ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ ಆದಿವಾಸಿಗಳಿಗೆ ಸೂರು ಕೊಡುವಂತೆ ಒತ್ತಾಯ
Published : Nov 17, 2023, 6:47 PM IST
ಕೊಡಗು: ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಲೈನ್ ಮನೆಗಳಲ್ಲಿ ಜೀತ ಮಾಡುತ್ತಾ ಬದುಕುತ್ತಿರುವ ದಲಿತ ಆದಿವಾಸಿಗಳಿಗೆ ಸರ್ಕಾರದಿಂದ ಸ್ವಂತ ಸೂರು ಮತ್ತು ಕೃಷಿ ಭೂಮಿ ಒದಗಿಸುವಂತೆ ಆಗ್ರಹಿಸಿ, ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸೂರು ಕೊಡುವಂತೆ ಆಗ್ರಹಿಸಿ ಸರ್ಕಾರವನ್ನು ಕೇಳುತ್ತಿರುವುದು ಹಲವು ದಶಕಗಳ ಬೇಡಿಕೆ. ದಲಿತ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಇನ್ನೂ ಸೂರು ಸಿಕ್ಕಿಲ್ಲ. ಹೀಗಾಗಿ ಮತ್ತೆ ಬೀದಿಗಿಳಿದ ಆದಿವಾಸಿಗಳು, ತಮ್ಮನ್ನು ಜೀತ ಮುಕ್ತಿಗೊಳಿಸುವಂತೆ ಬೇಡಿಕೊಂಡಿದ್ದಾರೆ.
ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಸುದರ್ಶನ ವೃತ್ತದ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಸಾಗಿ ಜಿಲ್ಲಾಡಳಿತ ಭವನ ತಲುಪಿತು. ರಸ್ತೆ ಉದ್ದಕ್ಕೂ ಬೇಡಿಕೆಗಳ ಈಡೇರಿಕೆಗಾಗಿ ಘೋಷಣೆ ಕೂಗುತ್ತಾ ಸಾಗಿದ್ರು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.
ಕೊಡಗಿನಲ್ಲಿ 2,800 ಕುಟುಂಬಗಳು ಜೀತದಾಳುಗಳಾಗಿ ಲೈನ್ಮನೆಗಳಲ್ಲಿ ಬಂಧಿಯಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತವೇ ಅಧಿಕೃತ ಪಟ್ಟಿ ತಯಾರಿಸಿದ್ದರೂ ಇನ್ನೂ ನಿವೇಶನ ಒದಗಿಸಿಲ್ಲ ಎಂದು ದಲಿತ ಆದಿವಾಸಿ ಕೃಷಿ ಕಾರ್ಮಿಕ ಸಂಘದ ರಾಜ್ಯ ಮುಖಂಡ ಡಿ ಎಸ್ ನಿರ್ವಾಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಗರ ಪ್ರದೇಶದ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ.. ದಶಕವಾದರೂ ಫಲಾನುಭವಿಗಳಿಗೆ ಸಿಗದ ಸೂರು