ETV Bharat / bharat

ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ: ಇದು ನಿಜವಾದ ಸ್ವಾತಂತ್ರ್ಯ ಎಂದ ವಲಸಿಗರು

author img

By ETV Bharat Karnataka Team

Published : Mar 15, 2024, 4:42 PM IST

ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ
ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ

ಜೈಪುರದಲ್ಲಿ ಆರು ಪಾಕಿಸ್ತಾನಿ ಹಿಂದೂ ವಲಸಿಗರು ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ.

ಜೈಪುರ: ರಾಜಸ್ಥಾನದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಶುಕ್ರವಾರ ಭಾರತೀಯ ಪೌರತ್ವ ನೀಡಲಾಯಿತು. ಜೈಪುರದ ಹೆಚ್ಚುವರಿ ಜಿಲ್ಲಾಧಿಕಾರಿ (ದಕ್ಷಿಣ) ಶಫಾಲಿ ಕುಶ್ವಾಹಾ ಅವರು ವಲಸಿಗರಾದ ಪ್ರೇಮಲತಾ, ಸಂಜಯ್ ರಾಮ್, ಬೆಜಾಲ್, ಜಜ್ರಾಜ್, ಕೇಕು ಮಾಯ್ ಮತ್ತು ಗೋಮಂಡ್ ರಾಮ್ ಅವರಿಗೆ ಪೌರತ್ವ ಪ್ರಮಾಣಪತ್ರ ಹಸ್ತಾಂತರಿಸಿದರು. ಪಾಕಿಸ್ತಾನದ ಕರಾಚಿಯಿಂದ ಸ್ಥಳಾಂತರಗೊಂಡು 2010ರಲ್ಲಿ ಭಾರತಕ್ಕೆ ಬಂದ 41 ವರ್ಷದ ಪ್ರೇಮಲತಾ, ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. "ಭಾರತಕ್ಕೆ ಬಂದ ನಂತರ ನಮಗೆ ನಿಜವಾದ ಸ್ವಾತಂತ್ರ್ಯದ ಭಾವನೆ ಬಂದಿದೆ" ಎಂದು ಅವರು ಹೇಳಿದರು.

ಸಂಜಯ್ ರಾಮ್ ಮಾತನಾಡಿ, "ನಾನು ಕಳೆದ 10 ವರ್ಷಗಳಿಂದ ಭಾರತೀಯ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದೆ, ಇಂದು ಹಲವು ವರ್ಷಗಳ ಸುದೀರ್ಘ ಪ್ರಯತ್ನಕ್ಕೆ ಫಲ ಸಿಕ್ಕಿದೆ, ಈಗ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಬಹುದು" ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಭಾರತೀಯ ಪ್ರಜೆಗಳಾಗಿರುವ ವಲಸಿಗರನ್ನು ಅಭಿನಂದಿಸಿದರು. ಭಾರತೀಯ ಪೌರತ್ವದ ಪುರಾವೆಗಳ ಕೊರತೆಯಿಂದಾಗಿ, ಹಲವರು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಭಾರತೀಯ ಪೌರತ್ವ ಪಡೆದ ನಂತರ, ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅರ್ಹರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾಡಳಿತವು ಪೌರತ್ವದ ಅರ್ಜಿಗಳನ್ನು ನಿಯಮಾನುಸಾರ ಆದ್ಯತೆ ಮೇರೆಗೆ ಪ್ರಕ್ರಿಯೆಗೊಳಿಸಿ, ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಪ್ರಮಾಣಪತ್ರಗಳನ್ನು ವಿತರಿಸುತ್ತದೆ ಎಂದು ಅವರು ಈ ವೇಳೆ ಹೇಳಿದರು. ಒಟ್ಟು 319 ಅರ್ಹ ಅರ್ಜಿದಾರರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ ಎಂದೂ ಸಹ ಅವರು ಹೇಳಿದರು.

ಇದಕ್ಕೂ ಮುನ್ನ ಜೈಪುರದಲ್ಲಿರುವ ಹೆಚ್ಚುವರಿ ಜಿಲ್ಲಾಧಿಕಾರಿ (ದಕ್ಷಿಣ)ಯಾಗಿದ್ದ ಅಬು ಸುಫಿಯಾನ್ ಚೌಹಾಣ್ ಅವರು 5 ಪಾಕಿಸ್ತಾನಿ ವಲಸಿಗರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದರು. ಸಂಜಯ್ ಕುಮಾರ್, ಸುನೀತಾ, ಹರ್ಷ, ನಿಶಾ ಮತ್ತು ರಾಜೇಶ್ ಕುಮಾರ್ ಅವರಿಗೆ ಚೌಹಾಣ್ ಅವರು ಭಾರತೀಯ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದರು. ಭಾರತೀಯ ಪೌರತ್ವ ಪಡೆದ ಬಳಿಕ ಎಲ್ಲರೂ ಖುಷಿ ವ್ಯಕ್ತಪಡಿಸಿದ್ದರು. ಈ ಕ್ಷಣಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆವು ಎಂದು ಹೇಳುವ ಮೂಲಕ ಜಿಲ್ಲಾಡಳಿತಕ್ಕೆ ಕೃತಜ್ಞತೆ ಕೂಡ ಸಲ್ಲಿಸಿದ್ದರು. ಇದಾದ ಬಳಿಕ ಇದೀಗ ಮತ್ತೆ ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಯಿತು.

ಇದನ್ನು ಓದಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಪೌರತ್ವ ತಿದ್ದಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.