'ನಮ್ಮ ದೇಹದಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ, ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ': ಬೊಮ್ಮಾಯಿ

By ETV Bharat Karnataka Team

Published : Oct 8, 2023, 2:35 PM IST

thumbnail

 ಹಾವೇರಿ: "ಹಿಂದೂ ಧರ್ಮ ಸನಾತನ ಧರ್ಮ. ವಿಶ್ವದ ಮಾನವರ ಕಲ್ಯಾಣ ಧರ್ಮ. ಆದರೆ ಕೆಲವರು ಸನಾತನ ಧರ್ಮವನ್ನು ಪ್ರಶ್ನೆ ಮಾಡುತ್ತಾರೆ, ಮಲೇರಿಯಾ ಅನ್ನುತ್ತಾರೆ. ಹೀಗೆಲ್ಲಾ ಎನ್ನುವಾಗ ನಾವೆಲ್ಲಾ ಸುಮ್ಮನೆ ಕೂರಬೇಕಾ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಶನಿವಾರ ಹಿಂದೂ ಮಹಾಗಣಪತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು "ನಮ್ಮ ದೇಹದಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ. ನಮ್ಮನ್ಮು ತಡವಿದರೆ ನಾವು ಸುಮ್ಮನೆ ಕೂರುವುದಿಲ್ಲ" ಎಂದು ಅವರು ಹೇಳಿದರು.

"ಈ ದೇಶದಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಆದರೆ ಬಾಜೂಕಿನ ರಾಷ್ಟ್ರಗಳ ಕಡೆ ಹೋಗಿ ನೋಡಿ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಒಂದೇ ಒಂದು ಧರ್ಮ ಇದೆ. ಅಲ್ಲಿ ಬೇರೆ ಧರ್ಮದವರು ಜೀವಂತ ಬದುಕಲೂ ಸಾಧ್ಯವಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ. ಇಂಥ ವಿಶಾಲ ಧರ್ಮಕ್ಕೆ ಡೆಂಗ್ಯು, ಮಲೇರಿಯಾ ಅನ್ನುತ್ತಾರಲ್ಲ?. ಇವರು ಇದೇ ಮಾತನ್ನು ಬೇರೆ ಧರ್ಮದ ಬಗ್ಗೆ ಹೇಳಲಿ, ಇಷ್ಟೊತ್ತಿಗೆ ಅವರ ಗತಿ ಏನಾಗುತ್ತಿತ್ತು" ಎಂದು ಕಿಡಿಕಾರಿದರು.

"ಎಲ್ಲಾ ಕಡೆಯೂ ಕೋಮ ಗಲಭೆ ಆಗುತ್ತಿದೆ. ಕಾಂಗ್ರೆಸ್ ಆರಿಸಿ ಬಂದ ದಿನವೇ ಬೆಳಗಾವಿಯಲ್ಲಿ ಪಾಕಿಸ್ತಾನ ಧ್ವಜ ಹಾರಿದೆ. ಪಾಕಿಸ್ತಾನದ ಧ್ವಜ ಹಿಡಿದವರು ಸರ್ಕಾರದ ಮೊಮ್ಮಕ್ಕಳು" ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಶಿವಮೊಗ್ಗ ಗಲಭೆ ಕುರಿತು ಮಾತನಾಡಿ, "ರಾಗಿ ಗುಡ್ಡದಲ್ಲಿ ಗಣೇಶೋತ್ಸವ ನಡೆದಾಗ ಒಂದು ಸಣ್ಣ ಘಟನೆಯೂ ನಡೆಯಲಿಲ್ಲ. ಆದರೆ ಒಂದು ವಾರದ ಬಳಿಕ ಈದ್ ಮಿಲಾದ್ ಹಬ್ಬದಲ್ಲಿ ಕಲ್ಲು ತೂರಾಟ ನಡೆಯಿತು. ಆದರೆ ಮಂತ್ರಿಗಳು ಬಿಜೆಪಿಯವರೇ ವೇಷ ಹಾಕಿಕೊಂಡು ಈ ರೀತಿ ಮಾಡುತ್ತಾರೆಂದು ಹೇಳಿದ್ದಾರೆ. ಆದರೆ ನಮ್ಮ ಹುಡುಗರು ಇನ್ನೊಂದು ವೇಷ ಹಾಕಿಕೊಳ್ಳುವ ಹೇಡಿಗಳಲ್ಲ".

"ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ನ್ಯಾಯ, ನೀತಿ, ಧರ್ಮ ಇದ್ದಲ್ಲಿ ಹಿಂದುತ್ವ ಇದೆ. ಈ ವರ್ಷ ನರೇಂದ್ರ ಮೋದಿಜಿಯವರ ಆಡಳಿತದ 10ನೇ ವರ್ಷವಾಗಿದ್ದು, ರಾಷ್ಟ್ರವನ್ನು ಅತ್ಯಂತ ಪ್ರಬಲವಾಗಿ ಮುನ್ನಡೆಸುತ್ತಿದ್ದಾರೆ. ಜನವರಿ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮನ ಪುನರ್‌ಸ್ಥಾಪನೆ ಆಗಲಿದ್ದು, ಈ ದೇಶದಲ್ಲಿ ‌ಮತ್ತೊಮ್ಮೆ ಧರ್ಮದ ಪುನರ್‌ಸ್ಥಾಪನೆ ಆಗಲಿದೆ. ಇದು ನಮ್ಮೆಲ್ಲರ ಕನಸು" ಎಂದು ಬೊಮ್ಮಾಯಿ ಮಾತನಾಡಿದರು.

ಇದನ್ನೂ ಓದಿ: ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕಾರಣದಿಂದ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ: ಪ್ರಹ್ಲಾದ್​ ಜೋಶಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.