ETV Bharat / opinion

ಪಾಕಿಸ್ತಾನ ಚುನಾವಣಾ ಫಲಿತಾಂಶ ಮತ್ತು 'ವ್ಯವಸ್ಥೆ'ಯನ್ನು ಸೋಲಿಸಿದ ಪ್ರತಿಭಟನೆಯ ಕಥೆ

author img

By ETV Bharat Karnataka Team

Published : Feb 20, 2024, 5:30 PM IST

In Pakistan Elections Result, a Story of Defiance Nearly Beating the 'System'
ಪಾಕಿಸ್ತಾನ ಚುನಾವಣಾ ಫಲಿತಾಂಶ ಮತ್ತು 'ವ್ಯವಸ್ಥೆ'ಯನ್ನು ಸೋಲಿಸಿದ ಪ್ರತಿಭಟನೆಯ ಕಥೆ

ಇತ್ತೀಚಿನ ಪಾಕಿಸ್ತಾನದ ಚುನಾವಣೆಗಳ ಫಲಿತಾಂಶವು ಇಮ್ರಾನ್ ಖಾನ್ ಅವರ ವೃತ್ತಿಜೀವನವನ್ನು ಮಣ್ಣು ಮಾಡಲು ಎಲ್ಲವನ್ನೂ ಪ್ರಯತ್ನಿಸಿದ ರಾಜಕೀಯ ವ್ಯವಸ್ಥೆಗೆ ಕೆಲವು ಪ್ರಮುಖ ಸವಾಲುಗಳನ್ನು ಎಸೆದಿವೆ. ಈ ಕುರಿತು ಹಿರಿಯ ಪತ್ರಕರ್ತ ಸಂಜಯ್ ಕಪೂರ್ ಅವರ ಲೇಖನ ಇಲ್ಲಿದೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳು ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿವೆ. ವಿಶೇಷವಾಗಿ ಪ್ರಜಾಪ್ರಭುತ್ವವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ನಿರ್ವಹಿಸಬಹುದೆಂದು ಭಾವಿಸಿದವರಿಗೆ ಹೆಚ್ಚು ಅಚ್ಚರಿಯಾಗಿದೆ.

ಮೊದಲಿಗೆ ಕೆಚ್ಚೆದೆಯನ್ನು ಪ್ರದರ್ಶಿಸಿರುವ ಮತದಾರರು, ನಂತರದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಪಿಟಿಐ ನಾಯಕ ಇಮ್ರಾನ್ ಖಾನ್ ಅವರನ್ನು ಹಲವಾರು ಪ್ರಕರಣಗಳಲ್ಲಿ 20 ವರ್ಷಗಳ ಕಾಲ ಜೈಲಿನಲ್ಲಿ ಇರಿಸುವ, ಅವರ ಪಕ್ಷವನ್ನು ಸ್ಪರ್ಧಿಸದಂತೆ ನಿಷೇಧಿಸಿ, ಚಿಹ್ನೆಯನ್ನು ಕಸಿದುಕೊಳ್ಳುವ ಮೂಲಕ ಪಕ್ಷವನ್ನೇ ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯಲು ಸೇನೆಯ ನೇತೃತ್ವದಲ್ಲಿ ನಡೆದ ಅಸಾಧಾರಣ ಪ್ರಯತ್ನಗಳ ಹೊರತಾಗಿಯೂ ಈ ಫಲಿತಾಂಶ ಬಂದಿದೆ. ಇದು ಯಾವುದೂ ಕಾರ್ಯ ಸಾಧುವಾಗಲಿಲ್ಲ ಎಂದು ತೋರಿಸುತ್ತದೆ. ಪಾಕಿಸ್ತಾನದ ದಿನಪ್ರತಿಕೆ 'ಡಾನ್​' ತನ್ನ ಸಂಪಾದಕೀಯದಲ್ಲಿ ನಾಗರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಇನ್ಮುಂದೆ ಮತದಾರರಿಗೆ ಸ್ವೀಕಾರಾರ್ಹವಲ್ಲ ಎಂಬುದನ್ನು ಪ್ರಬಲ ವರ್ಗಗಳು ಅರಿತುಕೊಳ್ಳಬೇಕು ಎಂದು ಸೇನೆಯನ್ನು ದೂಷಿಸಿದೆ.

ಈ ಫಲಿತಾಂಶಗಳ ತೀಕ್ಷ್ಣ ಆಘಾತದಿಂದ ಸೇನೆಯು ದಿಗ್ಭ್ರಮೆಗೊಂಡಿರಬಹುದು. ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 93 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್‌ (ಪಿಎಂಎಲ್) 75 ಸ್ಥಾನಗಳನ್ನು ಗೆದ್ದಿದೆ. ಆದರೆ, ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಬಹುಮತದ ಹಕ್ಕು ಪ್ರತಿಪಾದಿಸಿದ್ದು, ವಿಧಾನಸಭೆಯಲ್ಲೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಾಗಿ ಎಂದು ಹೇಳಿಕೊಂಡಿವೆ. ಇದೇ ವೇಳೆ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಪಕ್ಷೇತರರಿಗೆ ಭರ್ಜರಿ ಹಣದ ಆಮಿಷವೊಡ್ಡಿರುವ ಕುದುರೆ ವ್ಯಾಪಾರದ ವರದಿಗಳೂ ಇವೆ. ಸ್ವತಂತ್ರ ಟಿಕೆಟ್‌ನಲ್ಲಿ ಹೋರಾಡಿದ್ದರಿಂದ ಈ ಪಕ್ಷೇತರರು ಪಿಎಂಎಲ್ (ಎನ್) ಅಥವಾ ಪಿಪಿಪಿ ಎರಡು ಪಕ್ಷಗಳಲ್ಲಿ ಒಂದನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.

ಇದರ ನಡುವೆ ಪಾಕಿಸ್ತಾನದಲ್ಲಿನ ಅಕ್ರಮ ಮತದಾನದ ಬಗ್ಗೆಯೂ ವರದಿಗಳಿಂದಾಗಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ಇಮ್ರಾನ್ ಖಾನ್ ಪದಚ್ಯುತಿಗೆ ಪಶ್ಚಿಮವು ಬೆಂಬಲ ನೀಡುತ್ತಿದೆ ಎಂದು ಪಿಟಿಐ ಆರೋಪಿಸಿತ್ತು. ಯುಎಸ್, ಯುಕೆ, ಇಯು (ಯೂರೋಪಿನ ಒಕ್ಕೂಟ) ಅಂತಹ ರಾಷ್ಟ್ರಗಳು ಫೆಬ್ರವರಿ 8ರಂದು ನಡೆದ ಮತದಾನದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಇದು ಪಾಕಿಸ್ತಾನದಲ್ಲಿ ಚುನಾವಣೆಗಳು ಎಷ್ಟು ಕೆಟ್ಟದಾಗಿ ನಡೆಸಲ್ಪಟ್ಟವು ಎಂಬುದಕ್ಕೆ ನಿದರ್ಶನವಾಗಿದೆ.

ಪಾಕಿಸ್ತಾನದ ಚುನಾವಣಾ ಆಯೋಗವು ಫಲಿತಾಂಶಗಳನ್ನು ಪ್ರಕಟಿಸಲು ತುಂಬಾ ಸಮಯ ತೆಗೆದುಕೊಂಡಿರುವುದನ್ನೂ ಹಲವು ಮಾಧ್ಯಮ ಸಂಸ್ಥೆಗಳು ಟೀಕಿಸಿವೆ. ವಿಳಂಬದ ಬಗ್ಗೆ ವಿವರಣೆ ನೀಡದೆ ಆಯೋಗವು ಇಂಟರ್​​ನೆಟ್ ಮತ್ತು ಮೊಬೈಲ್ ಟೆಲಿಫೋನ್ ಸೇವೆಯನ್ನು ನಿಷೇಧಿಸಿತ್ತು. ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ಮತ್ತು ಪಿಪಿಪಿ ಪಕ್ಷಕ್ಕೆ ಅನಗತ್ಯ ಲಾಭವನ್ನು ನೀಡಲು ಫಲಿತಾಂಶಗಳ ಎಣಿಕೆ ಮತ್ತು ಪ್ರಕಟಣೆಯನ್ನು ವಿಳಂಬ ಮಾಡಲಾಗಿದೆ ಎಂದು ಪಿಟಿಐ ಬೆಂಬಲಿಗರು ದೂರಿದ್ದರು. ಅಲ್ಲದೇ, ಸೇನೆಯ ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ ಅವರ ಅನೇಕ ಅಭ್ಯರ್ಥಿಗಳು ಸೋಲುತ್ತಿದ್ದರು. ಕೆಲ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಎಣಿಕೆಯಾದ ಮತಗಳು ಹೆಚ್ಚು ಎಂಬ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

ಆದಾಗ್ಯೂ, ಪ್ರಬಲ ಗುಂಪುಗಳ ಯಾವುದೇ ತಂತ್ರವು ಮತದಾರರು ತಮ್ಮ ಕೋಪವನ್ನು ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ. ವ್ಯವಸ್ಥೆಯು ಭಯದಿಂದ ಮತದಾರರನ್ನು ಓಲೈಸಲಾಗುವುದಿಲ್ಲ ಎಂಬುದು ಸಹ ಬಲವಾದ ಸಂಗತಿಯಾಗಿದೆ. ಇಮ್ರಾನ್ ಖಾನ್ ಒಬ್ಬ ಕಳಪೆ ಆಡಳಿತಗಾರರಾಗಿರಬಹುದು. ಆದರೆ, ಅವರು ಪಾಕಿಸ್ತಾನಕ್ಕಾಗಿ ಹೃದಯ ಬಡಿತದ ಹಿತಚಿಂತಕ ವ್ಯಕ್ತಿಯಾಗಿ ಕಂಡುಬಂದಿದ್ದಾರೆ. ನವಾಜ್ ಷರೀಫ್ ಅಥವಾ ಜರ್ದಾರಿಗಳು ಈ ಖ್ಯಾತಿಯನ್ನು ಹೊಂದಿಲ್ಲ.

ಆದರೂ, ನವಾಜ್ ಷರೀಫ್ ಮತ್ತು ಬಿಲಾವಲ್-ಜರ್ದಾರಿ ಕ್ಯಾಂಪ್ ನಡುವೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚು. ಈಗಿನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನೇತೃತ್ವದ ಸೇನೆಯು ಖಂಡಿತವಾಗಿಯೂ ಅವರನ್ನು ಬೆಂಬಲಿಸುತ್ತದೆ ಎಂದು ವರದಿಗಳು ಹೇಳುತ್ತವೆ. ಪಾಕಿಸ್ತಾನದ ಸೇನೆಯು ಅನೇಕ ವಿಧಗಳಲ್ಲಿ ರಾಷ್ಟ್ರಕ್ಕಿಂತ ದೊಡ್ಡದಾಗಿದೆ ಮತ್ತು ಇದನ್ನು ಪ್ರತಿಯೊಬ್ಬ ರಾಜಕಾರಣಿಯೂ ಅರಿತುಕೊಂಡಿದ್ದಾರೆ.

ರಾಷ್ಟ್ರೀಯ ಆರ್ಥಿಕತೆ, ವಿದೇಶಿ ಹೂಡಿಕೆದಾರರು ಮತ್ತು ಅನುಕೂಲಸ್ಥರನ್ನು ಸಂತೋಷವಾಗಿರಿಸುವ ನೀತಿ ಮಿಶ್ರಣವನ್ನು ಕಂಡುಹಿಡಿಯಲು ಪಾಕಿಸ್ತಾನ ಸೇನೆಯು ಹೆಣಗಾಡುತ್ತಿದೆ. ಆದರೆ, ಅದು ಕೆಲಸ ಮಾಡುತ್ತಿಲ್ಲ. ಚುನಾವಣೆಗೆ ಮೊದಲು ಸೇನೆಯು ಆರ್ಥಿಕತೆಯನ್ನು ನಾಗರಿಕ ಸರ್ಕಾರವು ಐಎಂಎಫ್ ಸಾಲವನ್ನು ಪಡೆಯುವ ರೀತಿಯಲ್ಲಿ ನಿರ್ವಹಿಸಬೇಕು ಎಂದು ಉತ್ಸುಕವಾಗಿತ್ತು. ಇದರಿಂದಾಗಿ ಆರ್ಥಿಕತೆಯು ಪ್ರಪಾತದಿಂದ ಹೊರಬರಲು ಸಾಧ್ಯವಾಯಿತು. ಆದರೆ, ಪಾಕಿಸ್ತಾನದ ಆರ್ಥಿಕತೆಯು ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಜನರು ಸಮಸ್ಯೆಯನ್ನು ಪರಿಹರಿಸಲು ಮ್ಯಾಜಿಕ್​ ಬುಲೆಟ್​ ಹುಡುಕುತ್ತಿದ್ದಾರೆ.

ಭಾರತದೊಂದಿಗಿನ ಬಾಂಧವ್ಯವನ್ನು ಮರುಸ್ಥಾಪಿಸುವುದು ಈ ಅವ್ಯವಸ್ಥೆಯನ್ನು ಪರಿಹರಿಸಲು ಪ್ರಾರಂಭವಾಗಬಹುದು. ಆದರೆ, ಬಿಜೆಪಿ ಸರ್ಕಾರವು ಇಸ್ಲಾಮಾಬಾದ್‌ನಲ್ಲಿನ ಸರ್ಕಾರಕ್ಕೆ ಜೀವಸೆಲೆ ನೀಡುವಲ್ಲಿ ನಿಜವಾದ ಆಸಕ್ತಿ ತೋರಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ 370ನೇ ವಿಧಿ ರದ್ದುಗೊಳಿಸುವುದರ ಜೊತೆಗೆ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ತರುವ ಮೂಲಕ ಅದನ್ನು ಮತ್ತಷ್ಟು ಕೆರಳಿಸಲು ಕೆಲಸ ಮಾಡಿದೆ. ಈ ನೀತಿಯ ನಡೆಗಳು ಪಾಕಿಸ್ತಾನಕ್ಕೆ ಸಂಬಂಧಿಸಿಲ್ಲ. ಆದರೂ ಇಸ್ಲಾಮಾಬಾದ್ ಯಾವುದೇ ಗಡಿಯಾಚೆಗಿನ ಸಾಹಸವನ್ನು ಬೆಂಬಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭಾರತವು ಸೌಕರ್ಯಗಳ ನೀತಿಯನ್ನು ಅನುಸರಿಸಲು ಬಯಸುವುದಿಲ್ಲ ಎಂಬ ಅನಿಸಿಕೆಯನ್ನು ಬಲಪಡಿಸುತ್ತದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾರತಕ್ಕೆ ಆಗಮಿಸಿದಾಗ ಮಾತ್ರ ಭಾರತವು ಸ್ವಲ್ಪ ಉತ್ಸಾಹವನ್ನು ಪ್ರದರ್ಶಿಸಿತ್ತು. ಒಂದು ವರ್ಷದ ನಂತರ ಮೋದಿ ಲಾಹೋರ್‌ನಲ್ಲಿ ಇಳಿಯುವ ಮೂಲಕ ಮರು ಪ್ರತಿಕ್ರಿಯಿಸಿದ್ದರು. ಆ ಸಮಯದಲ್ಲಿ ಸಂಬಂಧಗಳಲ್ಲಿ ಒಂದು ಪ್ರಗತಿಯು ಸನ್ನಿಹಿತವಾಗಿದೆ ಎಂದು ತೋರಿಸಿತ್ತು. ಆದರೆ, ದೇಶೀಯ ರಾಜಕೀಯದ ಒತ್ತಡಗಳು ಮೋದಿ ಅವರ ಯಾವುದೇ ದೊಡ್ಡ ನಡೆಯನ್ನು ತಡೆದವು. ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಸೇತುವೆ ನಿರ್ಮಿಸಲು ಪ್ರಯತ್ನಿಸಿ, ಎಡವಿದ್ದರು. ಅಂದಿನಿಂದ ಭಾರತದ ಪ್ರಧಾನ ಮಂತ್ರಿಗಳು ಉತ್ತರ ನೆರೆಹೊರೆಯವರೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸುವ ಬಗ್ಗೆ ಜಾಗರೂಕರಾಗಿದ್ದಾರೆ.

ನವಾಜ್ ಷರೀಫ್ ಮತ್ತೆ ಪ್ರಧಾನಿಯಾದರೆ, ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ಉಭಯ ದೇಶಗಳ ನಡುವೆ ಮತ್ತೆ ಬಾಂಧವ್ಯವನ್ನು ಪುನರಾರಂಭಿಸುವುದನ್ನು ಕಾಣಬಹುದು. ಅದು ಸಂಭವಿಸಿದರೆ, ಆರ್ಥಿಕತೆ ಸಮಸ್ಯೆ ಸುಳಿಯಲ್ಲಿರುವ ಪಾಕಿಸ್ತಾನಕ್ಕೆ ಪ್ರಮುಖ ತಿರುವು ಸಿಗಬಹುದು. ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಗೆ ಚುನಾವಣಾ ಪ್ರಯೋಜನಕ್ಕೂ ದಾರಿ ಮಾಡಿಕೊಡಬಹುದು. ಗಡಿಯಲ್ಲಿ ಸಹಜ ಸ್ಥಿತಿಗೆ ಬಂದರೆ ಎರಡೂ ಕಡೆಯವರಿಗೆ ಗೆಲುವು ಆಗಬಹುದು. ಇದಲ್ಲದೆ, ಇದು ನಮ್ಮ ಗಡಿಯ ಒಂದು ಬದಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇನ್ನೊಂದು ಬದಿ ಗಡಿಯಲ್ಲಿ ಚೀನಾ ಕಠಿಣವಾಗಿ ಪರಿಣಮಿಸಿದೆ.

ಇದನ್ನೂ ಓದಿ: Explained: ಹವಾಮಾನ ಬದಲಾವಣೆ, ಸಂಭಾವ್ಯ ಪರಿಹಾರೋಪಾಯಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.