ETV Bharat / bharat

ಕತಾರ್‌ನಿಂದ ತಾಯ್ನಾಡಿಗೆ ಮರಳಿದ ನೌಕಾಪಡೆ ಮಾಜಿ ಯೋಧರಿಂದ ಪ್ರಧಾನಿ ಮೋದಿ ಶ್ಲಾಘನೆ

author img

By ETV Bharat Karnataka Team

Published : Feb 12, 2024, 11:07 AM IST

ಕತಾರ್‌ನಲ್ಲಿ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಸಿಲುಕಿದ್ದ ಭಾರತೀಯ ನೌಕಾಪಡೆಯ ಮಾಜಿ ಯೋಧರು ಬಿಡುಗಡೆಯಾಗಿರುವ ಹಿನ್ನೆಲೆ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಸುಮಾರು 18 ತಿಂಗಳ ಕಾಲ ಜೈಲಿನಲ್ಲಿದ್ದ 8 ಮಾಜಿ ಯೋಧರನ್ನು ಕತಾರ್​ ಬಿಡುಗಡೆ ಮಾಡಿದೆ.

Etv Bharat
Etv Bharat

ನವದೆಹಲಿ: ಸುಮಾರು 18 ತಿಂಗಳುಗಳವರೆಗೆ ಕತಾರ್ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರು ಬಿಡುಗಡೆಯಾಗಿ ಸ್ವದೇಶಕ್ಕೆ ಕಾಲಿಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೇಹುಗಾರಿಕೆ ಆರೋಪದ ಮೇಲೆ ಭಾರತೀಯ ನೌಕಾಪಡೆಯ 8 ಮಾಜಿ ಯೋಧರಿಗೆ ಮರಣದಂಡನೆ ಶಿಕ್ಷೆಗೆ ಒಳಗಿದ್ದರು. ಈ ಪೈಕಿ ಏಳು ಮಾಜಿ ಸೈನಿಕರು ಸ್ವದೇಶಕ್ಕೆ ಮರಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ''ಪ್ರಧಾನಿ ಮೋದಿಯವರ ಸತತ ಪ್ರಯತ್ನದಿಂದ ತಮ್ಮ ಬಿಡುಗಡೆ ಸಾಧ್ಯವಾಗಿದೆ. ಪ್ರಧಾನಿ ಮೋದಿಯವರು ನಮ್ಮ ಬಿಡುಗಡೆಗೆ ಪ್ರಯತ್ನ ಮಾಡದೇ ಇದ್ದಿದ್ದರೆ, ಬಹುಶಃ ಇವತ್ತು ನಾವು ಇಲ್ಲಿಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ'' ಎಂದು ಅವರು ತಿಳಿಸಿದರು.

'ಭಾರತ ಮಾತಾ ಕಿ ಜೈ' ಎಂದ ಮಾಜಿ ಸೈನಿಕರು: ಬಿಡುಗಡೆಯಾಗಿ ನಿರಾಳರಾದ ನೌಕಾಪಡೆಯ ಏಳು ಮಾಜಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ನಂತರ 'ಭಾರತ ಮಾತಾ ಕಿ ಜೈ' ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಪ್ರಧಾನಿಯವರ ನಿರಂತರ ರಾಜತಾಂತ್ರಿಕ ಪ್ರಯತ್ನದ ನಂತರ ಮರಣದಂಡನೆ ಶಿಕ್ಷೆಯಿಂದ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.

ತಾಯ್ನಾಡಿಗೆ ಮರಳಿ ಸಂತಸ ವ್ಯಕ್ತಪಡಿಸಿದ ಮಾಜಿ ಯೋಧರು: ''ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ಮೋದಿ ಭಾರತೀಯರ ಯೋಗಕ್ಷೇಮದ ಬಗ್ಗೆ ಚರ್ಚಿಸಿದ್ದರು. ಅಂತಿಮವಾಗಿ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದೇವೆ. ನಮಗೆ ಸಮಾಧಾನ ಮತ್ತು ಸಂತೋಷ ಲಭಿಸಿದೆ. ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ನಮ್ಮ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಅವರ ವೈಯಕ್ತಿಕ ಮಾತುಕತೆ, ಸಂಪರ್ಕ ಇಲ್ಲದೇ ಇದ್ದಿದ್ದರೆ ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ'' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

''ನಾನು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಪ್ರಧಾನಿ ಮೋದಿಯವರ ಮಧ್ಯಸ್ಥಿಕೆ ಇಲ್ಲದೇ ನಾವು ಬಿಡುಗಡೆಯಾಗುತ್ತಿರಲಿಲ್ಲ. ನಮ್ಮ ಬಿಡುಗಡೆಗೆ ಮೋದಿಯವರ ಅವಿರತ ಪ್ರಯತ್ನಗಳು ಇಲ್ಲದೇ ಇದ್ದಿದ್ದರೆ, ನಾವು ಇಂದು ನಿಮ್ಮ ಮುಂದೆ ನಿಲ್ಲುತ್ತಿರಲಿಲ್ಲ'' ಎಂದು ಬಿಡುಗಡೆಯಾದ ಮತ್ತೊಬ್ಬ ನೌಕಾಪಡೆಯ ಮಾಜಿ ಯೋಧ ಹೇಳಿದರು.

''ನಾವು ಮತ್ತು ಮನೆಯಲ್ಲಿರುವ ನಮ್ಮ ಕುಟುಂಬ ಸದಸ್ಯರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಪ್ರಧಾನಿ ಮೋದಿ ಅವರಿಂದಾಗಿ ಇದೆಲ್ಲವೂ ಯಶಸ್ವಿಯಾಗಿದೆ. ಮೋದಿ ಅವರು ಕತಾರ್ ಸರ್ಕಾರದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ್ದರು. ಮತ್ತು ಅಂತಿಮವಾಗಿ ನಮ್ಮನ್ನು ಬಿಡುಗಡೆ ಮಾಡಲು ಸತತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದು ಮಾಜಿ ಸೈನಿಕರು ತಿಳಿಸಿದರು.

ನೌಕಾಪಡೆಯ ಮತ್ತೊಬ್ಬ ಮಾಜಿ ಅಧಿಕಾರಿ ಮಾತನಾಡಿ, ''ಈ ವಿಷಯದಲ್ಲಿ ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ನಾನು ಕತಾರ್ ಎಮಿರ್‌ಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ನಾವು ಸುಮಾರು 18 ತಿಂಗಳುಗಳಿಂದ ಮನೆಗೆ ಮರಳಲು ಕಾಯುತ್ತಿದ್ದೆವು. ನಮ್ಮನ್ನು ಮರಳಿ ಕರೆತಂದ ಪ್ರಧಾನಿ ಮೋದಿ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ'' ಎಂದು ಖುಷಿ ಹಂಚಿಕೊಂಡರು.

ಇದನ್ನೂ ಓದಿ: ಭಾರತೀಯ ನೌಕಾಪಡೆಯ 8 ಮಾಜಿ ಯೋಧರ ಬಿಡುಗಡೆ ಮಾಡಿದ ಕತಾರ್: 7 ಮಂದಿ ಭಾರತಕ್ಕೆ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.