ETV Bharat / bharat

ಸಂದೇಶಖಾಲಿ ಘಟನೆ: ಮಹಿಳಾ ಮತಗಳ ಮೇಲೆ ಕಣ್ಣು, ಟಿಎಂಸಿ ಎದುರಿಸಲು ಬಿಜೆಪಿಗೆ ಅಸ್ತ್ರ

author img

By ETV Bharat Karnataka Team

Published : Mar 6, 2024, 4:58 PM IST

What Explains BJP's Women Outreach in Bengal to Beat TMC in Its Own Game
ಟಿಎಂಸಿ ಎದುರಿಸಲು ಬಿಜೆಪಿಗೆ ಅಸ್ತ್ರ

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನಿರ್ದೇಶನದಂತೆ 370 ಸ್ಥಾನಗಳ ಮೈಲಿಗಲ್ಲನ್ನು ತಲುಪಲು ಬಿಜೆಪಿ 'ನಾರಿ ಶಕ್ತಿ' ಲಾಭ ಪಡೆಯುವ ಯೋಜನೆಯಲ್ಲಿದೆ. ಅದರಂತೆ ಪಶ್ಚಿಮ ಬಂಗಾಳದ ಮಹಿಳಾ ಮತದಾರರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಸಂದೇಶಖಾಲಿ ಘಟನೆಯನ್ನು ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಎದುರಿಸಲು ಮುಂದಾಗಿದೆ.

ಕೋಲ್ಕತ್ತಾ/ಹೈದರಾಬಾದ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದಂತಹ ಪ್ರಮುಖ ರಾಜ್ಯಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಯೋಜನೆ ರೂಪಿಸುತ್ತಿದೆ.

ಪಶ್ಚಿಮ ಬಂಗಾಳವು ಪ್ರತಿ 1,000 ಪುರುಷರಿಗೆ 968 ಮಹಿಳಾ ಮತದಾರರನ್ನು ಹೊಂದಿರುವ ರಾಜ್ಯವಾಗಿದೆ. ಅತ್ಯುತ್ತಮ ಮತದಾರರ ಲಿಂಗ ಅನುಪಾತವನ್ನು ಹೊಂದಿರುವುದರಿಂದ ತನ್ನ ಮೈಲಿಗಲ್ಲನ್ನು ತಲುಪಲು ಬಿಜೆಪಿ ರಾಜ್ಯದಲ್ಲಿ ಚುನಾವಣಾ ಕಾರ್ಯತಂತ್ರ ಸಿದ್ಧಪಡಿಸುತ್ತಿದೆ. 2019ರ ಚುನಾವಣೆಗೆ ಹೋಲಿಸಿದರೆ ಮಹಿಳಾ ಮತದಾರರ ಪ್ರಮಾಣ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅಂದು 1,000 ಪುರುಷರಿಗೆ 949 ಮಹಿಳೆಯರು ಇದ್ದರು. ಅಂದಿನಿಂದ ಇದು ಸ್ಥಿರವಾಗಿ ಏರುತ್ತಿದೆ. ತೃಣಮೂಲ ಕಾಂಗ್ರೆಸ್​ ಮಹಿಳಾ ಮತ್ತು ಮುಸ್ಲಿಮರ ಮತ ಬ್ಯಾಂಕ್​ ಹೊಂದಿದೆ. ಮಹಿಳಾ ಮತದಾರರಲ್ಲಿ ಬಹಳ ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ.

ಇದೀಗ 2021ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ ಚುನಾವಣಾ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದ ಸಂದೇಶಖಾಲಿ ಕ್ಷೇತ್ರವು ಬಿಜೆಪಿಯ ಚುನಾವಣಾ ಮುಂದಡಿಯ ವಿಷಯವಾಗಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ಆಲೋಚನೆಯಲ್ಲಿರುವಾಗ ಗಣನೀಯ ಮಹಿಳಾ ಮತದಾರರನ್ನು ಹೊಂದಿರುವ ಸಂದೇಶಖಾಲಿ ವಿಷಯ ಮುನ್ನೆಲೆಗೆ ಬಂದಿದೆ. ತೃಣಮೂಲದ ಪ್ರಬಲ ವ್ಯಕ್ತಿ ಶೇಖ್ ಶಾಜಹಾನ್ ಇಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಭಾಗಿಯಾಗಿರುವುದು ಪ್ರಮುಖ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಇದನ್ನೇ ಬಿಜೆಪಿ ಲಾಭ ಮಾಡಿಕೊಳ್ಳಲು ಬಯಸಿದೆ.

ಲೋಕಸಭೆ ಚುನಾವಣೆಗೆ ಮುನ್ನ ಸಂದೇಶಖಾಲಿ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶುಕ್ರವಾರ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ. ಸಂದೇಶಖಾಲಿ ಸಹೋದರಿಯರೊಂದಿಗೆ ಟಿಎಂಸಿ ಯಾವ ರೀತಿ ನಡೆಸಿಕೊಂಡಿದೆ ಎಂಬುದನ್ನು ದೇಶವೇ ನೋಡುತ್ತಿದೆ. ಇಡೀ ದೇಶವೇ ಆಕ್ರೋಶಗೊಂಡಿದೆ. ಸಂದೇಶಖಾಲಿಯಲ್ಲಿ ನಡೆದ ಘಟನೆಯಿಂದ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮಕ್ಕೆ ನೋವಾಗಿದೆ ಎಂದು ಮೋದಿ ಹೇಳಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ಹೆಸರನ್ನು ಉಲ್ಲೇಖಿಸದೆ ಮೋದಿ, ಟಿಎಂಸಿ ನಾಯಕರೊಬ್ಬರು ಎಲ್ಲ ಮಿತಿಗಳನ್ನು ಮೀರಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಮಹಿಳೆಯರ ಗೌರವ ಮತ್ತು ಘನತೆಗಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದ್ದರು.

ಹೀಗೆ ಸಂದೇಶಖಾಲಿ ಘಟನೆಯು ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಲು ಬಿಜೆಪಿಗೆ ಅವಕಾಶವನ್ನು ಒದಗಿಸಿದೆ. ಅಲ್ಲಿ ಪಕ್ಷದ ಮಹಿಳಾ ಬೆಂಬಲದ ನೆಲೆಯಲ್ಲಿ ಪ್ರಮಾದ ಎಸಗುವ ಮೂಲಕ ಹೆಚ್ಚು ಪೆಟ್ಟು ಬಿದ್ದಂತಾಗಿದೆ. 2019ರ ಚುನಾವಣೆಯಲ್ಲಿ 18 ಲೋಕಸಭೆ ಕ್ಷೇತ್ರಗಳನ್ನು ಗೆದ್ದಿರುವ ಟಿಎಂಸಿ ಈಗ ಬಿಜೆಪಿಗೆ ತಡೆವೊಡ್ಡುವಲ್ಲಿ ಹತಾಶೆಯನ್ನು ಎದುರಿಸುತ್ತಿದೆ.

ಬುಧವಾರ ಬರಾಸತ್‌ನಲ್ಲಿ ನಡೆದ ಪ್ರಧಾನಿ ಮೋದಿ ಸಭೆಯಲ್ಲಿ ಸಂದೇಶಖಾಲಿಯ ಮಹಿಳೆಯರು, ಬಿಜೆಪಿ ಕಾರ್ಯಕರ್ತರು, ಮಹಿಳಾ ಬೆಂಬಲಿಗರು ತಂಡ-ತಂಡಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬರಾಸತ್‌ಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಮಾತನಾಡಿ, ನಮ್ಮ ಗೌರವವೆಲ್ಲ ಹಾಳಾಗಿದೆ. ನಾವು ಹಿಂಸೆಗೆ ಒಳಗಾದ ರೀತಿಯನ್ನು ನಮ್ಮ ಪ್ರಧಾನಿ ಮೋದಿಯವರಿಗೆ ಹೇಳಲು ಹೊರಟಿದ್ದೇವೆ. ಮೋದಿಜಿ ನಮ್ಮ ಪರವಾಗಿದ್ದು, ನಮಗೆ ಸಹಾಯ ಮಾಡಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಸಂದೇಶಖಾಲಿಯ ಮತ್ತೊಬ್ಬ ಮಹಿಳೆ ಪ್ರತಿಕ್ರಿಯಿಸಿ, ಭಯವಿಲ್ಲದೆ ಮತ ಚಲಾಯಿಸುವ ವ್ಯವಸ್ಥೆ ಆಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ನ್ಯಾಯ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು. ಇನ್ನೋರ್ವ ಮಹಿಳೆ, ನಾವು ಶಾಂತಿಯಿಂದ ಬದುಕಲು ಬಯಸುತ್ತೇವೆ. ಶಿಬು ಹಜ್ರಾ, ಶೇಖ್ ಷಹಜಹಾನ್ ಮತ್ತು ಉತ್ತಮ್ ಸರ್ದಾರ್ ಅವರಂತಹವರು ಮತ್ತೆ ಹಿಂತಿರುಗಬಾರದು. ಆಗ ನಮ್ಮ ಮತವನ್ನು ನಾವೇ ಹಾಕಬಹುದು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಂದೇಶ್​ಖಾಲಿ ಹಿಂಸಾಚಾರ​: ಆರೋಪಿಗಳ ₹12 ಕೋಟಿ ಮೌಲ್ಯದ ಆಸ್ತಿ ಜಪ್ತಿ, ವಿಚಾರಣೆಗೆ ಒಪ್ಪಿದ ಸುಪ್ರೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.