ETV Bharat / bharat

ತೀವ್ರಗೊಂಡ ಮರಾಠ ಮೀಸಲಾತಿ ಪ್ರತಿಭಟನೆ: ಸರ್ಕಾರಿ ಬಸ್‌ಗೆ ಬೆಂಕಿ, ಕರ್ಫ್ಯೂ ಜಾರಿ

author img

By ETV Bharat Karnataka Team

Published : Feb 26, 2024, 10:54 AM IST

ತೀವ್ರಗೊಂಡ ಮರಾಠ ಮೀಸಲಾತಿ ಪ್ರತಿಭಟನೆ
ತೀವ್ರಗೊಂಡ ಮರಾಠ ಮೀಸಲಾತಿ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರ ಕಾವು ಪಡೆದುಕೊಂಡಿದೆ. ಇಂದು ನಡೆದ ಹೋರಾಟದಲ್ಲಿ ಬಸ್​​ಗೆ ಬೆಂಕಿ ಹಚ್ಚಿ ಸುಡಲಾಗಿದೆ.

ಮುಂಬೈ (ಮಹಾರಾಷ್ಟ್ರ): ಮರಾಠ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಹೋರಾಟಗಾರು ಅಂಬಾದ್​ ಎಂಬಲ್ಲಿ ಸರ್ಕಾರಿ ಬಸ್​​ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗದ (ಒಬಿಸಿ) ಕೋಟಾದಲ್ಲಿ ಮೀಸಲಾತಿ ನೀಡಬೇಕು ಎಂದು ಕೋರಿ ಹೋರಾಟಗಾರ ಮನೋಜ್​ ಜಾರಂಗೆ ಸರ್ಕಾರದ ವಿರುದ್ಧ ಕೆಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉದ್ಯೋಗ, ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಸಿಎಂ ಏಕನಾಥ್​ ಶಿಂಧೆ ನೇತೃತ್ವದ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಆದರೆ, ಇದಕ್ಕೂ ವಿರೋಧ ವ್ಯಕ್ತವಾಗಿದೆ.

ಹೋರಾಟಕ್ಕೆ ಸೂಚಿಸಿದ ಜಾರಂಗೆ: ಸರ್ಕಾರ ಮರಾಠರಿಗೆ ನೀಡಿದ ಆಶ್ವಾಸನೆಯಂತೆ ನಡೆದುಕೊಂಡಿಲ್ಲ. ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲು ಹೋರಾಟಗಾರ ಮನೋಜ್​ ಜಾರಂಗೆ ಕರೆ ನೀಡಿದ್ದಾರೆ. ಇದರಿಂದ ರಾಜ್ಯದ ಹಲವೆಡೆ ಮರಾಠ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ. ಸೋಮವಾರದಂದು ಅಂಬಾದ್​ನಲ್ಲಿ ಸರ್ಕಾರಿ ಬಸ್​ಗೆ ಬೆಂಕಿ ಹಚ್ಚಿದ್ದಾರೆ. ಭಾರೀ ಪ್ರಮಾಣದಲ್ಲಿ ಜನರು ಸೇರಿರುವ ಕಾರಣ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಬಸ್ ಸಂಚಾರ ರದ್ದು: ಪ್ರತಿಭಟನಾಕಾರರು ಸರ್ಕಾರಿ ಬಸ್​ಗಳನ್ನು ಗುರಿಯಾಗಿಸಿಕೊಂಡ ಹಿನ್ನೆಲೆಯಲ್ಲಿ ಜಲ್ನಾ ಪ್ರದೇಶದಲ್ಲಿ ಸಂಚಾರವನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಕಾರಣ ಪೊಲೀಸ್​ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಬಸ್​ ಬಿಡುವುದನ್ನು ತಡೆ ಹಿಡಿಯಲಾಗಿದೆ. ಜೊತೆಗೆ ಅಂಬಾದ್​ನಲ್ಲಿ ಬಸ್​​ ಸುಟ್ಟು ಹಾಕಿದ್ದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಡಿಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ: ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಮನೆಗೆ ಮುತ್ತಿಗೆ ಹಾಕಲು ಹೋರಾಟಗಾರ ಮನೋಜ್​ ಜಾರಂಗೆ ಉಪವಾಸ ನಿರಶನ ಬಿಟ್ಟು ತೆರಳಿದ್ದಾರೆ. ಇದರಿಂದ ಬೀಡು - ಸೊಲ್ಲಾಪುರ- ಜಲ್ನಾ ಹೆದ್ದಾರಿ ಹಾಗೂ ಅಂಬಾದ್​ ತಾಲೂಕಿನಲ್ಲಿ ಮರಾಠಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆ ಇದೆ. ಅಂಬಾದ್​ ತಾಲೂಕಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಕೊಲೆ ಮಾಡುವ ಯತ್ನ: ಮರಾಠ ಸಮುದಾಯದ ಪರವಾಗಿ ಹೋರಾಡುತ್ತಿರುವ ನನ್ನನ್ನು ಹತ್ಯೆ ಮಾಡಲು ಡಿಸಿಎಂ ದೇವೇಂದ್ರ ಫಡ್ನವೀಸ್​ ಸಂಚು ರೂಪಿಸಿದ್ದಾರೆ ಎಂದು ಹೋರಾಟಗಾರ ಮನೋಜ್​ ಜಾರಂಗೆ ಆರೋಪಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ನಡೆಸಲಾಗುತ್ತಿದೆ. ಅದನ್ನು ಹತ್ತಿಕ್ಕಲು ನನ್ನ ಹತ್ಯಗೂ ಸಂಚು ನಡೆದಿದೆ ಎಂದಿದ್ದಾರೆ.

ಇದನ್ನೂ ಓದಿ: ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇ.10 ಮೀಸಲು ಮಸೂದೆಗೆ ಸದನ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.