ಮುದ್ದೇಬಿಹಾಳ : ಕೃಷ್ಣಾ ತೀರದ ಜನರಿಗೆ ತಮ್ಮ ಬದುಕು ಪ್ರವಾಹಕ್ಕೆ ಸಿಲುಕುವ ಭೀತಿ ಎದುರಾಗಿದ್ದು, ಮತ್ತೆ ನೆರೆಯ ಅಬ್ಬರಕ್ಕೆ ಊರುಗಳನ್ನು ತೊರೆಯುವ ಆತಂಕ ಎದುರಾಗಿದೆ. ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದ ನೂರಾರು ಎಕರೆ ಜಮೀನುಗಳಲ್ಲಿ ನೀರು ನುಗ್ಗಿದ್ದು, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿದರು.
ತಾಲೂಕಿನ ನಾಗರಾಳ ಗ್ರಾಮದಲ್ಲಿ ಕೃಷ್ಣಾ ನದಿಯ ಹಿನ್ನೀರಿನಿಂದ ಗ್ರಾಮದಲ್ಲಿ ಯಾವುದೆ ಹಾನಿಯಾಗದಿದ್ದರೂ ಜಮೀನುಗಳಿಗೆ ನೀರು ನುಗ್ಗಿದೆ. ಅಂದಾಜು ದೇವೂರಲ್ಲಿ 35 ಎಕರೆ, ಬನೋಶಿಯಲ್ಲಿ 12 ಎಕರೆ, ನಾಗರಾಳದಲ್ಲಿ 48 ಎಕರೆ ಜಮೀನು ಪ್ರವಾಹದ ನೀರಿನಿಂದ ಜಲಾವೃತಗೊಂಡಿವೆ.
ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ:
ಇಂದು ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರು ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗ್ರಾಪಂ. ಅಧಿಕಾರಿಗಳೊಂದಿಗೆ ಕೃಷ್ಣಾ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುದ್ದೇಬಿಹಾಳ ಹೋಬಳಿಯ ಮುದೂರ ಗ್ರಾಮದಲ್ಲಿ ರೈತರ ಜಮೀನಿಗೆ ನೀರು ನುಗ್ಗಿಲ್ಲ. ಮುಳಗಡೆ ಜಮೀನಿಗೆ ನೀರು ನುಗ್ಗಿದೆ. ರೈತರ ಜಮೀನಿಗೆ ಹಾನಿಯಾಗಿರುವುದಿಲ್ಲ. ಹಂಡರಗಲ್ಲ ಗ್ರಾಮದ ನದಿ ಹಿನ್ನೀರಿನಿಂದಲೂ ಯಾವುದೇ ಸಮಸ್ಯೆಯಾಗಿಲ್ಲ. ದೇವೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು, ಗ್ರಾಮಕ್ಕೆ ಹತ್ತಿರ ನೀರು ಬಂದಿದೆ. ಇನ್ನೂ ಅಂದಾಜು 100 ಮೀಟರ್ ನೀರು ಬಂದಲ್ಲಿ ಸುಮಾರು 30ರಿಂದ 40 ಮನೆಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ತಿಳಿಸಿದರು.
ಕೇಂದ್ರಕ್ಕೆ ಸ್ಥಳ ಗುರುತು:
ಸದ್ಯಕ್ಕೆ ಮೂರು ಲಕ್ಷದಷ್ಟಿರುವ ಪ್ರವಾಹದ ನೀರು ಮತ್ತಷ್ಟು ಹೆಚ್ಚಾದರೆ 2019ರಲ್ಲಿ ಉಂಟಾಗಿದ್ದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಸೂಚಿಸಿದ್ದು, ಅದರಂತೆ ಕಮಲದಿನ್ನಿ ಗ್ರಾಮದ ಜನರಿಗೆ ಸರ್ಕಾರಿ ಪ್ರಾಥಮಿಕ ಶಾಲೆ ತಂಗಡಗಿ, ಕುಂಚಗನೂರ ಗ್ರಾಮದ ಜನರಿಗೆ ಸರ್ಕಾರಿ ಶಾಲೆ ಕುಂಚಗನೂರ, ದೇವೂರ ಗ್ರಾಮದ ಜನರಿಗೆ ಸರ್ಕಾರಿ ಶಾಲೆ, ನೇಬಗೇರಿ ಗ್ರಾಮದಲ್ಲಿ ಕಾಳಜಿ ಕೇಂದ್ರಕ್ಕಾಗಿ ಸ್ಥಳ ಗುರುತಿಸಲಾಗಿದೆ.