ETV Bharat / bharat

ಭೀಕರ ಅಪಘಾತ: ಮಹಾರಾಷ್ಟ್ರಕ್ಕೆ ಮದುವೆಗೆಂದು ತೆರಳುತ್ತಿದ್ದ ಬಾಗಲಕೋಟೆಯ ಐವರು ದುರ್ಮರಣ - Road Accident

author img

By ETV Bharat Karnataka Team

Published : Apr 18, 2024, 9:08 AM IST

cruiser accident
ಕ್ರೂಸರ್ ಅಪಘಾತ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ಮೂಲದ ಐವರು ಮೃತಪಟ್ಟಿದ್ದಾರೆ.

ಸಾಂಗ್ಲಿ (ಮಹಾರಾಷ್ಟ್ರ): ಖಾಸಗಿ ಬಸ್‌ಗೆ ಹಿಂಬದಿಯಿಂದ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಅಸುನೀಗಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಂಭುಲ್ವಾಡಿ ಪ್ರದೇಶದ ವಿಜಯಪುರ - ಗುಹಾಗರ್ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೃತರೆಲ್ಲರೂ ಕರ್ನಾಟಕದ ಬಾಗಲಕೋಟೆ ಮೂಲದವರೆಂದು ತಿಳಿದುಬಂದಿದೆ.

Accident
ಅಪಘಾತ

ಅಲ್ಲದೆ, ದುರ್ಘಟನೆಯಲ್ಲಿ ಇತರ 11 ಜನರು ಗಾಯಗೊಂಡಿದ್ದಾರೆ. ಬಾಗಲಕೋಟೆಯ ಜಮಖಂಡಿಯ ಜನರು ಮದುವೆ ಸಮಾರಂಭಕ್ಕೆ ಎಂದು ಸಾಂಗ್ಲಿಯ ತಾಸಗಾಂವ್ ತಾಲೂಕಿನ ಸವರ್ಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜಂಭುಲ್ವಾಡಿ ಗ್ರಾಮದ ಬಳಿ ಖಾಸಗಿ ಬಸ್​​ಗೆ ಕ್ರೂಸರ್​​ ಗುದ್ದಿದೆ. ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಕ್ರೂಸರ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಅರಿತ ಅಕ್ಕಪಕ್ಕದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

ಸಾಂಗ್ಲಿಗೆ ಮದುವೆಗೆ ಎಂದು ಎರಡು ಕ್ರೂಸರ್‌ಗಳಲ್ಲಿ ಜನರು ಪ್ರಯಾಣಿಸುತ್ತಿದ್ದರು. ವಾಹನವು​ ನಜ್ಜುಗುಜ್ಜಾದ ಕಾರಣ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಸಾಕಷ್ಟು ಹರಸಾಹಸ ಪಡುವಂತಾಯಿತು. ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ.

ಗಾಯಗೊಂಡ 11 ಜನರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಧಲ್ಗಾಂವ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಮೀರಜ್‌ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:ಗುಜರಾತ್: ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಮಗು ಸೇರಿ 10 ಮಂದಿ ಸಾವು - Car Rams Into Truck

ETV Bharat Logo

Copyright © 2024 Ushodaya Enterprises Pvt. Ltd., All Rights Reserved.