ETV Bharat / sports

ಸೇಡು ತೀರಿಸಿಕೊಂಡ ಸಿಎಸ್​ಕೆ: ಪಂಜಾಬ್​ ವಿರುದ್ಧ ಗೆದ್ದು ಮೂರನೇ ಸ್ಥಾನಕ್ಕೇರಿದ ಗಾಯಕ್ವಾಡ್​ ಪಡೆ - PBKS vs CSK

author img

By ETV Bharat Karnataka Team

Published : May 5, 2024, 5:52 PM IST

Updated : May 5, 2024, 8:00 PM IST

ವಿಕೆಟ್​ ಪಡೆದ ಖುಷಿಯಲ್ಲಿ ಪಂಜಾಬ್​ ತಂಡ
ವಿಕೆಟ್​ ಪಡೆದ ಖುಷಿಯಲ್ಲಿ ಪಂಜಾಬ್​ ತಂಡ ((Source: IPL X handle))

ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ್ದ ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 28 ರನ್​ಗಳ ಸೋಲು ಕಂಡಿದೆ.

ಧರ್ಮಶಾಲಾ: ಪ್ಲೇಆಫ್​ ಕನಸು ಜೀವಂತವಾಗಿರಿಕೊಳ್ಳಲು ಹೋರಾಟ ನಡೆಸಿದ ಪಂಜಾಬ್​ ಬೌಲಿಂಗ್​ನಲ್ಲಿ ಮಿಂಚಿ, ಬ್ಯಾಟಿಂಗ್​ ವೈಫಲ್ಯ ಕಂಡಿತು. ಇದರಿಂದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ 28 ರನ್​ಗಳ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದ ಚೆನ್ನೈ ಟೀಂ ಪಂಜಾಬ್ ವಿರುದ್ಧ ಇಂದು ಸೇಡು ತೀರಿಸಿಕೊಂಡಿದೆ.

ದೇಶದ ಸುಂದರ ಮೈದಾನವಾದ ಧರ್ಮಶಾಲಾದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್​ ಮಾಡಿದ ಸಿಎಸ್​ಕೆ 167 ರನ್​ಗಳ ಸಾಧಾರಣ ಗುರಿ ನೀಡಿತು. ಗಾಯಗೊಂಡ ಪತಿರಾನಾ ಗೈರಿನಲ್ಲಿ ಅದ್ಭುತ ಆಟ ಪ್ರದರ್ಶನ ತೋರಿದ ಬೌಲರ್ಸ್​, ಪಂಜಾಬ್​ ಅನ್ನು 139 ರನ್​ಗಳಿಗೆ ಕಟ್ಟಿಹಾಕಿ ಗೆಲುವು ತಂದರು.

ಬೌಲರ್​ಗಳಿಂದಲೇ ಉತ್ತಮ ಬ್ಯಾಟಿಂಗ್​: ಬೌಲಿಂಗ್​ನಲ್ಲಿ ಮಿಂಚಿದ್ದ ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್​ನಲ್ಲಿ ಠುಸ್​ ಆಯಿತು. ತಂಡದ ಐದು ಪ್ರಮುಖ ಬ್ಯಾಟರ್​ಗಳು ಒಂದಂಕಿ ದಾಟಲಿಲ್ಲ. ಶಶಾಂಕ್​ ಸಿಂಗ್​ 27, ಪ್ರಭಸಿಮ್ರಾನ್​ ಸಿಂಗ್​ 30 ರನ್​ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಜಾನಿ ಬೈರ್​ಸ್ಟೋವ್​ 7, ರಿಲೇ ರೋಸ್ಸೋ 0, ನಾಯಕ ಸ್ಯಾಮ್​ ಕರ್ರನ್​ 7, ಜಿತೇಶ್​ ಶರ್ಮಾ 0, ಅಶುತೋಶ್​ ಶರ್ಮಾ 3 ರನ್​ಗೆ ವಿಕೆಟ್ ನೀಡಿದರು.

ಬೌಲರ್​ಗಳಾದ ಹರ್​ಪ್ರೀತ್​ ಬ್ರಾರ್​ 17, ಹರ್ಷಲ್​ ಪಟೇಲ್​ 12, ರಾಹುಲ್​ ಚಹರ್​ 16, ಕಗಿಸೊ ರಬಾಡ 11 ರನ್​ ಗಳಿಸಿದರು. ಇದಕ್ಕೂ ಮೊದಲು ಹರ್ಷಲ್​ ಪಟೇಲ್​ ಮತ್ತು ರಾಹುಲ್​ ಚಹರ್​ ತಲಾ 3 ವಿಕೆಟ್​ ಕಿತ್ತು ಸಿಎಸ್​ಕೆ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಅರ್ಷದೀಪ್​ ಸಿಂಗ್​ 2 ವಿಕೆಟ್​ ಕಿತ್ತಿದ್ದರು.

ಜಡೇಜಾ ಸೂಪರ್​ ಆಲ್​ರೌಂಡರ್​ ಆಟ: ಟಿ20 ವಿಶ್ವಕಪ್​ನ ಭಾಗವಾಗಿರುವ ರವೀಂದ್ರ ಜಡೇಜಾ ತಾವ್ಯಾಕೆ ವಿಶ್ವದ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಬ್ಯಾಟಿಂಗ್​ ವೇಳೆ ತಂಡ ಕುಸಿದಾಗ 43 ರನ್​ ಕಲೆ ಹಾಕಿ ನೆರವಾಗಿದ್ದರು. ಬಳಿಕ ಬೌಲಿಂಗ್​ನಲ್ಲಿ ಪಂಜಾಬ್​ಗೆ ಮಾರಕವಾಗಿ ಪ್ರಮುಖ 3 ವಿಕೆಟ್​ ಕಿತ್ತರು.

ಈ ಗೆಲುವಿನ ಮೂಲಕ ಗಾಯಕ್ವಾಡ್​ ಪಡೆ 3ನೇ ಸ್ಥಾನಕ್ಕೇರಿತು. ಆಡಿದ 11 ಪಂದ್ಯಗಳಲ್ಲಿ 6 ಗೆದ್ದು 12 ಪಾಯಿಂಟ್​ ಹೊಂದಿದೆ. ಪಂಜಾಬ್​ ಕಿಂಗ್ಸ್​ 11 ರಲ್ಲಿ 4 ಗೆದ್ದು 8 ಪಾಯಿಂಟ್​ ಹೊಂದಿದ್ದು ಪ್ಲೇಆಫ್​ ಹಾದಿಯಿಂದ ಭಾಗಶಃ ಹೊರಬಿದ್ದಿತು.

ಸೊನ್ನೆ ಸುತ್ತಿದ ಧೋನಿ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಭಿಮಾನಿಗಳನ್ನು ರಂಜಿಸುವಲ್ಲಿ ವಿಫಲರಾದರು. ಕೊನೆಯ ಪಂದ್ಯದಲ್ಲೂ ಸೊನ್ನೆ ಸುತ್ತಿದ ಥಲಾ ಇಲ್ಲೂ ಮತ್ತೆ ಒಂದೂ ರನ್​ ಗಳಿಸಲು ಸಾಧ್ಯವಾಗದೆ ಎದುರಿಸಿದ ಮೊದಲ ಎಸೆತದಲ್ಲೇ ಔಟ್​ ಆದರು. ಇದರಿಂದ ಅಭಿಮಾನಿಗಳು ಭಾರೀ ನಿರಾಸೆಗೆ ಒಳಗಾದರು.

ಇದನ್ನೂ ಓದಿ: ಅಕ್ಟೋಬರ್​ 3 ರಿಂದ ಮಹಿಳಾ ಟಿ20 ವಿಶ್ವಕಪ್​ ಹಂಗಾಮ: ಭಾರತದ ಪಂದ್ಯಗಳು ಹೀಗಿವೆ - Womens T20 World Cup

Last Updated :May 5, 2024, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.