ETV Bharat / entertainment

ಸಲ್ಮಾನ್​ ಮನೆ ಹೊರಗೆ ಗುಂಡಿನ ದಾಳಿ: 'ಸಿಬಿಐ ತನಿಖೆ'ಗೆ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಮೃತ ಆರೋಪಿ ತಾಯಿ - Salman Khan

author img

By ETV Bharat Karnataka Team

Published : May 5, 2024, 4:09 PM IST

Salman Khan
ಸಲ್ಮಾನ್ ಖಾನ್ (ANI image)

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಅನುಜ್ ಥಾಪನ್ ತಾಯಿ ರೀಟಾ ದೇವಿ, ಮಗನ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಒತ್ತಾಯಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಏಪ್ರಿಲ್ 14 ರಂದು ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಮೃತ ಆರೋಪಿಯ ಕುಟುಂಬಸ್ಥರು ಆರೋಪಿಸಿದ್ದರು. ಸಿಐಡಿ ಎದುರು ತಮ್ಮ ಹೇಳಿಕೆಗಳನ್ನೂ ದಾಖಲಿಸಿದ್ದಾರೆ. ಶುಕ್ರವಾರ, ಅನುಜ್ ಥಾಪನ್ ಸಾವಿನ ಕುರಿತು 'ಸಿಬಿಐ ತನಿಖೆ'ಗೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಥಾಪನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ರೆ, ಆರೋಪಿಯ ತಾಯಿ ರೀಟಾ ದೇವಿ ಶುಕ್ರವಾರ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಫೌಲ್ ಪ್ಲೇ, ಮಗ ಕೊಲೆಯಾಗಿದ್ದಾನೆ ಎಂದು ಹೇಳಿದ್ದಾರೆ.

ಮಗನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡುವಂತೆ ದೇವಿ ಹೈಕೋರ್ಟ್‌ಗೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ನಡೆಯಲಿದೆ. ಅನುಜ್​​ ಥಾಪನ್ ಜೈಲಿನಲ್ಲಿದ್ದಾಗ ಪೊಲೀಸರು ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ. ಅಲ್ಲದೇ ಥಾಪನ್ ನನ್ನು ಬಂಧಿಸಿದ್ದ ಪೊಲೀಸ್ ಠಾಣೆ ಮತ್ತು ಲಾಕ್‌ಅಪ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ಪೊಲೀಸರಿಗೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಏಪ್ರಿಲ್ 24 ರಿಂದ ಮೇ 2ರ ವರೆಗಿನ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕಾಲ್​​ ಡೇಟಾ ರೆಕಾರ್ಡಿಂಗ್‌ಗಳನ್ನು (ಸಿಡಿಆರ್) ಉಳಿಸಿಕೊಳ್ಳಲು ಅರ್ಜಿದಾರರು ಒತ್ತಾಯಿಸಿದ್ದಾರೆ. ಅಲ್ಲದೇ ಥಾಪನ್ ಮೃತದೇಹದ ಮತ್ತೊಂದು (ಹೊಸ) ಮರಣೋತ್ತರ ಪರೀಕ್ಷೆಗೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಮನೆ ಮೇಲಿನ ದಾಳಿ​ ಕೇಸ್: ಮೃತ ಆರೋಪಿ ಥಾಪನ್ ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡ ಸಿಐಡಿ - Salman Khan House Firing

ಸಲ್ಮಾನ್​ ಮನೆ ಹೊರಗಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು. ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿ ಅನುಜ್​​ ಥಾಪನ್, ಸೋನು ಸುಭಾಷ್ ಚಂದರ್ ಮತ್ತು ಆಪಾದಿತ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಬಂಧಿತರು. ಈ ಪೈಕಿ ಅನುಜ್​​ ಥಾಪನ್ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಉಳಿದಂತೆ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹೋದರ ಅನ್ಮೋಲ್ ಬಿಷ್ಣೋಯ್ ಕೂಡ ಈ ಪ್ರಕರಣದ ವಾಂಟೆಡ್ ಲಿಸ್ಟ್​​ನಲ್ಲಿದ್ದಾರೆ.

ಇದನ್ನೂ ಓದಿ: ಮಹಾ ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, 56 ಮಂದಿ ಸಾವು, ಹಲವರು ನಾಪತ್ತೆ: ಫೋಟೋಗಳು - Brazil Flood

ಗುಂಡಿನ ದಾಳಿಗೆ ರೈಫಲ್‌ಗಳು ಮತ್ತು ಬುಲೆಟ್‌ಗಳನ್ನು ಪೂರೈಸಿದ ಆರೋಪದ ಮೇರೆಗೆ ಪಂಜಾಬ್‌ನಲ್ಲಿ ಆರೋಪಿ ಸೋನು ಜೊತೆಗೆ ಅನುಜ್​ ಥಾಪನ್​​​ನನ್ನು ಬಂಧಿಸಿ, ಏಪ್ರಿಲ್ 26ರಂದು ಎಲ್ಲಾ ನಾಲ್ವರು ಶಂಕಿತರನ್ನು ವಿಶೇಷ ನ್ಯಾಯಾಲಯದೆದುರು ಹಾಜರುಪಡಿಸಿದರು. ಆರೋಪಿಗಳು ಮೇ 8ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ. ಥಾಪನ್ ಅಪರಾಧ ವಿಭಾಗದ ಲಾಕ್-ಅಪ್‌ನ ಶೌಚಾಲಯದಲ್ಲಿ ಮೇ 1ರಂದು ಶವವಾಗಿ ಪತ್ತೆಯಾಗಿದ್ದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.