ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ ಜನಸಾಗರ, ಟ್ರಾಫಿಕ್ ಜಾಮ್
![ETV Thumbnail thumbnail](https://etvbharatimages.akamaized.net/etvbharat/prod-images/640-480-17863468-thumbnail-4x3-sa.jpg)
ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದು ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ದಟ್ಟಣೆ ತಪ್ಪಿಸಲು ವಿಮಾನ ನಿಲ್ದಾಣದಿಂದ ಎರಡು ಕಿ.ಮೀ ಹಿಂದೆಯೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಜನರು ಕಿಲೋಮೀಟರ್ಗಟ್ಟಲೆ ನಡೆದುಕೊಂಡೇ ಕಾರ್ಯಕ್ರಮಕ್ಕೆ ಆಗಮಿಸಿದರು.
ವಿಮಾನ ನಿಲ್ದಾಣದೊಳಗಡೆ ವಾಹನ ಬಿಡುವ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ‘‘ನಿಮ್ಮ ಅಧಿಕಾರಿಗಳ ವಾಹನಗಳನ್ನು ಬಿಡುತ್ತಿದ್ದೀರಾ. ನಮ್ಮ ನಾಯಕರ ವಾಹನಗಳಿಗೆ ಯಾಕೆ ಹೀಗೆ ಮಾಡುತ್ತೀರಾ’’ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಆಗಮಿಸಿದ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರಿಗೆ ಪಲಾವ್, ಮೊಸರನ್ನು ಹಾಗು ಮಜ್ಜಿಗೆ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಮುಗಿಯುತ್ತಿದಂತೆ ವಿಮಾನ ನಿಲ್ದಾಣದ ಟರ್ಮಿನಲ್ ವೀಕ್ಷಿಸಲು ಜನರು ಮುಗಿಬಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಇದನ್ನೂ ಓದಿ: ವಿಮಾನ ನಿಲ್ದಾಣ ಇಡೀ ಮಲೆನಾಡಿನ ಕನಸು ನನಸಾಗುವ ಸಂಕೇತ: ಬಿ.ಎಸ್.ಯಡಿಯೂರಪ್ಪ