ETV Bharat / entertainment

ಗೌರಿಶಂಕರ್ 'ಕೆರೆಬೇಟೆ' ಚಿತ್ರಕ್ಕೆ ಸಿಕ್ತು ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್

author img

By ETV Bharat Karnataka Team

Published : Mar 9, 2024, 5:35 PM IST

Ashwini Puneeth Rajkumar support to kerebete film
Ashwini Puneeth Rajkumar support to kerebete film

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ಬೆಂಗಳೂರು: ಚಂದನವನದಲ್ಲಿ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ 'ಕೆರೆಬೇಟೆ'. ಗೌರಿಶಂಕರ್ ನಟನೆ, ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಸಿನಿಮಾದ ಮೂರನೇ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕೆರೆಬೇಟೆ ಚಿತ್ರತಂಡ
ಕೆರೆಬೇಟೆ ಚಿತ್ರತಂಡ

ಈಗಾಗಲೇ ಸಿನಿಮಾದಿಂದ ಟೀಸರ್, ಟ್ರೈಲರ್ ಮತ್ತು ಎರಡು ಹಾಡುಗಳು ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾ ತಂಡ ಮೂರನೇ ಹಾಡನ್ನು ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 'ಕಣ್ಣುಗಳೇ ಕಳೆದು ಹೋದಾಗ..' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಈ ಸುಂದರ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಧ್ವನಿ ನೀಡಿದ್ದು, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಸಿನಿಮಾತಂಡ ಎರಡನೇ ಹಾಡನ್ನು ಶಿವಮೊಗ್ಗದಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ಸಿನಿಮಾ ತಂಡ ಚಿತ್ರದ ಪ್ಯಾತೋ ಸಾಂಗ್ ರಿಲೀಸ್ ಮಾಡಿದೆ. ಈ ಹಾಡಿಗೆ ಮನ ಸೋತ ಅಶ್ವಿನಿ ಪುನೀತ್ ರಾಜಕುಮಾರ್ ಸಂತಸ ವ್ಯಕ್ತಪಡಿಸಿದರು. ಹಾಡು ರಿಲೀಸ್ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಒಂದಿಷ್ಟು ಕುತೂಹಲದ ಮಾಹಿತಿ ಹಂಚಿಕೊಂಡರು.

ಕೆರೆಬೇಟೆ ಚಿತ್ರತಂಡ
ಕೆರೆಬೇಟೆ ಚಿತ್ರತಂಡ

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಡು ರಿಲೀಸ್ ಮಾಡಿರುವುದು ಸಂತಸದ ಸಂಗತಿ ಎಂದು ನಿರ್ದೇಶಕ ರಾಜ್ ಗುರು ಮಾತನಾಡಿ ಹರ್ಷ ವ್ಯಕ್ತಪಡಿಸಿದರು. 'ದೊಡ್ಮನೆಗೂ ನನಗೂ ಒಂದು ಸಂಬಂಧವಿದೆ‌. ಅಪ್ಪು ಸರ್ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಮಣ್ಣಿನ ಕಥೆಗಳ ಬಗ್ಗೆ ತುಂಬಾ ಮಾತನಾಡುತ್ತಿದ್ವಿ. ಈ ರೀತಿಯ ಸಿನಿಮಾ ಅವರಿಗೆ ತುಂಬಾ ಇಷ್ಟ' ಎಂದರು.

ನಾಯಕಿ ಬಿಂದು ಶಿವರಾಮ್ ಮಾತನಾಡಿ, ಮಲೆನಾಡಿನ ಭಾಷೆ ನನಗೆ ತುಂಬಾ ಕಷ್ಟವಾಯಿತು. ಇಡೀ ಸಿನಿಮಾ ತಂಡ ಮಲೆನಾಡಿನವರಾಗಿದ್ದರಿಂದ ಅದೇ ಭಾಷೆಯನ್ನು ಮಾತನಾಡುತ್ತಿದ್ದರು. ಹಾಗಾಗಿ ನನಗೂ ಅವರ ಜೊತೆ ಸೇರಿ ಮಲೆನಾಡಿನ ಭಾಷೆ ಮಾತನಾಡಲು ಸುಲಭವಾಯ್ತು. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಗಟ್ಟಿಯಾಗಿದೆ ಎಂದು ತಿಳಿಸಿದರು.

ಚಿತ್ರದ ನಾಯಕ ಗೌರಿಶಂಕರ್​- ನಾಯಕಿ ಬಿಂದು ಶಿವರಾಮ್
ಚಿತ್ರದ ನಾಯಕ ಗೌರಿಶಂಕರ್​- ನಾಯಕಿ ಬಿಂದು ಶಿವರಾಮ್

ನಾಯಕ ಗೌರಿಶಂಕರ್ ಮಾತನಾಡಿ, ಈ ಸಿನಿಮಾ ನನಗೆ ಗೆಲ್ಲಲೇಬೇಕಾಗಿದೆ. ಏಕೆಂದರೆ ನಾನು ತುಂಬಾ ಸೋಲು ಕಂಡಿದ್ದೇನೆ. ಸೋತು ಮನೆಯಲ್ಲಿ ಕೂರುವುದು ತುಂಬಾ ಕಷ್ಟ. ಸಿನಿಮಾ ಸಹವಾಸವೇ ಬೇಡ ಅಂತ ಇದ್ದೆ. ನಿರ್ದೇಶಕರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ತುಂಬಾ ಪ್ರಿಪರೇಷನ್ ಮಾಡಿದ್ದೇವೆ. ಗೆಲುವು ನನಗೆ ಅನಿವಾರ್ಯವಾಗಿದೆ ಎಂದರು.

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ 'ಕೆರೆಬೇಟೆ' ಸಿನಿಮಾ ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ 'ಕೆಂಡ' ಚಿತ್ರದ ಆಡಿಯೋ ರೈಟ್ಸ್ 'ಡಿ ಬೀಟ್ಸ್' ತೆಕ್ಕೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.