ಇಸ್ಲಾಮಾಬಾದ್(ಪಾಕಿಸ್ತಾನ): ಕಳೆದ ವಾರ ಇಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಪೊಲೀಸರು ಕನಿಷ್ಠ 12 ಶಂಕಿತರನ್ನು ಬಂಧಿಸಿದ್ದಾರೆ. ದೇಶದ ವಾಯುವ್ಯ ಭಾಗ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಚೀನಾದ ಐವರು ಕಾರ್ಮಿಕರು ಸಾವನ್ನಪ್ಪಿದ್ದರು.
"ಬಂಧಿತರು ದಾಳಿಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ಚೀನಿಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವರಿಗೆ ಅವರು ಸಹಾಯ ಮಾಡಿದ್ದರು" ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪೈಕ ಕೆಲವರು ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಶಂಕಿತರ ವಿಚಾರಣೆ ನಡೆಯುತ್ತಿದೆ. ಇತರೆ ಪ್ರದೇಶಗಳಲ್ಲೂ ದಾಳಿಗಳು ನಡೆಯುತ್ತಿವೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತರಲ್ಲಿ ಕೆಲವರು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಶಾಂಗ್ಲಾ ಜಿಲ್ಲೆಗೆ ಸ್ಫೋಟಕ ತುಂಬಿದ ಕಾರು ಕೊಂಡೊಯ್ದಿದ್ದರು. ಬಳಿಕ ಆತ್ಮಾಹುತಿ ಬಾಂಬರ್ಗೆ ಕಾರನ್ನು ಹಸ್ತಾಂತರಿಸಿದ್ದರು. ಆತ್ಮಾಹುತಿ ಬಾಂಬರ್ ಆ ಕಾರನ್ನು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಸಿ ಕಾರ್ಮಿಕರ ಪ್ರಾಣಹಾನಿ ನಡೆಸಿದ್ದ ಎಂದು ತಿಳಿದುಬಂದಿದೆ.
ಚೀನಾಗೆ ಮೃತದೇಹಗಳ ರವಾನೆ: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಚೀನಾದ ಸಿಬ್ಬಂದಿಯ ಮೃತದೇಹಗಳನ್ನು ಪಾಕಿಸ್ತಾನದ ವಿಶೇಷ ಮಿಲಿಟರಿ ವಿಮಾನದಲ್ಲಿ ಸೋಮವಾರ ವುಹಾನ್ಗೆ ರವಾನಿಸಲಾಗಿದೆ. ಈ ದಾಳಿಯ ಪರಿಣಾಮ ಬೀಜಿಂಗ್ ತನ್ನ ನೂರಾರು ಕಾರ್ಮಿಕರ ರಕ್ಷಣೆಗಾಗಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಯೋಜಿಸಿದೆ.
ಮಾರ್ಚ್ 26ರಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಮಹಿಳೆ ಮತ್ತು ಪಾಕಿಸ್ತಾನದ ಚಾಲಕ ಸೇರಿದಂತೆ ಐದು ಚೀನಿ ಪ್ರಜೆಗಳು ಮೃತಪಟ್ಟಿದ್ದರು. 60 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (CPEC) ಅಡಿಯಲ್ಲಿ ಹಲವಾರು ಯೋಜನೆಗಳಲ್ಲಿ ಸಾವಿರಾರು ಚೀನಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಚೀನಾದ ಹೆಚ್ಚಿನ ಸಂಸ್ಥೆಗಳು ವಾಯುವ್ಯ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ ಕೆಲಸ ನಿಲ್ಲಿಸಿದೆ. ಹೀಗಾಗಿ ಮೃತಪಟ್ಟ ಚೀನಿ ಕಾರ್ಮಿಕರ ಸಾವಿನ ತನಿಖೆಗಾಗಿ ಬೀಜಿಂಗ್ ಕಳೆದ ಶುಕ್ರವಾರ ತನ್ನ ತನಿಖಾಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತು.
ಪಾಕಿಸ್ತಾನದ ದಾಸು ಯೋಜನೆಯ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಐವರು ಚೀನಾದ ಕಾರ್ಮಿಕರ ಮೃತದೇಹವನ್ನು ಪಾಕಿಸ್ತಾನದ ಮಿಲಿಟರಿ ವಿಮಾನದಲ್ಲಿ ಚೀನಾಕ್ಕೆ ತರಲಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಚೀನಿ ಪ್ರಜೆಗಳ ಮೇಲಿನ ಮಾರಣಾಂತಿಕ ಭಯೋತ್ಪಾದಕ ದಾಳಿಯ ಬಗ್ಗೆ ಸಂಪೂರ್ಣ ಜಂಟಿ ತನಿಖೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಆತ್ಮಾಹುತಿ ದಾಳಿ: ಜೀವಭಯದಿಂದ ಪಾಕಿಸ್ತಾನ ತೊರೆಯಲು ಮುಂದಾದ ಚೀನಿ ಎಂಜಿನಿಯರ್ಗಳು - Khyber Pakhtunkhwa