ETV Bharat / state

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ 101 ಸೈಟುಗಳ ಹರಾಜು: 300 ಕೋಟಿ ಆದಾಯ ನಿರೀಕ್ಷೆ

author img

By ETV Bharat Karnataka Team

Published : Feb 8, 2024, 6:53 AM IST

Bangalore Development Authority
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ

ಬಿಡಿಎ 101 ಸೈಟುಗಳ ಮಾರಾಟಕ್ಕಾಗಿ ಫೆ.16 ರಂದು ಲೈವ್ ಬಿಡ್ಡಿಂಗ್ ಪ್ರಾರಂಭಿಸಲು ನಿರ್ಧರಿಸಿದೆ. ಇ - ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಪ್ರತಿ ನಿವೇಶನಕ್ಕೆ 4 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸುವ ಕುರಿತು ವೆಬ್​ಸೈಟ್​ದಲ್ಲಿ ಮಾಹಿತಿ ನೀಡಿದೆ.

ಬೆಂಗಳೂರು: ಇತ್ತೀಚೆಗೆ 66 ಸೈಟುಗಳ ಹರಾಜು ಮಾಡಿದ್ದ ಬಿಡಿಎ ಈಗ ಮತ್ತೆ ಅಭಿವೃದ್ಧಿಪಡಿಸಿದ 101 ಸೈಟುಗಳ ಮಾರಾಟಕ್ಕೆ ಮುಂದಾಗಿದೆ. 101 ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 300 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲು ಬೆಂಗಳೂರು ಅಭಿವದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಬನಶಂಕರಿ 6ನೇ ಹಂತ, ಅಂಜನಾಪುರ 9ನೇ ಬ್ಲಾಕ್, ಎಚ್‌ಎಎಲ್ ಲೇಔಟ್, ಎಚ್‌ಬಿಆರ್ 1ನೇ ಹಂತ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ 8ನೇ ಬ್ಲಾಕ್, ಆರ್‌ಪಿಸಿ ಲೇಔಟ್, ಎಂ ವಿಶ್ವೇಶ್ವರಯ್ಯ ಲೇಔಟ್ ಮತ್ತು ಜೆಪಿ ನಗರ 8ನೇ ಹಂತದಲ್ಲಿ ಇರುವ ನಿವೇಶನಗಳ ಮಾರಾಟಕ್ಕೆ ಮುಂದಾಗಿದೆ. ಇಲ್ಲಿನ 101 ನಿವೇಶನಗಳ ಮಾಹಿತಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಫೆಬ್ರವರಿ 16 ರಂದು ಲೈವ್ ಬಿಡ್ಡಿಂಗ್ ಪ್ರಾರಂಭಿಸಲು ನಿಗದಿಪಡಿಸಲಾಗಿದೆ. ಪ್ರತಿ ಚದರ ಮೀಟರ್‌ಗೆ 60,000 ರೂ ಮತ್ತು ಚದರ ಮೀಟರ್‌ಗೆ 2.02 ಲಕ್ಷ ರೂಪಾಯಿ ವರೆಗೆ ಮೂಲ ಬೆಲೆ ನಿಗದಿಪಡಿಸಲಾಗಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಪ್ರತಿ ನಿವೇಶನಕ್ಕೆ 4 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಬೇಕಿದೆ. ಇ - ಹರಾಜು ಮುಕ್ತಾಯವಾದ ಸಮಯದಿಂದ 72 ಗಂಟೆಗಳಲ್ಲಿ ಯಶಸ್ವಿ ಬಿಡ್‌ದಾರರು ಮೌಲ್ಯದ ಶೇ 25 ಅನ್ನು ಪಾವತಿಸಬೇಕಿದೆ. ಬಿಡಿಎಯಿಂದ ಹಂಚಿಕೆ ಪತ್ರ ಸ್ವೀಕೃತಿಯಾದ 45 ದಿನಗಳಲ್ಲಿ ಉಳಿದ ಶೇ 75 ರಷ್ಟು ಮೊತ್ತವನ್ನು ಪಾವತಿ ಮಾಡಬೇಕಿದೆ. ವಿಫಲ ಬಿಡ್‌ದಾರರಿಂದ ಸಂಗ್ರಹಿಸಿದ್ದ ಆರಂಭಿಕ ಠೇವಣಿ ನಾಲ್ಕು ಲಕ್ಷ ರೂಪಾಯಿಗಳನ್ನು ಪ್ರಾಧಿಕಾರವು ಒಂದು ತಿಂಗಳಿನಲ್ಲಿ ಅವರ ಖಾತೆಗಳಿಗೆ ಜಮಾ ಮಾಡಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

35 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೆರವುಗೊಳಿಸುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಅಂದಾಜು 35 ಕೋಟಿ ರೂ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.

ಬಿಡಿಎ ಆಯುಕ್ತ ಎನ್.ಜಯರಾಮ್ ನಿರ್ದೇಶನದಲ್ಲಿ ಹಾಗೂ ಆರಕ್ಷಕ ಅಧೀಕ್ಷಕ ಕೆ.ನಂಜುಂಡೇಗೌಡ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿನ ಪ್ರಾಧಿಕಾರದ 32.45 ಗುಂಟೆ ಜಮೀನಿನಲ್ಲಿ ಸ್ಥಳೀಯರು ಅನಧಿಕೃತ ನಿರ್ಮಿಸಿಕೊಂಡಿದ್ದ ಶೆಡ್​​ಗಳು, ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಹಾಗೂ ಆರಕ್ಷಕ ಉಪಾಧೀಕ್ಷಕ ಯು ಡಿ ಕೃಷ್ಣಕುಮಾರ್ ಮತ್ತು ಪೊಲೀಸ್ ಇನ್ಸ್​ಪೆಕ್ಟರ್ ಟಿ.ಸಂಜೀವರಾಯಪ್ಪ ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಗೊಳಿಸಲಾಗಿದೆ.

ಇದನ್ನೂಓದಿ:ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ರೂಪಿಸಿರುವ ವಿಧಾನ ತಿಳಿಸಲು ಬಿಡಿಎಗೆ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.