ETV Bharat / bharat

ಕೇರಳದಲ್ಲಿ ಯುಡಿಎಫ್​, ಎಲ್​ಡಿಎಫ್​ ಮಧ್ಯೆ 'ಡ್ರೈ ಡೇ' ವಾರ್: ಏನಿದು ವಿವಾದ? - Kerala Liquor Policy

author img

By PTI

Published : May 26, 2024, 2:12 PM IST

ಕೇರಳ ಸರ್ಕಾರ ತಿಂಗಳ ಮೊದಲನೇ ದಿನದಂದು ಡ್ರೈ ಡೇ ರದ್ದು ಮಾಡುವ ಚಿಂತನೆ ನಡೆಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಎಲ್​ಡಿಎಪ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಕೇರಳದಲ್ಲಿ ಯುಡಿಎಫ್​, ಎಲ್​ಡಿಎಫ್​ ಮಧ್ಯೆ 'ಡ್ರೈ ಡೇ' ವಾರ್: ಏನಿದು ವಿವಾದ?
ಕೇರಳದಲ್ಲಿ ಯುಡಿಎಫ್​, ಎಲ್​ಡಿಎಫ್​ ಮಧ್ಯೆ 'ಡ್ರೈ ಡೇ' ವಾರ್: ಏನಿದು ವಿವಾದ? (IANS)

ಕೊಚ್ಚಿ: ಕೇರಳದಲ್ಲಿ 'ಡ್ರೈ ಡೇ' ಅಬಕಾರಿ ನೀತಿಯನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಅಬಕಾರಿ ಸಚಿವ ಎಂ.ಬಿ.ರಾಜೇಶ್ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೌನವನ್ನು ಪ್ರಶ್ನಿಸಿರುವ ವಿರೋಧ ಪಕ್ಷ ಕಾಂಗ್ರೆಸ್, ದೂರು ಬಂದರೂ ಆರೋಪಗಳ ಬಗ್ಗೆ ವಿಚಕ್ಷಣಾ ತನಿಖೆಗೆ ಏಕೆ ಆದೇಶಿಸಿಲ್ಲ ಎಂದು ಪ್ರಶ್ನಿಸಿದೆ.

ಅಬಕಾರಿ ನೀತಿ ಬದಲಾವಣೆ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಅಬಕಾರಿ ಸಚಿವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಕೇರಳ ರಾಜ್ಯ ಸರ್ಕಾರವು 'ಡ್ರೈ ಡೇ' ನಿಯಮವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್​ ತೀವ್ರ ವಾಗ್ದಾಳಿ ನಡೆಸುತ್ತಿದೆ.

ಪ್ರತಿ ತಿಂಗಳ ಮೊದಲ ಕ್ಯಾಲೆಂಡರ್ ದಿನದಂದು ಕೇರಳ ರಾಜ್ಯಾದ್ಯಂತ ಶುಷ್ಕ ದಿನ ಅಥವಾ ಡ್ರೈ ಡೇ ಇರುತ್ತದೆ. ಅಂದರೆ ಈ ದಿನದಂದು ಮದ್ಯದಂಗಡಿಗಳು ಮತ್ತು ಬಾರ್ ಗಳು ಮುಚ್ಚಲ್ಪಟ್ಟಿರುತ್ತವೆ. ತಿಂಗಳ ಮೊದಲ ದಿನ ಸಂಬಳದ ದಿನವಾಗಿರುವುದರಿಂದ ಅಂದು ತಮ್ಮ ದುಡಿಮೆಯ ಹಣವನ್ನು ಜನತೆ ಮದ್ಯದ ಮೇಲೆ ಮೋಜಿಗಾಗಿ ಖರ್ಚು ಮಾಡದಂತೆ ಜಾಗೃತಗೊಳಿಸಲು ಡ್ರೈ ಡೇ ಕಡ್ಡಾಯ ಮಾಡಲಾಗಿದೆ.

ಬಾರ್ ಮಾಲೀಕರಿಂದ ಲಂಚ ಪಡೆದು ಅವರಿಗೆ ಅನುಕೂಲವಾಗುವಂತೆ ಎಲ್​ಡಿಎಫ್ ಸರ್ಕಾರ ನಿಯಮ ರೂಪಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ. ಆದರೆ ರಾಜ್ಯ ಸರ್ಕಾರದ ಮದ್ಯ ನೀತಿಯ ಬಗ್ಗೆ ಈವರೆಗೆ ಯಾವುದೇ ಯಾವುದೇ ಚರ್ಚೆ ನಡೆದಿಲ್ಲ ಎಂದು ಎಲ್​ಡಿಎಫ್​ ಹೇಳಿಕೊಂಡಿವೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಡ್ರೈ ಡೇ ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂಬ ಪ್ರವಾಸೋದ್ಯಮ ಮತ್ತು ಅಬಕಾರಿ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದರು.

ಇಬ್ಬರೂ ಸಚಿವರು ಶುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರದ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ ಮತ್ತು ಅದರ ನಂತರ ಬಾರ್ ಮಾಲೀಕರು ತಮಗೆ ಅನುಕೂಲಕರವಾದ ಮದ್ಯ ನೀತಿಗಾಗಿ ಸರ್ಕಾರಕ್ಕೆ ನೀಡಲು ಹಣ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು. ಬಾರ್ ಹಗರಣದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

'ಅನುಕೂಲಕರ ಮದ್ಯ ನೀತಿ'ಗಾಗಿ ಹಣ ಪಾವತಿಸುವಂತೆ ಬಾರ್ ಅಸೋಸಿಯೇಷನ್ ಸದಸ್ಯರೊಬ್ಬರು ಇತರ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಆರೋಪಿಸಲಾದ ಆಡಿಯೋ ಕ್ಲಿಪ್ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ನಂತರ 'ಡ್ರೈ ಡೇ' ನೀತಿಯನ್ನು ಹಿಂತೆಗೆದುಕೊಳ್ಳುವ ವಿಷಯದಲ್ಲಿ ತೀವ್ರ ವಿವಾದ ಏರ್ಪಟ್ಟಿದೆ.

ಬಾರ್ ಮಾಲೀಕರಿಗೆ ಅನುಕೂಲಕರ ನೀತಿಯನ್ನು ರೂಪಿಸಲು ಎಡಪಕ್ಷಗಳ ಸರ್ಕಾರವು 20 ಕೋಟಿ ರೂ. ಲಂಚ ಕೇಳಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದ್ದು, ಸಚಿವ ರಾಜೇಶ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಆರೋಪಗಳು ಮತ್ತು ಪ್ರತಿಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದ ರಾಜೇಶ್, ರಾಜ್ಯ ಸರ್ಕಾರವು ಮದ್ಯ ನೀತಿಯ ಬಗ್ಗೆ ಇನ್ನೂ ಯಾವುದೇ ಚರ್ಚೆಗಳನ್ನು ನಡೆಸಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ ಬೆಂಗಳೂರು ರೇವ್​ ಪಾರ್ಟಿ!; ನಮ್ಮ ರಾಜಧಾನಿಯೇ ಕೇಂದ್ರವಾಗಿದ್ದೇಕೆ? - Bengaluru Rave Party Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.