಆರ್​ ಅಶೋಕ್​ ಹಾಗೂ ಎಸ್​.ಟಿ. ಸೋಮಶೇಖರ್​

ಇಂದು ಬೆಳಗ್ಗೆ ಮಾತನಾಡಿದಾಗಲೂ ಇಬ್ಬರೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅಡ್ಡಮತದಾನ ಹಾಗೂ ಗೈರಾಗುವ ಮೂಲಕ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರ್​.ಅಶೋಕ್​ ಹೇಳಿದರು.

ಬೆಂಗಳೂರು: "ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿನ್ನೆ ಕೂಡ ಎಸ್. ಟಿ. ಸೋಮಶೇಖರ್ ತಮಗೆ ಕರೆ ಮಾಡಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇಂದು ನಡೆದ ರಾಜ್ಯಸಭೆ ಚುಆವಣೆಯ ಮತದಾನದ ವೇಳೆ ಅಡ್ಡ ಮತದಾನ ಮಾಡಿದ್ದಾರೆ. ಶಿವರಾಮ ಹೆಬ್ಬಾರ್ ಗೈರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ತಿರುಗಾಡುತ್ತಿದ್ದರು. ವಿಧಾನಸಭಾ ಚುನಾವಣೆ ನಡೆದು 9 ತಿಂಗಳಾಗಿಲ್ಲ. ಆಗಲೇ ಪಕ್ಷಾಂತರ ಮಾಡುವುದನ್ನು ಜನ ಕ್ಷಮಿಸುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

" ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಬೆಳಗ್ಗೆ ಕೂಡ ತಮ್ಮ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದಿದ್ದರು. ಈಗ ಅವರ ನಡವಳಿಕೆ ಪ್ರಶ್ನಾರ್ಹವಾಗಿದೆ. ಎಸ್. ಟಿ. ಸೋಮಶೇಖರ್ ಬಿಜೆಪಿಯಲ್ಲಿ ಸಚಿವರಾಗಿದ್ದರು. ಪ್ರಭಾವಿ ಜಿಲ್ಲೆಯಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಈಗ ಅಡ್ಡ ಮತದಾನ ಮಾಡಿ ಭಿನ್ನ ನಡೆ ಅನುಸರಿಸಿದ್ದಾರೆ" ಎಂದು ಅಶೋಕ್​ ಆಕ್ರೋಶ ವ್ಯಕ್ತಪಡಿಸಿದರು.

"ಅಡ್ಡ ಮತದಾನ, ಪಕ್ಷ ದ್ರೋಹದ ವಿರುದ್ಧ ಆಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲ ವಿವೇಕ ರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ. ಕಾನೂನು ತಜ್ಞರ ಜೊತೆ ಕೂಡ ಸಮಾಲೋಚನೆ ನಡೆಯುತ್ತಿದೆ. ಸಾಧ್ಯವಿರುವ ಎಲ್ಲಾ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದರು.

"ಈ ಇಬ್ಬರೂ ಶಾಸಕರಿಗೂ ವಿಪ್ ಜಾರಿ ಮಾಡಲಾಗಿತ್ತು. ಅವರ ಕಚೇರಿ ಹಾಗೂ ಮನೆಗಳಿಗೆ ವಿಪ್ ಕಳುಹಿಸಿರುವುದರ ಜೊತೆಗೆ ಆಪ್ತ ಸಹಾಯಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಪಕ್ಷದ ಚಿಹ್ನೆಯಡಿ ಗೆದ್ದು ದ್ರೋಹ ಮಾಡಿರುವುದನ್ನು ಮತದಾರರು ಕ್ಷಮಿಸಲ್ಲ" ಎಂದು ಆರ್​ ಅಶೋಕ್​ ಹೇಳಿದರು.

"ಎನ್‍ಡಿಎ ಅಭ್ಯರ್ಥಿಯಾಗಿರುವ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಸೋಲು ಯಾವುದೇ ಮುಜುಗರ ಉಂಟುಮಾಡಿಲ್ಲ. ಪ್ರಯೋಗಾತ್ಮಕವಾಗಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗಾಗಿ ಬಿಜೆಪಿ ಅಥವಾ ಜೆಡಿಎಸ್‍ನ ಸೋಲು ಎಂದು ಪರಿಗಣಿಸುವ ಅಗತ್ಯವಿಲ್ಲ" ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಅಡ್ಡಮತದಾನ ಮಾಡಿದ ಎಸ್​ಟಿ ಸೋಮಶೇಖರ್ ಮನೆ ಬಳಿ ಪ್ರತಿಭಟನೆ ಸಾಧ್ಯತೆ: ಭದ್ರತೆ ನೀಡಿದ ಪೊಲೀಸರು

Last Updated :Feb 27, 2024, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.