ETV Bharat / state

ಮಹಾರಾಷ್ಟ್ರದಲ್ಲಿ ಭಾರಿ ಮಳೆ... ಭೀಮಾ ತೀರದ ಜನರಲ್ಲಿ ಮೂಡಿದ ಪ್ರವಾಹದ ಆತಂಕ

author img

By

Published : Jun 19, 2021, 4:12 AM IST

Updated : Jun 19, 2021, 6:32 AM IST

Vijayapura Heavy rain, Vijayapura Heavy rain news, Vijayapura Heavy rain update, ವಿಜಯಪುರದಲ್ಲಿ ಭಾರೀ ಮಳೆ, ವಿಜಯಪುರ ಭಾರೀ ಮಳೆ ಸುದ್ದಿ, ಭೀಮೆ ದಡದ ಜನರಲ್ಲಿ ಆತಂಕ,
ಮಹಾರಾಷ್ಟ್ರದಲ್ಲಿ ಭಾರಿ ಮಳೆ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿದ್ದು, ವಿಜಯಪುರ ಜಿಲ್ಲೆಯ ಭೀಮಾ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದರೆ ಕರ್ನಾಟಕದ ಗಡಿ ಭಾಗ ವಿಜಯಪುರ ಜಿಲ್ಲೆಯ ಎರಡು ಪ್ರಮುಖ ನದಿಗಳ ಪಾತ್ರದ ಜನ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಿದ್ದಾರೆ. ಈ ವರ್ಷ ಮುಂಗಾರು ಅಬ್ಬರ ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿ ಹಾಗೂ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಕಾರಣ ಈ ಭಾಗದ ಜನ ಬೆಳೆ, ಮನೆ, ಜಾನುವಾರು, ಪ್ರಾಣ ಕಳೆದುಕೊಳ್ಳುವ ಆತಂಕ ಈಗಲೇ ಎದುರಿಸುತ್ತಿದ್ದಾರೆ.

ಮುಂಗಾರು ಆರಂಭವಾಗಿ ಕೇವಲ 15 ದಿನ ಕಳೆದಿಲ್ಲ. ಆಗಲೇ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು 1,46,211 ಕ್ಯೂಸೆಕ್ ನೀರು ಹರಿದು ಬಂದಿದೆ. ಇದರ ಜತೆ ಉಜನಿ ಜಲಾಶಯದಿಂದ ಭೀಮಾನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ ಸೊನ್ನ ಬ್ಯಾರೇಜ್​ದಿಂದ ಭೀಮಾ ನದಿ ಪಾತ್ರದ 8 ಸೇತುವೆಗಳು ಮತ್ತೆ ಮುಳಗಡೆ ಭೀತಿ ಎದುರಿಸುತ್ತಿವೆ.

ಮಳೆ ಬಗ್ಗೆ ಮಾಹಿತಿ ನೀಡುತ್ತಿರುವ ಜಿಲ್ಲಾಧಿಕಾರಿ

ಕಳೆದ ವರ್ಷ ಭಾರಿ ಪ್ರವಾಹಕ್ಕೆ ಇದೇ ಸೇತುವೆಗಳು ಸಿಲುಕಿಕೊಂಡಿದ್ದವು. ಹಿಂದೆಂದೂ ಕಾಣದ ಪ್ರವಾಹ ಕಳೆದ ವರ್ಷ ಭೀಮಾನದಿ ಎದುರಿಸಿತ್ತು. ಇದರ ಪರಿಣಾಮ ಹಳೇ ಉಮರಾಣಿ, ಟಾಕಳಿ, ತಾರಾಪುರ, ಧೂಳಖೇಡ, ದಸೂರು, ಉಮರಜ್, ಬೋರಗಿ, ದೇವಣಗಾಂ, ಖೇಡಗಿ ಸೇರಿ ಹಲವು ಗ್ರಾಮಗಳಿಗೆ ನೀರು ನುಗ್ಗಿ ಜನ ನಿರಾಶ್ರಿತರಾಗಿದ್ದರು. ಇದಕ್ಕೆ ಮಹಾರಾಷ್ಟ್ರದ ಇಂಜನಿಯರಗಳ ಸಮನ್ವಯ ಕೊರತೆ ಸಹ ಕಾರಣ ಎನ್ನುವ ಮಾತು ಆಗ ಕೇಳಿ ಬಂದಿತ್ತು.

ಅವೈಜ್ಞಾನಿಕವಾಗಿ ಸೊನ್ನ ಬ್ಯಾರೇಜ್​ನಿಂದ ಹೆಚ್ಚುವರಿ ನೀರು ಬಿಟ್ಟ ಕಾರಣ ಭೀಮಾ ಭಾಗದಲ್ಲಿ ಹೆಚ್ಚು ನಷ್ಟವಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಕಳೆದ ವರ್ಷದಂತೆ ಈ ವರ್ಷವೂ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಬಾರದು ಎಂದು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸತತ ಸಂಪರ್ಕ ಸಾಧಿಸಲು ವಾಟ್ಸ್​ಆ್ಯಪ್​ ಗ್ರೂಪ್ ಮಾಡಿಕೊಂಡಿದ್ದು, ಕೃಷ್ಣಾ, ಭೀಮಾನದಿಗೆ ಮಹಾರಾಷ್ಟ್ರದಿಂದ ನೀರು ಬಿಡುವಾಗ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದೆ.

ಈ ಬಾರಿ ಆಲಮಟ್ಟಿ ಬೇಗನೆ ಭರ್ತಿಯಾದ ಕಾರಣ ಕೃಷ್ಣಾ ನದಿ ತುಂಬಿ ನಾರಾಯಣಪುರ ಜಲಾಶಯಕ್ಕೆ ಹೆಚ್ಚು ನೀರು ಹರಿದ ಕಾರಣ ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನ ಸಂಕಷ್ಟ ಅನುಭವಿಸಿದ್ದರು. ಲಕ್ಷಾಂತರ ಎಕರೆ ಭೂಮಿಯಲ್ಲಿ ಬೆಳೆದ ಕಬ್ಬು, ಸೂರ್ಯಕಾಂತಿ, ತೊಗರಿ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಈ ಬಾರಿಯೂ ಇದೇ ರೀತಿ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದರೆ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಈಗಲೇ ಪೂರ್ವಸಿದ್ದತೆ ಮಾಡಿಕೊಂಡಿದೆ. ಈಗ ಮಹಾರಾಷ್ಟ್ರದ ಸರ್ಕಾರ ಕರ್ನಾಟಕದ ಜತೆ ಯಾವ ರೀತಿ ಸಮನ್ವಯ ಸಾಧಿಸುತ್ತದೆ ಎನ್ನುವುದು ನೋಡಬೇಕಾಗಿದೆ.

Last Updated :Jun 19, 2021, 6:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.