ETV Bharat / bharat

ವರುಣ್ ಗಾಂಧಿ ಹಿಡಿತದಲ್ಲಿರುವ ಪಿಲಿಭಿತ್‌ನಲ್ಲಿ ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿ: ಬಿಜೆಪಿ ಅಭ್ಯರ್ಥಿ ಮುಂದಿದೆ ಸವಾಲುಗಳು - pm modi pilibhit visit

author img

By ETV Bharat Karnataka Team

Published : Apr 9, 2024, 10:33 PM IST

challenge-for-bjp-to-win-in-pilibhit-without-varun-hence-pm-modi-held-public-meeting-first-time
ವರುಣ್ ಗಾಂಧಿ ಹಿಡಿತದಲ್ಲಿರುವ ಪಿಲಿಭಿತ್‌ನಲ್ಲಿ ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿ: ಬಿಜೆಪಿ ಅಭ್ಯರ್ಥಿ ಮುಂದಿದೆ ಸವಾಲುಗಳು

ಮೇನಕಾ ಮತ್ತು ವರುಣ್ ಗಾಂಧಿ ಅವರ ಭದ್ರಕೋಟೆಯಾಗಿರುವ ಪಿಲಿಭಿತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟಿಕೆಟ್​ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಚುನಾವಣಾ ರ‍್ಯಾಲಿ ನಡೆಸಿದ್ದಾರೆ.

ಲಖನೌ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಪಿಲಿಭಿತ್​ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದಾರೆ. ವರುಣ್ ಗಾಂಧಿಗೆ ಪಿಲಿಭಿತ್​ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಪಿಲಿಭಿತ್ ಕ್ಷೇತ್ರ ಮನೇಕಾ ಗಾಂಧಿ ಮತ್ತು ಅವರ ಮಗ ವರುಣ್ ಗಾಂಧಿ ಹಿಡಿತದಲ್ಲಿದೆ. ಸ್ಪಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್​ ನೀಡಿಲ್ಲ. ಈ ಕ್ಷೇತ್ರಕ್ಕೆ ಅವರ ಬದಲಾಗಿ ಜಿತಿನ್ ಪ್ರಸಾದ್​ಗೆ ಬಿಜೆಪಿ ಮಣೆ ಹಾಕಿದೆ​. ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಸ್ವತಃ ಪ್ರಧಾನಿ ಮೋದಿ ಅವರೇ ಇಲ್ಲಿಗೆ ಬಂದು ಭರ್ಜರಿ ಪ್ರಚಾರ ನಡೆಸಿದ್ದಾರೆ.

ಪಿಲಿಭಿತ್‌ನಲ್ಲಿ ತಾಯಿ - ಮಗನದ್ದೇ ಪ್ರಾಬಲ್ಯ: 1989ರಲ್ಲಿ ಮನೇಕಾ ಗಾಂಧಿ ಜನತಾ ದಳದಿಂದ ಪಿಲಿಭಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದರು. ನಂತರ 1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಂತೋಷ್ ಗಂಗ್ವಾರ್ ಎದುರು ಸೋಲುಂಡರು. 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಮತ್ತೊಮ್ಮೆ ಸಂಸತ್​ ಮೇಟ್ಟಿಲೇರಿದ್ದರು. 1998, 1999ರಲ್ಲಿ ಬಿಜೆಪಿಯ ಬೆಂಬಲದೊಂದಿಗೆ ಮನೇಕಾ ಗಾಂಧಿ ಪಕ್ಷೇತರ ಅಭ್ಯರ್ಥಿಯಾಗಿ ಪಿಲಿಭಿತ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಬಳಿಕ 2004 ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ, ಅದೇ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬೀಗಿದರು.

ಈ ಕ್ಷೇತ್ರದಲ್ಲಿ ಮನೇಕಾ ಗಾಂಧಿ ಅವರ ಸತತವಾಗಿ ಗೆಲುವು ಸಾಧಿಸುವಲ್ಲಿ ವರುಣ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. 2009ರಲ್ಲಿ ವರುಣ್ ಗಾಂಧಿ ಬಿಜೆಪಿಯಿಂದ ಪಿಲಿಭಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರೆ, ಮನೇಕಾ ಗಾಂಧಿ ಸುಲ್ತಾನ್ ಪುರದಿಂದ ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ತಾಯಿ - ಮಗನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿಕೊಂಡರು. ವರುಣ್ ಅವರನ್ನು ಸುಲ್ತಾನ್ ಪುರ ದಿಂದ ಮತ್ತು ಮನೇಕಾ ಗಾಂಧಿ ಪಿಲಿಭಿತ್​ನಿಂದ ಸ್ಪರ್ಧಿಸಿ ಜಯಗಳಿಸಿದರು.

ಜಿತಿನ್ ಪ್ರಸಾದ್​ಗೆ ವರುಣ್ ಜನಪ್ರಿಯತೆ ಸವಾಲು: ವರುಣ್ ಗಾಂಧಿ 1999 ರಲ್ಲಿ ಪಿಲಿಭಿತ್‌ನಲ್ಲಿ ತಮ್ಮ ತಾಯಿಯ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅಂದಿನಿಂದ ಇಲ್ಲಿಯ ವರೆಗೂ ವರುಣ್​ ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಿರಂತರವಾಗಿ ರೈತರು ಮತ್ತು ಸ್ಥಳೀಯ ಸಮಸ್ಯೆಗಳನ್ನು ಸಂಸತ್​ನಲ್ಲಿ ಪ್ರಸ್ತಾಪಿಸಿ ಅವುಗಳನ್ನು ಪರಿಹರಿಸಿದ್ದಾರೆ. ಇಷ್ಟೇ ಅಲ್ಲ, ವರುಣ್ ಗಾಂಧಿ ಕ್ಷೇತ್ರದ ಜನರೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಾರೆ, ಇದರಿಂದಾಗಿ ಅವರ ಹಿಡಿತ ಇಲ್ಲಿ ಬಲವಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ವರುಣ್ ತಂಡವೊಂದನ್ನು ರಚಿಸಿದ್ದು, ಅದರಿಂದಲೇ ಇಲ್ಲಿ ಜನಪ್ರಿಯ ನಾಯಕನಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ವರುಣ್​ ಜನಪ್ರಿಯತೆ ದೊಡ್ಡ ಸವಾಲಾಗಿದೆ.

ಪಿಲಿಭಿತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದ್ದಾರೆ. ಇಲ್ಲಿನ ರೈತರು ಆಂದೋಲನದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ವರುಣ್ ಗಾಂಧಿ ಕೂಡ ರೈತರ ಪರ ಧ್ವನಿ ಎತ್ತುತ್ತಲೇ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ವರುಣ್ ಗಾಂಧಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ರೈತರು ಮುನಿಸಿಕೊಂಡರೇ, ಬಿಜೆಪಿ ಅಭ್ಯರ್ಥಿಗೆ ಸೋಲು ಖಚಿತ ಎಂದು ಹೇಳಲಾಗುತ್ತಿದೆ.

ಜಾತಿ ಸಮೀಕರಣ: ಪಿಲಿಭಿತ್ ಲೋಕಸಭಾ ಕ್ಷೇತ್ರದಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60 ರಿಂದ 70 ಸಾವಿರ ಕುರ್ಮಿ ಮತದಾರರು, ಬಿಲಾಸ್​​ಪುರದಲ್ಲಿ 70 ರಿಂದ 80 ಸಾವಿರ ಮತ್ತು ಬರ್ಖೇಡಾದಲ್ಲಿ ಸುಮಾರು 30 ಸಾವಿರ ಕುರ್ಮಿ ಮತದಾರರಿದ್ದಾರೆ. ಬರೇಲಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಕುರ್ಮಿ ಮತದಾರರಿದ್ದಾರೆ. ಇದಲ್ಲದೇ, ಇಡೀ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 30 ರಷ್ಟು ಮುಸ್ಲಿಂ ಮತದಾರರಿದ್ದಾರೆ.

ಇದನ್ನೂ ಓದಿ: ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದ ಅಂತಿಮ: ಯಾರಿಗೆ ಎಷ್ಟು ಸೀಟು? - MVA announces seat sharing

ETV Bharat Logo

Copyright © 2024 Ushodaya Enterprises Pvt. Ltd., All Rights Reserved.