ETV Bharat / bharat

ಪಶ್ಚಿಮ ಬಂಗಾಳ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ

author img

By ETV Bharat Karnataka Team

Published : Jan 25, 2024, 4:01 PM IST

Congress Bharat Jodo Nyay Yatra led by Rahul Gandhi entered West Bengal from Assam
ಪಶ್ಚಿಮ ಬಂಗಾಳ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ

ಮಣಿಪುರದಿಂದ ಆರಂಭವಾಗಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳ ತಲುಪಿದೆ.

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುರುವಾರ ಪಶ್ಚಿಮ ಬಂಗಾಳ ಪ್ರವೇಶಿಸಿದೆ. ಜನವರಿ 14ರಿಂದ ಆರಂಭವಾಗಿರುವ ಯಾತ್ರೆಯು ಅಸ್ಸೋಂ ಮೂಲಕ ಗಡಿ ಜಿಲ್ಲೆ ಕೂಚ್ ಬೆಹಾರ್​ನ ಬೋಕ್ಸಿರ್‌ಹಟ್‌ಗೆ ಆಗಮಿಸಿದೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಲೋಕಸಭೆಯಲ್ಲಿ ಪಕ್ಷದ ಸಂಸದೀಯ ನಾಯಕರಾದ ಅಧೀರ್ ರಂಜನ್​ ಚೌಧರಿ ಮತ್ತು ವಿವಿಧ ನಾಯಕರು ಅಸ್ಸೋಂ-ಪಶ್ಚಿಮ ಬಂಗಾಳ ಗಡಿಯ ಬೋಕ್ಸಿರ್‌ಹಾಟ್ ಜಂಕ್ಷನ್‌ನಲ್ಲಿ ರಾಹುಲ್​ ಗಾಂಧಿ ಮತ್ತು ಯಾತ್ರಿಗಳನ್ನು ಬರಮಾಡಿಕೊಂಡರು. ರಾಹುಲ್ ಗಾಂಧಿ ರಾಜ್ಯಕ್ಕೆ ತಲುಪುತ್ತಿದ್ದಂತೆ ಸಂಭ್ರಮಿಸಿದ ಪಕ್ಷದ ಕಾರ್ಯಕರ್ತರು ಭೈರತಿ ನೃತ್ಯ ಪ್ರದರ್ಶಿಸಿದರು.

ಬಳಿಕ ವೇದಿಕೆಯ ಕಾರ್ಯಕ್ರಮ ಉದ್ದೇಶಿಸಿದ ಭಾಷಣ ರಾಹುಲ್ ಗಾಂಧಿ, ಇಂದು ನಾವು ಅಸ್ಸೋಂನಿಂದ ಪಶ್ಚಿಮ ಬಂಗಾಳ ತಲುಪಿದ್ದೇವೆ. ಅಸ್ಸೋಂನಲ್ಲಿ ಯಾತ್ರೆಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಕ್ಕೆ ಆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ, ಪಶ್ಚಿಮ ಬಂಗಾಳ ಪ್ರವೇಶಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ನಾನು ನಿಮ್ಮ ಪರವಾಗಿ ನಿಲ್ಲಲು ಬಂದಿದ್ದೇನೆ. ನಮ್ಮನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ನಾಯಕರು ಮತ್ತು ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ಇದೇ ವೇಳೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿ, ದೇಶದ ಜನತೆಗೆ ಬಿಜೆಪಿ - ಆರ್‌ಎಸ್‌ಎಸ್ ಅನ್ಯಾಯ ಮಾಡುತ್ತಿದೆ. ಜೊತೆಗೆ ದ್ವೇಷ ಮತ್ತು ಹಿಂಸೆ ಹರಡುತ್ತಿದೆ. ಇದಕ್ಕಾಗಿ, ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಡಲು ಕಾಂಗ್ರೆಸ್​ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರಾರಂಭಿಸಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.

ಯಾತ್ರೆಯ ವೇಳಾಪಟ್ಟಿಯಲ್ಲಿ ಬದಲಾವಣೆ: ಭಾರತ್ ಜೋಡೋ ನ್ಯಾಯ ಯಾತ್ರೆಯು ಮಣಿಪುರದಿಂದ ಪ್ರಾರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ಮುಕ್ತಾಯಗೊಳ್ಳಲಿದೆ. ಗುರುವಾರದಿಂದ ಎರಡು ಹಂತಗಳಲ್ಲಿ ಐದು ದಿನಗಳ ಕಾಲ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಸಂಚರಿಸಲಿದ್ದಾರೆ. ಆದರೆ, ರಾಜ್ಯದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯಿಂದಾಗಿ ಜನವರಿ 28 ರಂದು ನಿಗದಿಯಾಗಿದ್ದ ಯಾತ್ರೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಈ ಹಿಂದೆ ವೇಳಾಪಟ್ಟಿ ಪ್ರಕಾರ, ಜನವರಿ 28ರಂದು ಜಲ್ಪೈಗುರಿ ಪಟ್ಟಣಕ್ಕೆ ಯಾತ್ರೆ ಪ್ರವೇಶಿಸಬೇಕಿತ್ತು. ಆದರೆ, ಪೊಲೀಸ್ ನೇಮಕಾತಿ ಪರೀಕ್ಷೆ ಕಾರಣ ಜಲ್ಪೈಗುರಿ ಪಟ್ಟಣಕ್ಕೆ ಪ್ರವೇಶಿಸದಂತೆ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದೆ. ಅಂದು ಮಧ್ಯಾಹ್ನ ಯಾತ್ರೆಯು ಜಲ್ಪೈಗುರಿ ಪ್ರವೇಶಿಸದೆ, ನಗರದ ಹೊರಗೆ ತಂಗಲಿದೆ. ಅಲ್ಲಿಯೇ ರಾಹುಲ್​ ಗಾಂಧಿ ಭೋಜನ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಟಿಎಂಸಿ ಪ್ರತಿಭಟನೆ: ಇದರ ನಡುವೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕೂಚ್ ಬೆಹಾರ್​ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಗಾಂಧಿ ಯಾತ್ರೆಗೆ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ಆದರೆ, ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ವಿರುದ್ಧವಾಗಿ ಅಧೀರ್ ಚೌಧರಿ ನೀಡಿದ ಹೇಳಿಕೆಯಿಂದಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿ ಬಂಧನ: ಅಸ್ಸೋಂ ಸಿಎಂ ಶರ್ಮಾ.. ಹಿಮಂತ ಭ್ರಷ್ಟ ಎಂದ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.