ETV Bharat / sukhibhava

ವಿಶ್ವ ಮಧುಮೇಹ ದಿನ: 25ಕ್ಕಿಂತ ಕಡಿಮೆ ವಯಸ್ಸಿನವರಿಗೂ ಕಾಡುತ್ತಿದೆ ಸಕ್ಕರೆಕಾಯಿಲೆ!

author img

By ETV Bharat Karnataka Team

Published : Nov 14, 2023, 9:32 AM IST

World Diabetes Day: ಜಮ್ಮು ಕಾಶ್ಮೀರದ GMCಯ ಸಹ ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಎಂಡೋಕ್ರಿನೋಲಾಜಿಸ್ಟ್​​ ಡಾ. ನಜೀರ್​ ಅಹ್ಮದ್​ ಪಾಲಾ ಅವರ ಜೊತೆಗೆ ಈಟಿವಿ ಭಾರತದ ವಿಶೇಷ ಸಂದರ್ಶನ ಇಲ್ಲಿದೆ.

World Diabetes Day
ವಿಶ್ವ ಮಧುಮೇಹ ದಿನ

ಮಧುಮೇಹ, ಮನುಷ್ಯ ಅತೀ ಹೆಚ್ಚು ಚಿಂತಿಸುವ ಕಾಯಿಲೆ. ಡಯಾಬಿಟಿಸ್​, ಸಕ್ಕರೆ ಕಾಯಿಲೆ ಎಂದೆಲ್ಲಾ ಕರೆಸಿಕೊಳ್ಳುವ ಇದು, ಮನುಷ್ಯನ ಜೀವನಕ್ಕೆ ಕಹಿ ಹಿಂಡುವುದೇ ಹೆಚ್ಚು. ಇಂದಿನ ಆಧುನಿಕ ಜೀವನಶೈಲಿ, ಕೆಲಸದ ಒತ್ತಡ, ಆಹಾರ ಪದ್ಧತಿಗಳಿಂದಾಗಿ ಸಣ್ಣ ಮಕ್ಕಳಲ್ಲೇ ಕಾಣಿಸಿಕೊಳ್ಳುತ್ತಿರುವ ಇದು, ಇಳಿ ವಯಸ್ಸಿನಲ್ಲಿ ಮಾತ್ರ ಕಟ್ಟಿಟ್ಟ ಬುತ್ತಿಯಂತಾಗಿದೆ. ಇಂದು ವಿಶ್ವ ಮಧುಮೇಹ ದಿನ.

ವಿಶ್ವ ಮದುಮೇಹ ದಿನದ ಹಿನ್ನೆಲೆ ನಮ್ಮ ಈಟಿವಿ ಭಾರತ, ಕಣಿವೆ ನಾಡು ಜಮ್ಮು ಕಾಶ್ಮೀರದ GMCಯ ಸಹ ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಎಂಡೋಕ್ರಿನೋಲಾಜಿಸ್ಟ್​ ಡಾ.ನಜೀರ್​ ಅಹ್ಮದ್​ ಪಾಲಾ ಅವರ ಜೊತೆಗೆ ವಿಶೇಷ ಸಂದರ್ಶನವನ್ನು ನಡೆಸಿದೆ. ಈ ವೇಳೆ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದು, ಆ ಮಾಹಿತಿ ಇಲ್ಲಿದೆ.

ಜಮ್ಮು ಕಾಶ್ಮೀರದಲ್ಲಿ ಶೇ. 9.5 ರಷ್ಟು ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. 40 ವರ್ಷಗಳ ಹಿಂದೆ ಈ ಮಧುಮೇಹ 40 ವರ್ಷಕ್ಕಿಂತ ಮೇಲ್ಪಟ್ಟವರನ್ನು ಬಾಧಿಸುತ್ತಿತ್ತು. ಆದರೆ ಈಗ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರನ್ನು ಮಾತ್ರವಲ್ಲದೆ, ಶಾಲಾ ಮಕ್ಕಳನ್ನೂ ಬಾಧಿಸುತ್ತಿದೆ. ಈ ಕಾಯಿಲೆ ಮಕ್ಕಳಲ್ಲೂ ವೇಗವಾಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ ಕಾಶ್ಮೀರದಲ್ಲಿ ಮಧುಮೇಹ ಮಹಾಮಾರಿಯಾಗಿ ಪರಿಣಮಿಸುತ್ತಿದೆ.

ಶೇ 50 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಅವರಿಗೇ ಅರಿವಿಲ್ಲ. ಹಾಗಾಗಿ ಸಕಾಲದಲ್ಲಿ ಅವರಿಗೆ ಚಿಕಿತ್ಸೆ ದೊರೆಯುವುದಿಲ್ಲ. 100 ರೋಗಿಗಳಲ್ಲಿ 50 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಉಳಿದ 50 ಜನರು ಮಧುಮೇಹದಿಂದ ಬಳಲುತ್ತಿರುವ ಬಗ್ಗೆ ತಿಳಿದಿಲ್ಲದ ಕಾರಣ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

"ಜೀವನಶೈಲಿ ಬದಲಾವಣೆ ಮತ್ತು ಸೀಮಿತ ದೈಹಿಕ ಚಟುವಟಿಕೆಗಳಿಂದಾಗಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ." ಎಂದು ವಿವರಿಸಿದರು.

ಕಾಶ್ಮೀರಿ ಯುವಕರಲ್ಲಿ ಟೈಪ್​ ಟು ಮಧುಮೇಹ ಹೆಚ್ಚು ಸಾಮಾನ್ಯವಾಗಿದೆ. ಟೈಪ್​ ವನ್​ ಮಧುಮೇಹ ಯುವಕರು ಮತ್ತು ಮಕ್ಕಳಲ್ಲಿ ಕಂಡು ಬರುತ್ತದೆ. ಆಲಸ್ಯ ಹಾಗೂ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಯಾಗುವುದು ಮಧುಮೇಹದ ಸಾಮಾನ್ಯ ಲಕ್ಷಣಗಳಾಗಿದೆ. ವಿಶೇಷವಾಗಿ ರಾತ್ರಿ ವೇಳೆ ದಣಿದ ಭಾವನೆ, ತೂಕ ಕಳೆದುಕೊಳ್ಳುವುದು, ದೃಷ್ಟಿ ಮಂದವಾಗುವುದು, ಗಾಯಗಳಾದಲ್ಲಿ ಗುಣವಾಗದೇ ಇರುವುದು ಮಧಮೇಹ ಕಾಯಿಲೆಯ ಲಕ್ಷಣಗಳು. ಅಧಿಕ ಸಕ್ಕರೆಯಂಶವುಳ್ಳ ರಕ್ತ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಎಂದು ಡಾ. ನಜೀರ್​ ಹೇಳುತ್ತಾರೆ.

ಅನುವಂಶಿಕ ಹಾಗೂ ಪರಿಸರ ಅಂಶಗಳ ಮೇಲೆ ಮಧುಮೇಹ ಅವಲಂಬಿಸಿದ್ದು, ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಹಾಗೂ ಸಕ್ರಿಯ ಜೀವನಶೈಲಿಯೊಂದಿಗೆ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನ ಮಟ್ಟದಲ್ಲಿ ಇರಿಸಬಹುದು. ಸಂಸ್ಕರಿಸಿದ ಆಹಾರ ಹಾಗೂ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ, ಅಕ್ಕಿ ಹಾಗೂ ಹಿಟ್ಟಿನ ಬ್ರೆಡ್​ಗಳನ್ನು ಮಿತವಾಗಿ ಬಳಸಿದಲ್ಲಿ, ನಿಮ್ಮ ಮಧುಮೇಹ ಕಾಯಿಲೆಯನ್ನು ಸರಿದೂಗಿಸಿಕೊಂಡು ಹೋಗಬಹುದು ಎನ್ನುತ್ತಾರೆ ಡಾ. ನಜೀರ್ ಅಹ್ಮದ್​​.

ಇದನ್ನೂ ಓದಿ: ಭಾರತೀಯ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಧುಮೇಹ: ಕಾರಣ, ಲಕ್ಷಣ, ಪರಿಹಾರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.