ಬೆಂಕಿ ಅವಘಡ: ಅಪಾರ ಪ್ರಮಾಣದ ಆಸ್ತಿ ಹಾನಿ, ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರ
ಚಿಕ್ಕೋಡಿ: ಎರಡು ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಒಣ ಮೇವು ಹಾಗೂ ಎರಡರಿಂದ ಮೂರು ಲಕ್ಷ ರೂ ಬೆಲೆ ಬಾಳುವ ಅರಿಶಿಣ ಬೀಜ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಜೊತೆಗೆ ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಅಲಖನೂರ ಗ್ರಾಮದ ಕುಮಾರ ದತ್ತು ಚೌಗಲಾ ಹಾಗೂ ರಮೇಶ ದತ್ತು ಚೌಗಲಾ ಇವರಿಗೆ ಸೇರಿದ ಎರಡು ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ನಾಲ್ಕು ಎಮ್ಮೆಗಳು ಸುಟ್ಟು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ. ಸ್ಥಳಕ್ಕೆ ರಾಯಬಾಗ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆಗಳನ್ನು ಬೆಂಕಿಯಿಂದ ಕಾಪಾಡುವ ಸಮಯದಲ್ಲಿ ಕೆಲ ಸ್ಥಳೀಯರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕೆಇಬಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಾಲೂಕಿನ ಪಶು ವೈದ್ಯಾಧಿಕಾರಿಗಳು ಹಾಗೂ ಹಾರೂಗೇರಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಪಶ್ಚಿಮ ಘಟ್ಟದಲ್ಲಿ ಬೆಂಕಿ ಅವಘಡ: ನಾಲ್ವರು ಅರಣ್ಯ ಸಿಬ್ಬಂದಿಗೆ ಗಾಯ