ETV Bharat / state

ಮಾಂಗಲ್ಯ ಸರ ದರೋಡೆಗೆ ಯತ್ನ: ಕೈಯಲ್ಲಿದ್ದ ಸ್ಕ್ರೂಡ್ರೈವರ್​​ನಿಂದ ಸರಗಳ್ಳನ ಹಿಮ್ಮೆಟ್ಟಿಸಿದ ಗಟ್ಟಿಗಿತ್ತಿ

author img

By ETV Bharat Karnataka Team

Published : Feb 7, 2024, 6:51 PM IST

ಮಾಂಗಲ್ಯ ಸರ ಕಳವಿಗೆ ಯತ್ನ
ಮಾಂಗಲ್ಯ ಸರ ಕಳವಿಗೆ ಯತ್ನ

ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿಯ ಹೊರಭಾಗದಲ್ಲಿ ಖದೀಮನೋರ್ವ ಮಹಿಳೆಯ ಮಾಂಗಲ್ಯ ಸರವನ್ನು ಕದಿಯಲು ಯತ್ನಿಸಿದ್ದಾನೆ. ಆದ್ರೆ ದಿಟ್ಟತನದಿಂದ ಮಹಿಳೆ ಆತನನ್ನು ಹಿಮ್ಮೆಟ್ಟಿಸಿದ್ದಾಳೆ.

ದೊಡ್ಡಬಳ್ಳಾಪುರ : ಹೊಲದಲ್ಲಿ ಒಂಟಿಯಾಗಿದ್ದ ಮಹಿಳೆಯ ಮಾಂಗಲ್ಯ ಸರ ದೋಚಲು ಖದೀಮನೋರ್ವ ಯತ್ನಿಸಿದ್ದಾನೆ. ಆದರೆ ಇದರಿಂದ ಧೃತಿಗೆಡದ ಮಹಿಳೆ ತನ್ನ ಕೈಯಲ್ಲಿದ್ದ ಸ್ಕ್ರೂ ಡ್ರೈವರ್​ನಿಂದ ಸರಗಳ್ಳನ ಮೇಲೆ ದಾಳಿ ಮಾಡಿ, ಆತನನ್ನು ಅಲ್ಲಿಂದ ಓಡಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿಯ ಹೊರಭಾಗದಲ್ಲಿ ನಡೆದಿದೆ.

ಕಾಮನ ಅಗ್ರಹಾರದ ಶಾರದಮ್ಮ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸರಗಳ್ಳತನ ಯತ್ನ ನಡೆದಿದೆ. ನಿನ್ನೆ ಸಂಜೆ ಹೊಲದಲ್ಲಿ ಶಾರದಮ್ಮ ಕೆಲಸ ಮಾಡುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ವ್ಯಕ್ತಿ ಏಕಾಏಕಿ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆದರೆ ಆ ಮಹಿಳೆ ತನ್ನ ಕೈಯಲ್ಲಿದ್ದ ಸ್ಕ್ರೂ ಡ್ರೈವರ್​ನಿಂದ ಸರಗಳ್ಳನ ಮೇಲೆ ಹಲ್ಲೆ ನಡೆಸಿ ಓಡಿಸಿದ್ದಾರೆ.

ತಕ್ಷಣವೇ ಗ್ರಾಮಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸರಗಳ್ಳನನ್ನು ಹಿಡಿಯಲು ಕಾಯುತ್ತಿದ್ದ ವೇಳೆ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಗಳ್ಳನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ತುಮಕೂರು: ಚಿನ್ನ ಖರೀದಿ ನೆಪದಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ- ಸಿಸಿಟಿವಿ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.