ETV Bharat / state

ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ವಿಜಯೇಂದ್ರ: ಹೆಚ್​.ವಿಶ್ವನಾಥ್

author img

By ETV Bharat Karnataka Team

Published : Dec 17, 2023, 11:03 PM IST

yediyurappa-was-sent-to-jail-by-his-son-by-vijayendra-says-h-vishwanath
ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ವಿಜಯೇಂದ್ರ: ಹೆಚ್​. ವಿಶ್ವನಾಥ್

ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚ. ಅವರ ಮಾತಿಗೆ ಯಾರೂ ಬೆಲೆ ಕೊಡಬೇಡಿ ಎಂದು ಎಂಎಲ್​ಸಿ ಹೆಚ್​.ವಿಶ್ವನಾಥ್ ಹೇಳಿದರು. ಇದೇ ವೇಳೆ ಯಡಿಯೂರಪ್ಪ ಜೈಲಿಗೆ ಹೋಗಿರುವ ಕುರಿತು ಮಾತನಾಡಿದರು.

ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ವಿಜಯೇಂದ್ರ: ಹೆಚ್​.ವಿಶ್ವನಾಥ್

ವಿಜಯಪುರ: "ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ತಮ್ಮದೇ ಪಕ್ಷ, ಸಮುದಾಯದವರಾದ ಮುರುಗೇಶ್​ ನಿರಾಣಿ ಅವರ ವಿರುದ್ಧ ಮಾತನಾಡಿರುವುದನ್ನು ಸುಸಂಸ್ಕೃತ ಸಮಾಜ ಒಪ್ಪುವಂತದ್ದಲ್ಲ" ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿರಿಯ ನಾಯಕರಾದ ನಿರಾಣಿ ಅವರನ್ನು ಕೇಂದ್ರ ಸಚಿವರಾಗಿದ್ದ ಯತ್ನಾಳ್​ ಕತ್ತೆ, ನಾಯಿ ಎಂದು ಕರೆದಿರುವುದು ಇಡೀ ರಾಜಕೀಯಕ್ಕೆ ಅವಮಾನ ಮಾಡಿದಂತಾಗಿದೆ" ಎಂದರು.

"ಯತ್ನಾಳ್ ರಾಜಕಾರಣಕ್ಕೆ ಅಪವಾದ. ತನ್ನದೇ ಜಾತಿ, ತನ್ನದೇ ಪಾರ್ಟಿಯ ಮುಖಂಡರಿಗೆ ಹಂದಿ, ನಾಯಿ ಅನ್ನುತ್ತಾರೆ. ನಾಚಿಕೆ ಆಗಲ್ವಾ, ನೀನೊಬ್ಬ ನಾಯಕನಾ? ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು?. ಅಯೋಗ್ಯತನಕ್ಕೆ ಒಂದು ಮಿತಿ ಬೇಕು. ಯತ್ನಾಳ್​ ಅವರ ಪದಪ್ರಯೋಗವನ್ನು ನಾನು ಖಂಡಿಸುತ್ತೇನೆ. ಸುಸಂಸ್ಕೃತ ಮತ್ತು ಅನಾಗರಿಕವಾಗಿ ಮಾತನಾಡುವುದನ್ನು ಯತ್ನಾಳ್ ನಿಲ್ಲಿಸಬೇಕು ಎಂದು ನಾಗರಿಕ ಸಮಾಜದ ಪರವಾಗಿ ವಿನಂತಿ ಮಾಡುತ್ತೇನೆ" ಎಂದು ಹೇಳಿದರು.

"ಬಿ.ಎಸ್​.ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ್ದು ಯಾರು?. ವಿಜಯೇಂದ್ರ ಅಲ್ಲವೇ ಯಡಿಯೂರಪ್ಪ ಮುಖ್ಯಮಂತ್ರಿ ‌ಇದ್ದಾಗಲೇ ಜೈಲಿಗೆ ಹೋಗಲು ಕಾರಣ. 20 ಕೋಟಿ‌ ಲಂಚವನ್ನು ಆರ್​ಟಿಜಿಎಸ್ ಮೂಲಕ ತೆಗೆದುಕೊಳ್ಳಲಿಲ್ಲವೇ?. ಒಬ್ಬ ಪೆದ್ದ, ಲಂಚಕೋರ ರಾಜ್ಯದ ಬಿಜೆಪಿ ಅಧ್ಯಕ್ಷನಾ ಅವನು?" ಎಂದು ವಾಗ್ದಾಳಿ ನಡೆಸಿದರು.

"ನಾನು ಬಿಜೆಪಿಯಲ್ಲಿ‌ ಇರಬಹುದು, ಆದರೆ ನನ್ನ ಮನಸ್ಸು ಬೇರೆ. ಲೋಕಸಭೆ ಟಿಕೆಟ್​ ಕೊಡಿ ಎಂದು ಕೇಳುತ್ತೇನೆ, ಕೊಟ್ಟರೆ ಸಂತೋಷ. ಕೊಡದೇ ಇದ್ದರೆ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದರು. ಜಾತಿಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲೇ ಬೇಕು, ಅದನ್ನು ವ್ಯಾಪಕವಾದ ಚರ್ಚೆಗೆ ಒಳಪಡಿಸಬೇಕು" ಎಂದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್​ ಹೆಸರಿಡುವ ಬಗ್ಗೆ ಪ್ರತಿಕ್ರಿಯಿಸಿ, "ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು. ಅವನ ಹೆಸರೇ ಮೈಸೂರು ಹುಲಿ. ಮೈಸೂರು ಮಹಾಸಂಸ್ಥಾನವನ್ನು ಅಭಿವೃದ್ಧಿ ಮಾಡಿದವರು, ಮೈಸೂರು ಮಹಾರಾಜರಿಗೆ ಪೂರಕವಾಗಿ ನಡೆದುಕೊಂಡವರು ಇವರು. ಬಿಜೆಪಿಯಲ್ಲಿ ಇವನು ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಎನ್ನುವ ಅಯೋಗ್ಯತನ​ ತೊಲಗಬೇಕು" ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಪಕ್ಷ ಬಿಡುವವರಿಗೆ ಅಭ್ಯಂತರವಿಲ್ಲ: ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.