ETV Bharat / state

ಬರ ಘೋಷಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲಿ: ಬೊಮ್ಮಾಯಿಗೆ ಸಚಿವ ಎಂ.ಬಿ.ಪಾಟೀಲ್ ​ಸಲಹೆ

author img

By ETV Bharat Karnataka Team

Published : Aug 25, 2023, 9:56 PM IST

ಎಂ.ಬಿ‌ ಪಾಟೀಲ್​
ಎಂ.ಬಿ‌ ಪಾಟೀಲ್​

ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್​ ತಿರುಗೇಟು ನೀಡಿದ್ದಾರೆ.

ಸಚಿವ ಎಂ.ಬಿ‌.ಪಾಟೀಲ್ ಹೇಳಿಕೆ

ವಿಜಯಪುರ : ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬರ ಘೋಷಣೆ ಮಾಡಲು‌ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಹಾಗು ಬೃಹತ್​ ಕೈಗಾರಿಕಾ ಸಚಿವ ಎಂ.ಬಿ‌.ಪಾಟೀಲ್​ ಸಲಹೆ ನೀಡಿದರು.

ವಿಜಯಪುರ ಜಿಲ್ಲೆ ತಾಲೂಕಿನ ತಾವರಖೇಡ ಗ್ರಾಮದಲ್ಲಿಂದು ಮಾತನಾಡಿದ ಅವರು, ಹಲವಾರು ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಬರ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಗಳು ಅಡ್ಡಿಯಾಗಿವೆ. ರಾಜ್ಯದಲ್ಲಿ ಬರ ಘೋಷಣೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಬಳಿ ಹೋಗಿ ಒತ್ತಾಯಿಸಲಿ ಎಂದು ಮಾಜಿ ಸಿಎಂಗೆ ಸವಾಲು ಹಾಕಿದರು.

ಕೇಂದ್ರ ಸರ್ಕಾರದ ಮಾನದಂಡಗಳು ಬರ ಘೋಷಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರು ಈಗಾಗಲೇ ಹೇಳಿದ್ದಾರೆ. ಕೇಂದ್ರ ಎ‌‌ನ್​ಡಿಆರ್​ಎಫ್ ನಿಯಮಗಳ ಪ್ರಕಾರ ಸಹಾಯಕ್ಕೆ ಬರಬೇಕಿದೆ. ಬೊಮ್ಮಾಯಿಯವರು‌ ಇಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರಾಜ್ಯದ ರೈತರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು ಎನ್ನುವ ಮೂಲಕ ಟಾಂಗ್ ಕೊಟ್ಟರು.

ಬರ ಘೋಷಣೆಗೆ ಬೊಮ್ಮಾಯಿ ಒತ್ತಾಯ: ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಬಸವರಾಜ​ ಬೊಮ್ಮಾಯಿ, ಮುಂಗಾರು ಜೂನ್ ತಿಂಗಳ ಕೊನೆಯವರೆಗೂ ಬರಲಿಲ್ಲ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ.‌ ಆಗಸ್ಟ್​ನಲ್ಲಿಯೂ ಮಳೆ ಆಗುತ್ತಿಲ್ಲ. ಸರ್ಕಾರ ಮೂರು ತಿಂಗಳಿಂದ ಬರಗಾಲ ಘೋಷಣೆ ಮಾಡಿಲ್ಲ. ಬೆಳೆ, ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡಿಲ್ಲ. ಕೂಡಲೇ ಬರಗಾಲ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಕೈಯಲ್ಲೂ ಹಣ ಇದೆ.

ಆದರೆ ರಾಜ್ಯ ಸರ್ಕಾರ ಬರ ಎಂಬುದಾಗಿ ಘೋಷಣೆ ಮಾಡುತ್ತಿಲ್ಲ. ಕುಡಿಯುವ ನೀರು, ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರು ಕಡಿಮೆ ಆಗಿದೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಕ್ಷಾಮ ನೋಡಬೇಕಾಗುತ್ತದೆ. ಮುಂದಿನ ವರ್ಷ ಏಪ್ರಿಲ್,​ ಮೇ ವೇಳೆಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಲಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಬರ ಘೋಷಣೆಗೆ ಚಿಂತನೆ- ಕೃಷಿ ಸಚಿವ: ಮತ್ತೊಂದೆಡೆ, ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಹೊಸ ಘೋಷಣೆಗಳ ಅನುಷ್ಠಾನ ಕುರಿತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಭೆ ನಡೆಸಿದರು. ರಾಜ್ಯದಲ್ಲಿ ಮಳೆಯ ಕೊರತೆ ಹೆಚ್ಚಾಗಿದ್ದು, ಶೇ.79ರಷ್ಟು ಮಾತ್ರ ಬೆಳೆಯಾಗಿದೆ. ಈ ಬಗ್ಗೆ ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಮಾಡಲಾಗುತ್ತಿದೆ. 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಚಿಂತನೆ ಇದೆ ಎಂದು ಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ : ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.