ETV Bharat / bharat

ಮೋದಿ ಅಥವಾ ಇಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಉದಯನಿಧಿ ಸ್ಟಾಲಿನ್

author img

By ETV Bharat Karnataka Team

Published : Jan 22, 2024, 11:21 AM IST

Udhayanidhi Stalin  DMK  ED  ಉದಯನಿಧಿ ಸ್ಟಾಲಿನ್  ಡಿಎಂಕೆ  ಮೋದಿ ಆಡಳಿತದ ವಿರುದ್ಧ ವಾಗ್ದಾಳಿ
ಇಡಿ ಅಥವಾ ಮೋದಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಉದಯನಿಧಿ ಸ್ಟಾಲಿನ್ ತಿರುಗೇಟು

ತಮಿಳು ಸಂಸ್ಕೃತಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಭಾನುವಾರ ನಡೆದ ಸಮಾವೇಶದಲ್ಲಿ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಹೇಳಿದರು. ಇದೇ ವೇಳೆ ಚುನಾವಣಾ ರಾಜಕೀಯದಲ್ಲಿ ಯುವಕರನ್ನು ಹುರಿದುಂಬಿಸುವ ಮಹತ್ವದ ಕುರಿತು ತಿಳಿಸಿದರು.

ಸೇಲಂ(ತಮಿಳುನಾಡು): ''ತನಿಖಾ ಸಂಸ್ಥೆಗಳಿಗೆ ಎಂದಿಗೂ ನಮ್ಮ ಉತ್ಸಾಹವನ್ನು ಕುಗ್ಗಿಸಲಾರವು. ಇಡಿ ಅಥವಾ ಮೋದಿ ಅವರು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ'' ಎಂದು ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವ ಹಾಗೂ ಡಿಎಂಕೆ ಯುವ ಘಟಕದ ರಾಜ್ಯ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದರು.

ಸೇಲಂನ ಪೆಥನಾಯಕನಪಾಳ್ಯಂನಲ್ಲಿ ನಡೆದ ಡಿಎಂಕೆ ಯುವ ಘಟಕದ ಎರಡನೇ ರಾಜ್ಯ ಸಮಾವೇಶದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, "ಡಿಎಂಕೆ ನಾಯಕರನ್ನು ಮರೆತುಬಿಡಿ, ಪಕ್ಷದ ಕಾರ್ಯಕರ್ತನ ಮಗುವನ್ನು ಸಹ ಕೇಂದ್ರ ತನಿಖಾ ಸಂಸ್ಥೆಗಳಿಂದ ಹೆದರಿಸಲು ಸಾಧ್ಯವಿಲ್ಲ" ಎಂದು ಕಿಡಿಕಾರಿದರು.

"ಡಿಎಂಕೆ ತನ್ನ ಸ್ವಯಂಸೇವಕರನ್ನು ಎಂದಿಗೂ ಕೈಬಿಟ್ಟಿಲ್ಲ. ಸ್ವಯಂಸೇವಕರಿಗೆ ತೊಂದರೆಯಾದರೆ ನಾಯಕನೇ ಅವರ ಪರವಾಗಿ ಹೋರಾಡುತ್ತಾನೆ. ದ್ರಾವಿಡ ಚಳುವಳಿಯು ಶತಮಾನವನ್ನು ದಾಟಿದೆ. ಈ ಚಳುವಳಿಯನ್ನು ಇನ್ನೂ ಒಂದು ಶತಮಾನದವರೆಗೆ ಉಳಿಸಿಕೊಳ್ಳಬೇಕಿದೆ" ಎಂದರು.

ಮೋದಿ ಆಡಳಿತದ ವಿರುದ್ಧ ವಾಗ್ದಾಳಿ: ಮೋದಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಮುಂಬರುವ ಸಂಸತ್ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟ ಅಬ್ಬರಿಸಲಿದೆ. ಸಿಎಂ ನಿರ್ದೇಶನದಂತೆ ನಾವು ಪ್ರಚಾರ ಮಾಡಬೇಕಿದೆ. 2018ರಲ್ಲಿ ತಾವು ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡೆ. ಅಂದಿನಿಂದ ಜಾತಿರಹಿತ ಸಮಾಜದ ಆಶಯವನ್ನು ಈಡೇರಿಸಲು ಯುವ ಘಟಕ ಶ್ರಮಿಸುತ್ತಿದೆ'' ಎಂದ ಅವರು, ಕೇಂದ್ರದಲ್ಲಿ ಫ್ಯಾಸಿಸ್ಟ್ ಆಡಳಿತವನ್ನು ಕೊನೆಗೊಳಿಸುವುದು ಅನಿವಾರ್ಯ. ಈ ಪ್ರಯತ್ನದಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು, ಅರ್ಹ ಯುವ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗುವುದು ಎಂದು ಉದಯನಿಧಿ ಸ್ಟ್ಯಾಲಿನ್ ತಿಳಿಸಿದರು.

15 ಗ್ರಂಥಾಲಯಗಳು ಓಪನ್: "ದ್ರಾವಿಡ ಮುನ್ನೇತ್ರ ಕಳಗಂ 1944ರಲ್ಲಿ ಜಸ್ಟೀಸ್ ಪಕ್ಷದಿಂದ ಹೊರಹೊಮ್ಮಿತು. ಈಗ 80 ವರ್ಷಗಳ ನಂತರ, ಡಿಎಂಕೆ ಯುವ ಘಟಕದ ಸಮಾವೇಶವು ಸೇಲಂನಲ್ಲಿ ನಡೆಯುತ್ತಿದೆ, ಇದು ಭಾರಿ ಮಹತ್ವದ್ದಾಗಿದೆ. ನನ್ನ ಜೀವನದಲ್ಲಿ ಜನವರಿ 21 ಅನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಹುಟ್ಟುಹಬ್ಬ ಮತ್ತು ಮದುವೆಯ ದಿನದಂತೆ ಈ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ತಾವು ಪಕ್ಷದ ನಾಯಕರಾಗಿ ನಾಲ್ಕೂವರೆ ವರ್ಷಗಳು ಕಳೆದಿವೆ. ಡಿಎಂಕೆ ಯುವ ಘಟಕದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸುತ್ತಿದ್ದೇನೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ನಾವು ನಮ್ಮ ಸಿಎಂ ಅವರನ್ನು ಆಹ್ವಾನಿಸುತ್ತೇವೆ. ಪಕ್ಷದ ಹಿರಿಯರಾದ ದಿವಂಗತ ಎಂ.ಕರುಣಾನಿಧಿ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ನಾವು ತಮಿಳುನಾಡಿನಾದ್ಯಂತ 15 ಗ್ರಂಥಾಲಯಗಳನ್ನು ತೆರೆದಿದ್ದೇವೆ'' ಎಂದು ತಿಳಿಸಿದರು.

ಮಾಜಿ ಸಿಎಂ ಕೆ.ಪಳನಿಸ್ವಾಮಿ ವಿರುದ್ಧ ಗರಂ: ಎಐಎಡಿಎಂಕೆಯ ಮಾಜಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ಆಡಳಿತದಲ್ಲಿ ರಾಜ್ಯ ವಂಚಿತವಾಗಿತ್ತು. ಜನರು ಪಾವತಿಸಿದ ಒಟ್ಟು ತೆರಿಗೆಯಲ್ಲಿ ಒಂದು ರೂಪಾಯಿಗೆ 29 ಪೈಸೆ ಮಾತ್ರ ತಮಿಳುನಾಡಿಗೆ ವಾಪಸ್ ಬರುತ್ತಿತ್ತು. ಜನರು 5 ಲಕ್ಷ ಕೋಟಿ ತೆರಿಗೆ ಪಾವತಿಸಿದ್ದು, ಈವರೆಗೆ 2 ಸಾವಿರ ಕೋಟಿ ಮಾತ್ರ ಬಂದಿತ್ತು'' ಎಂದು ಗರಂ ಆದ ಅವರು, ''ಹೆಮ್ಮೆಯ ತಮಿಳು, ಸ್ಟಾಲಿನ್ ತಮಿಳು ಸಂಸ್ಕೃತಿಯನ್ನು ಪ್ರತಿಪಾದಿಸುವ ಪದಗಳಿಗೆ ಎಂದಿಗೂ ಕಡಿಮೆಯಿಲ್ಲ. ನಮ್ಮ ಪರಂಪರೆಯ ಮೇಲೆ ದಾಳಿಯಾದರೆ, ನಾವು ಪ್ರಾಣ ಕೊಡಲು ಸಿದ್ಧರಿದ್ದೇವೆ. ಅವರು 2,000 ವರ್ಷಗಳ ಕಾಲ ನಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಲಾಗಿದೆ. ಆದರೆ, ತಮಿಳು ಅಸ್ಮಿತೆಯನ್ನು ನಾಶಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಶರಣಾಗತಿ, ಮತ್ತೆ ಜೈಲುವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.