ಬೆಂಗಳೂರು: ತನ್ನ ಪ್ರಿಯತಮೆ ಜೊತೆ ಗೆಳೆತನ ಬೆಳೆಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಆರೋಪಿಗಳನ್ನ ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಹರ್ಷಿತ್ ಎಂಬುವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಶಾಂತ್ ಹಾಗೂ ಚಂದನ್ ಎಂಬುವರನ್ನು ಬಂಧಿಸಿದ್ದಾರೆ. ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ ಬಳಿ ಕಳೆದ ಏಪ್ರಿಲ್ 28ರಂದು ಈ ಕೃತ್ಯ ನಡೆದಿತ್ತು.
'ಬಿಕಾಂ ಪದವೀಧರ ಹರ್ಷಿತ್ ಎಂಬಾತ ಕೆಲಸಕ್ಕೆ ಹೋಗದೆ ಶಂಕರಪುರ ಬಳಿ ತಂದೆ ನಡೆಸುತ್ತಿದ್ದ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿನ ಡಯೋಗ್ನಾಸ್ಟಿಕ್ ಸೆಂಟರ್ವೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಚಿಲ್ಲರೆ ಹಣ ಕೇಳಲು ಹೋಗಿದ್ದಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಅದೇ ಗೆಳೆತನವು ಮೊಬೈಲ್ ನಂಬರ್ ವಿನಿಮಯಕ್ಕೆ ದಾರಿಯಾಗಿತ್ತು. ಕಾಲ ಕ್ರಮೇಣ ಪರಸ್ಪರರು ಸಂದೇಶಗಳನ್ನು ರವಾನಿಸಿಕೊಳ್ಳುತ್ತಿದ್ದರು.
ಇನ್ನು ಅವರಿಬ್ಬರ ಗೆಳೆತನ ವಿಷಯ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಪ್ರಿಯತಮ ಶಶಾಂಕ್ ಗಮನಕ್ಕೆ ಬಂದಿದೆ. ಇಬ್ಬರ ನಡುವಿನ ಸಂಬಂಧದ ಬಗ್ಗೆ ಅನುಮಾನ ಮೂಡಿಸಿಕೊಂಡಿದ್ದ ಆರೋಪಿಯು, ಯುವತಿ ಮೊಬೈಲ್ ಪರಿಶೀಲನೆ ವೇಳೆ ಚಾಟ್ ಮಾಡಿರುವುದನ್ನ ನೋಡಿದ್ದಾನೆ. ಮೊಬೈಲ್ ಚಾಟ್ನಲ್ಲಿ ಕೇವಲ ಸ್ನೇಹಿತರ ರೀತಿ ಸಂದೇಶಗಳಿದ್ದವು. ಅದನ್ನು ಸಹಿಸಿಕೊಳ್ಳಲು ಶಶಾಂಕ್ ಸಿದ್ಧವಿರಲಿಲ್ಲ. ಹರ್ಷಿತ್ಗೆ ಒಂದು ಗತಿ ಕಾಣಿಸಬೇಕೆಂದು ಶಶಾಂಕ್ ನಿರ್ಧರಿಸಿದ್ದ.
ಕಳೆದ ಏಪ್ರಿಲ್ 28ರಂದು ಸ್ನೇಹಿತ ಚಂದನ್ನನ್ನು ತಾತಾರುವ ಸ್ಥಳಕ್ಕೆ ಕರೆಸಿಕೊಂಡು ಮದ್ಯ ಸೇವಿಸಿದ್ದಾರೆ. ಬಳಿಕ ಲಾಂಗ್ ಜೊತೆಗೆ ಬೈಕ್ನಲ್ಲಿ ಹರ್ಷಿತ್ ಅಂಗಡಿಗೆ ತೆರಳಿ ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಹರ್ಷಿತ್ಗೆ ಎಡಗೈ, ಮುಂಗೈ ಹಾಗೂ ತೋಳಿನ ಭಾಗಗಳಲ್ಲಿ ಗಂಭೀರವಾಗಿ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಹರ್ಷಿತ್ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಕಲಬುರಗಿ: ಅನೈತಿಕ ಸಂಬಂಧದ ಶಂಕೆ; ಸಂಬಂಧಿ ಹತ್ಯೆ ಮಾಡಿ ಕಾರಿಗೆ ಬೆಂಕಿ, ಪತ್ನಿ ಕೊಲೆಗೂ ಯತ್ನ - Murder Case