ETV Bharat / entertainment

ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ - Soundarya Jagadish suicide

author img

By ETV Bharat Karnataka Team

Published : Apr 14, 2024, 1:04 PM IST

Updated : Apr 14, 2024, 3:46 PM IST

Etv Bharat
Etv Bharat

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನ ಕ್ಲಬ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲೇ ಸ್ಯಾಂಡಲ್​ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸ್ನೇಹಿತರು ಖಚಿತಪಡಿಸಿದ್ದಾರೆ.

ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್​ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ಮಹಾಲಕ್ಷ್ಮಿ ಲೇಔಟ್​ನ ಕ್ಲಬ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲೇ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದು, ತಕ್ಷಣ ಅವರನ್ನ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಸಹ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

'ಮಸ್ತ್ ಮಜಾ ಮಾಡಿ', 'ಸ್ನೇಹಿತರು' ಸೇರಿದಂತೆ ಕೆಲ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಅವರು, 'ಅಪ್ಪು-ಪಪ್ಪು' ಹೆಸರಿನ ಚಿತ್ರದ ಮೂಲಕ ತಮ್ಮ ಮಗ ಸ್ನೇಹಿತ್​ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಿರ್ಮಾಪಕರಾಗಿ ಮಾತ್ರವಲ್ಲದೇ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಸೌಂದರ್ಯ ಜಗದೀಶ್, ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಿಳಿದುಬಂದಿದೆ.

ಕಳೆದ ತಿಂಗಳಷ್ಟೇ ಜಗದೀಶ್ ಅವರ ಬಾಡಿಗಾರ್ಡ್ ಸಾವನ್ನಪ್ಪಿದ್ದರು, ಎರಡು ವಾರದ ಹಿಂದಷ್ಟೇ ಅವರ ಅತ್ತೆ ಸಹ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಜಗದೀಶ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಅವರ ಮೃತದೇಹ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ‌ ದಾಖಲಾಗಿದೆ.

ಈ ವಿಷಯವನ್ನು ಜಗದೀಶ್ ಸ್ನೇಹಿತ ಶ್ರೇಯಸ್ ಖಚಿತಪಡಿಸಿದ್ದಾರೆ. ''ಮನೆಯಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಳಗ್ಗೆ ವಿಷಯ ಗೊತ್ತಾದ ತಕ್ಷಣವೇ 9 ಗಂಟೆ ಸುಮಾರಿಗೆ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಆತ್ಮಹತ್ಯೆಗೆ ಇನ್ನೂ ನಿಖರವಾದ ಮಾಹಿತಿ ಗೊತ್ತಿಲ್ಲ. ಆರೋಗ್ಯ ಮತ್ತು ವ್ಯವಹಾರದ ಯಾವುದೇ ಸಮಸ್ಯೆ ಇರಲಿಲ್ಲ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅಂತ್ಯಕ್ರಿಯೆ ಯಾವಾಗ?, ಎಲ್ಲಿ ಅಂತಾ ಕುಟುಂಬಸ್ಥರ ಜೊತೆ ಚರ್ಚಿಸಿ ತಿಳಿಸುತ್ತೇವೆ'' ಎಂದು ಶ್ರೇಯಸ್ ತಿಳಿಸಿದರು.

ಡಿಸಿಪಿ ಪ್ರತಿಕ್ರಿಯೆ: ಸೌಂದರ್ಯ‌ ಜಗದೀಶ್ ಆತ್ಮಹತ್ಯೆಯ ಕುರಿತು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ‌ ಪಡೆದುಕೊಂಡಿದ್ದಾರೆ. ಮಹಾಲಕ್ಷ್ಮಿ‌ ಲೇಔಟಿನಲ್ಲಿರುವ ಜಗದೀಶ್ ಅವರ ಮನೆಗೆ ತೆರಳಿ, ಕುಟುಂಬಸ್ಥರಿಂದ‌ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ''ಇಂದು ಬೆಳಿಗ್ಗೆ 9.45ಕ್ಕೆ ಈ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತರ ಪತ್ನಿ ಈಗಾಗಲೇ ದೂರು ಕೊಟ್ಟಿದ್ದಾರೆ. ಹೃದಯಾಘಾತವಲ್ಲ, ಇದು ಆತ್ಮಹತ್ಯೆ ಎಂದು ಅವರ ಪತ್ನಿ ಸ್ಪಷ್ಟವಾಗಿ ಹೇಳಿದ್ದಾರೆ. ಜಗದೀಶ್ ಅವರು ಇತ್ತೀಚೆಗೆ ಮಾನಸಿಕವಾಗಿ ತುಂಬಾ ನೊಂದಿದ್ದರು. ಅವರ ಅತ್ತೆ ಸಹ ಕೆಲ ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. ಅವರ ಸಾವಿನ‌ ಬಳಿಕ ಜಗದೀಶ್ ತುಂಬಾ ಮಾನಸಿಕವಾಗಿ ಕುಗ್ಗಿದ್ದರು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಬರಲಿ, ಸದ್ಯ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದ ತಾಯಿ ಜೈಲಿನಲ್ಲೇ ಆತ್ಮಹತ್ಯೆ - Mother commits suicide

Last Updated :Apr 14, 2024, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.