ETV Bharat / state

ಬೆಳಗಾವಿ ಘಟನೆ, ಡಿಕೆಶಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮಗೆ ಮೇಲಿಂದ ಆದೇಶ ಬಂದಿದೆ: ಬಿಜೆಪಿ ಶಾಸಕ ಯತ್ನಾಳ್

author img

By ETV Bharat Karnataka Team

Published : Dec 16, 2023, 4:58 PM IST

Party order to fight against Belagavi incident and DK Shivakumar corruption issue says BJP MLA Basanagouda Patil Yatnal
ಬೆಳಗಾವಿ ಘಟನೆ, ಡಿಕೆಶಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮಗೆ ಮೇಲಿಂದ ಆದೇಶ ಬಂದಿದೆ: ಬಿಜೆಪಿ ಶಾಸಕ ಯತ್ನಾಳ್

ಬೆಳಗಾವಿಯ ಮಹಿಳೆ ಘಟನೆಯನ್ನು ರಾಜ್ಯದ ನಮ್ಮ ಪಕ್ಷದವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಸ್ವಪಕ್ಷದ ನಾಯಕರ ವಿರುದ್ಧವೇ ಕಿಡಿಕಾರಿದರು.

ಬೆಳಗಾವಿ ಘಟನೆ, ಡಿಕೆಶಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮಗೆ ಮೇಲಿಂದ ಆದೇಶ ಬಂದಿದೆ: ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ: ಬೆಳಗಾವಿಯಲ್ಲಿ ನಡೆದ ಮಹಿಳೆಯ ಘಟನೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ವಿರುದ್ಧದ ಭ್ರಷ್ಟಾಚಾರ ಆರೋಪ ವಿಷಯವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಮೇಲಿನವರಿಂದ ನಮಗೆ ಆದೇಶ ಬಂದಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಘಟನೆ ಬಗ್ಗೆ ಕೇವಲ ಉಗ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್​ ಮಾಡಿದರೆ, ಸಾಲದು. ಜೆಡಿಎಸ್​ ಶಾಸಕರು ಮತ್ತು ನಾವು ಹೋರಾಟ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಇದರಿಂದ ಸರ್ಕಾರ ಕೂಡ ಸ್ಪಂದಿಸಲು ಸಾಧ್ಯವಾಗಿವೆ ಎಂದು ಹೇಳಿದರು.

ಬೆಳಗಾವಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯ ಮೇಲೆ ಬೆತ್ತಲೆ ಮೆರವಣಿಗೆ ನಡೆದಾಗ ರಾಹುಲ್​ ಗಾಂಧಿ ಖಂಡಿಸಿದ್ದರು. ಉತ್ತರ ಪ್ರದೇಶದ ಘಟನೆಯಷ್ಟೇ ಬೆಳಗಾವಿಯ ಘಟನೆಯು ಗಂಭೀರ ವಿಷಯ. ನಾನು ಉತ್ತರ ಪ್ರದೇಶದ ಘಟನೆಯನ್ನೂ ನಾನು ಸಮರ್ಥನೆ ಮಾಡಿಕೊಳ್ಳುವುದು. ಆ ಘಟನೆಯೂ ತಪ್ಪು. ಈ ಘಟನೆಯೂ ತಪ್ಪು. ಈ ಘಟನೆಯನ್ನು ರಾಜ್ಯದ ನಮ್ಮ ಪಕ್ಷದವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಿನ್ನೆ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದ್ದರು. ಈ ಎರಡು ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ಆದೇಶಿಸಿದ್ದಾರೆ ಎಂಬುವುದಾಗಿ ವಿವರಿಸಿದರು.

ಪ್ರತಿಪಕ್ಷದ ನಾಯಕ, ಅಧ್ಯಕ್ಷನೂ ನಾನೇ ಆಗಿದ್ದೇನೆ: ಬರೀ ಉಗ್ರವಾಗಿ ಖಂಡಿಸಿದರೆ, ಏನೂ ಆಗುವುದಿಲ್ಲ. ನಾಳೆ ಕೊಲೆ ಆರೋಪಿಯ ಪ್ರಕರಣ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತೇವೆ ಎಂದರೆ, ಅರಾಜಕತೆ ಉಂಟಾಗುತ್ತೆ. ಹೀಗಾಗಿ ನಾನು ಡಿ.ಕೆ.ಶಿವಕುಮಾರ್​ ವಿಚಾರದಲ್ಲಿ ಕೋರ್ಟ್​ಗೆ ಹೋಗಿದ್ದು. ಜನವರಿ 5ಕ್ಕೆ ಮತ್ತೆ ವಿಚಾರಣೆ ಪ್ರಾರಂಭವಾಗುತ್ತೆ. ನ್ಯಾಯಕ್ಕೆ ಜಯ ಸಿಕ್ಕೆ ಸಿಗುತ್ತೆ. ಭ್ರಷ್ಟಾಚಾರದ ವಿರುದ್ಧ ನಾವಿದ್ದೇವೆ ಎಂದರು. ಇದೇ ವೇಳೆ, ನಾನೇ ಪ್ರತಿಪಕ್ಷದ ನಾಯಕ, ಪಕ್ಷದ ಅಧ್ಯಕ್ಷನೂ ನಾನೇ ಆಗಿದ್ದೇನೆ. ಪಕ್ಷದ ಪರ ಸಕ್ರಿಯವಾಗಿದ್ದೇನೆ. ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂದು ತೋರಿಸುವ ಕೆಲಸ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.

ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರು ಇಡಬೇಕು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್​ ಹೆಸರು ಇಡಬೇಕೆಂಬ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿಯಾಗಿದೆ. ಏಷ್ಯಾದಲ್ಲೇ ಮೊದಲು ಬಾರಿಗೆ ಬೆಂಗಳೂರಿಗೆ ವಿದ್ಯುದೀಕರಣ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ. ಆದಿಲ್‌ ಶಾಹಿ, ನಿಜಾಮ್ ಶಾಹಿಗಳಿಂದಾಗಿ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಹೀಗಾಗಿ ಯಾರದ್ದೋ ಹೆಸರು ಇಡುತ್ತೇವೆ ಎಂದು ಹೇಗೆ?. ಮೈಸೂರು ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರು ಇಡಬೇಕೆಂದು ಒತ್ತಾಯಿಸಿದರು.

ಕಾನೂನು ಹೋರಾಟಕ್ಕೆ ನೆರವು: ಅಲ್ಲದೇ, ಬಿಜೆಪಿ, ಹಿಂದೂ ಕಾರ್ಯಕರ್ತ ಮೇಲೆ‌ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ಬಿಜೆಪಿ ಕಾರ್ಯಕರ್ತರ ಕಾನೂನು ಹೋರಾಟಕ್ಕೆ ನೆರವು ನೀಡುತ್ತೇವೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡರು, ಅಂತಹರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳು ಕೆಲಸವಾಗುತ್ತಿದೆ. ಈ ದೌರ್ಜನ್ಯ ನಾವು ಸಹಿಸುವುದಿಲ್ಲ. ಯಾವುದೇ ಪ್ರಚೋದನೆ ನೀಡಿದಾಗಬೇಕಾದರೆ ಕ್ರಮ ಕೈಗೊಳ್ಳಲಿ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ತಡೆಯುವ ಅವಕಾಶ ಇಲ್ಲ ಎಂದು ಯತ್ನಾಳ್ ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ: ಸಂತ್ರಸ್ತೆಯನ್ನು ಭೇಟಿಯಾದ ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.