ಅಮಾವಾಸ್ಯೆ ದಿನ ಮನೆ ಮುಂದೆ ಮಾಟಮಂತ್ರ: ಬೆಳಗಾವಿಯಲ್ಲಿ ಬೆಚ್ಚಿಬಿದ್ದ ಕುಟುಂಬಸ್ಥರು
Published : Sep 15, 2023, 8:44 PM IST
ಬೆಳಗಾವಿ: ಅದೆಷ್ಟೇ ಆಧುನಿಕತೆ ಮುಂದುವರೆದರೂ ಮೂಢನಂಬಿಕೆ, ಮಾಟ-ಮಂತ್ರದಂತಹ ಘಟನೆಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ನಿನ್ನೆ (ಗುರುವಾರ ರಾತ್ರಿ) ಗೋಕಾಕ್ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದ ಮಾಟ- ಮಂತ್ರವೇ ಸಾಕ್ಷಿ ಎನ್ನಬಹುದು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಬಸವ್ವ ಚನ್ನಯ್ಯ ಮಠಪತಿ ಎಂಬವರ ಮನೆ ಮೆಟ್ಟಿಲುಗಳ ಮುಂದಿನ ರಸ್ತೆಯಲ್ಲಿ ತಲೆ ಬುರುಡೆ, ನಿಂಬೆ ಹಣ್ಣಿ ಇಟ್ಟಿರುವುದು ಕಂಡು ಬಂದಿದೆ.
ಮನೆಯವರು ಇಂದು (ಶುಕ್ರವಾರ) ಬೆಳಗ್ಗೆದ್ದು ನೋಡಿದಾಗ ಮನೆ ಮುಂದೆ ತಲೆ ಬುರುಡೆ, ನಿಂಬೆಹಣ್ಣು, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ನಿಂಬೆಹಣ್ಣಿನ ಮೇಲೆ ಮನೆಯವರ ಹೆಸರುಗಳನ್ನು ಬರೆದಿದ್ದಾರೆ. ಇದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. "ನಮಗೆ ಯಾರೋ ಆಗದವರು ಈ ರೀತಿ ಮಾಡಿದ್ದಾರೆ" ಎಂದು ದೂರಿದ್ದಾರೆ. ಈ ಹಿಂದೆಯೂ ಇಂತಹ ಅನೇಕ ಘಟನೆಗಳು ವರದಿಯಾಗಿವೆ. ನಿಧಿ, ಆಸ್ತಿ ಸೇರಿ ಹಲವಾರು ವಿಚಾರವಾಗಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ