ETV Bharat / state

ಪಂಚರಾಜ್ಯ ಚುನಾವಣೆಯಲ್ಲಿ ಕನಿಷ್ಠ ಮೂರು ಕಡೆ ಅಧಿಕಾರ ಹಿಡಿಯುತ್ತೇವೆ : ಸಚಿವ ಎಂ ಬಿ ಪಾಟೀಲ್​

author img

By ETV Bharat Karnataka Team

Published : Nov 30, 2023, 6:43 PM IST

Updated : Nov 30, 2023, 7:43 PM IST

ಎಂ ಬಿ ಪಾಟೀಲ್
ಎಂ ಬಿ ಪಾಟೀಲ್

ಹೆಣ್ಣು ಭ್ರೂಣ ಹತ್ಯೆ ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರ : ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ ಪೈಕಿ ಕನಿಷ್ಠ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ನಾಲ್ಕನೇ ಕಡೆಯೂ ಅಧಿಕಾರ ಹಿಡಿಯೋ ಸಾಧ್ಯತೆ ಇದೆ. ಎಕ್ಸಿಟ್ ಪೋಲ್ ನೋಡಿ ಗೊತ್ತಾಗುತ್ತದೆ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ನೀವೇ ಒಪ್ಪಿದ್ದೀರಲ್ಲ ಎಂದರು.

ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ: ಮೈಸೂರು ‌ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ. ಇದನ್ನು ವೈದ್ಯರು ಕೂಡಾ ಶಾಮೀಲಾಗಿ ಮಾಡುತ್ತಿರುವುದು ಅಪರಾಧ. ಯಾವುದೇ ಸರ್ಕಾರವಿದ್ದರೂ ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂಥ ಕೆಲಸ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದನ್ನು ತಡೆಗಟ್ಟಲು ಸರ್ಕಾರ ಬದ್ಧ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು.

ವಿಜಯಪುರದ ಕಂದಗಲ್‌ ಹನಮಂತರಾಯ ರಂಗಮಂದಿರದಲ್ಲಿ ಕನಕದಾಸ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. 12ನೇ ಶತಮಾನದಲ್ಲೇ ಬಸವಣ್ಣ ಹಾಗೂ ಶರಣರು ಗಂಡು ಹೆಣ್ಣು ಭೇದಭಾವ ಅಳಿಸಿ‌ ಹಾಕಿದ್ದರು. ಹೆಣ್ಣು ಲಕ್ಷ್ಮೀ ಇದ್ದಂಗೆ. ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಒಳ್ಳೆಯವರು. ತಂದೆ ತಾಯಂದಿರನ್ನು ಸಾಕುವವರು ಅವರೇ ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿಯೂ ಇಂಥ ಕೆಲಸ ಮಾಡಲು ಬಿಡಲ್ಲ. ಜನರಲ್ಲೂ ಜಾಗೃತಿ ಮೂಡಬೇಕಿದೆ. ಇಂಥ ಘಟನೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೈಗಾರಿಕೆಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ : ರಾಜ್ಯದಲ್ಲಿ ಕೈಗಾರಿಕೆಗೆ ಉತ್ತೇಜನ ವಿಚಾರವಾಗಿ ಮಾತನಾಡಿ, ರಾಜ್ಯದ ಇತರೆ ಭಾಗಗಳಲ್ಲಿ ಕೈಗಾರಿಕೆಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ. ಇನ್ಸೆಂಟಿವ್ ನೀಡುವ ಮೂಲಕ ಕೈಗಾರಿಕೆ ಹಾಗೂ ಬಂಡವಾಳ ಹರಿದು ಬರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ಸದ್ಯ ನಾವು ಕ್ಲಿಷ್ಟಕರ ವಾತಾವರಣದಲ್ಲಿದ್ದೇವೆ. ಇಂಡಸ್ಟ್ರೀಸ್ ಸ್ಥಾಪನೆಗೆ ಬೆಂಗಳೂರು ಸುತ್ತಮುತ್ತ ಬಯಸುತ್ತಾರೆ. ನಾವು ಬೆಂಗಳೂರು ಹೊರತು ಪಡಿಸಿ ಸ್ಥಾಪನೆ ಮಾಡಲು ಮನವೊಲಿಸುತ್ತೇವೆ. ಅದಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು, ಪ್ರೋತ್ಸಾಹವನ್ನು ನೀಡುತ್ತೇವೆ. ಜೊತೆಗೆ ಬಂಡವಾಳ ಹಾಕುವವರು, ಕೈಗಾರಿಕೆಗಳು ರಾಜ್ಯ ಬಿಟ್ಟು ಹೋಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಸೌಕರ್ಯವಿದೆ. ಭೂಮಿ, ನೀರು, ವಿದ್ಯುತ್, ಸಾರಿಗೆ ಇದೆ. ಇದೆಲ್ಲ ಮನವರಿಕೆ ಮಾಡುತ್ತೇವೆ. ಈ ಕುರಿತು ಅಧ್ಯಯನವನ್ನು ಸಹ ಮಾಡಿಸಲಾಗಿದೆ ಎಂದು ಹೇಳಿದರು.

ಮುಂದೆ ಕಾನೂನಾತ್ಮಕ ಹೋರಾಟವಿದೆ: ಆದಾಯಕ್ಕಿಂತ ಅಧಿಕ ಆಸ್ತಿ‌ ಪ್ರಕರಣದಲ್ಲಿ ಡಿಸಿಎಂ‌ ಡಿಕೆಶಿ ಹೈಕೋರ್ಟ್​ನಲ್ಲಿ ಅರ್ಜಿ ವಾಪಸ್‌ ಪಡೆದಿರೋ ಸಂಗತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದು ತಪ್ಪು ಎಂದು ಎಜಿ ಅಭಿಪ್ರಾಯದ ಮೇರೆಗೆ ವಾಪಸ್ ಪಡೆಯಲಾಗಿದೆ. ಕಾನೂನಾತ್ಮಕವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಸ್ವಂತ ಅಭಿಪ್ರಾಯ ತೆಗೆದುಕೊಂಡಿಲ್ಲ. ಕೇಸ್ ವಾಪಸ್ ಪಡೆಯಲು ಡಿಕೆಶಿಗೆ ಅನುಮತಿಯನ್ನು ನೀಡಲಾಗಿದೆ. ಮುಂದೆ ಕಾನೂನಾತ್ಮಕ ಹೋರಾಟವಿದೆ. ಬಿಜೆಪಿಯವರು ಐಟಿ, ಸಿಬಿಐ, ಇಡಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ‌ ಬಳಸುತ್ತಿದ್ದಾರೆ. ಮಹಿಳಾ ಮೋರ್ಚಾ, ಯುವ ಮೋರ್ಚಾ ಹೇಗಿವೆಯೋ ಹಾಗೆ ಸಿಬಿಐ ಮೋರ್ಚಾ, ಐಟಿ ಮೋರ್ಚಾ, ಇಡಿ‌ ಮೋರ್ಚಾ ಮಾಡಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ‌ಯಾಗುತ್ತಿದೆ : ಕೇವಲ ವಿರೋಧ ಪಕ್ಷದವರನ್ನು ಹತ್ತಿಕ್ಕಲು, ಚಿತ್ರಹಿಂಸೆ ಕೊಡಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗ್ತಿದೆ. ಬಿಜೆಪಿಯವರ ಮೇಲೆ ದಾಳಿ ಯಾಕೆ ಮಾಡಿಲ್ಲ. ಅವರೆಲ್ಲ ಸತ್ಯಹರಿಶ್ಚಂದ್ರರಾ?. ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ಮುಖಂಡನ‌ ಮೇಲಾದರೂ ಐಟಿ ರೇಡ್ ಮಾಡ್ತಾರಾ?. ಇಡಿ, ಸಿಬಿಐ ಕೇಸ್ ಹಾಕ್ತಾರಾ? ಎಂದು ಪ್ರಶ್ನಿಸಿದ ಎಂಬಿಪಿ, ಇವೆಲ್ಲ ಸಂಸ್ಥೆಗಳನ್ನು ದುರ್ಬಳಕೆ‌ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಗಮನಿಸುತ್ತದೆ : ಬಿಹಾರದಲ್ಲಿ ರಾಷ್ಟ್ರೀಯ ಮಹಾನ್ ವ್ಯಕ್ತಿಗಳ ಜಯಂತಿ ರಜೆ ರದ್ದು ಮಾಡಿ‌, ರಂಜಾನ್​ಗೆ ಹೆಚ್ಚಿನ ರಜೆ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ ಗಮನ ಹರಿಸುತ್ತದೆ. ಇಂಡಿಯಾ ಮೈತ್ರಿಕೂಟ ಇರೋ ಕಾರಣ ನಮ್ಮ ಕಾಂಗ್ರೆಸ್ ವರಿಷ್ಠರು ಗಮನ ನೀಡುತ್ತಾರೆ ಎಂದು ಹೇಳಿದರು.

ಶಾಸಕರಿಗೆ ಮೊದಲ ಹಂತದಲ್ಲಿ ಆದ್ಯತೆ : ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮೊದಲ ಹಂತದಲ್ಲಿ ಶಾಸಕರಿಗೆ, ಕೆಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಸಭೆ ಕೂಡಾ ಆಗಿದೆ. ಲೋಕಸಭಾ ಚುನಾವಣೆ ಬಳಿಕ ಕಾರ್ಯಕರ್ತರಿಗೆ, ಸದಸ್ಯರುಗಳಿಗೆ ನೀಡುವ ಪ್ರಕ್ರಿಯೆ ನಡೆದಿದೆ. ಅದು ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರಿಗೆ ಗೊತ್ತಿದೆ ಎಂದು ತಿಳಿಸಿದರು.

ಆಳಂದ ಶಾಸಕ ಬಿ ಆರ್ ಪಾಟೀಲ್ ಸಿಎಂಗೆ ಪತ್ರ ಬರೆದಿದ್ದು ಹಾಗೂ ಭೇಟಿ ವಿಚಾರವಾಗಿ ಮಾತನಾಡಿ, ಬಿ ಆರ್ ಪಾಟೀಲ್ ಒಳ್ಳೆಯವರು ಹಾಗೂ ಹಿರಿಯರಿದ್ದಾರೆ. ಸ್ವಾಭಾವಿಕವಾಗಿ ಸ್ವಲ್ಪ ಅಸಮಾಧಾನಗೊಂಡಿದ್ದರು. ಅವರಿಗೆ ಕೆಲ ಗೊಂದಲಗಳಿದ್ದವು. ಗೊಂದಲದ ಬಗ್ಗೆ ಸಿಎಂ ಹೇಳಿದ್ದಾರೆ. ಅದು ಕೃಷ್ಣ ಬೈರೇಗೌಡರು ಸಹ ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ್ದಾರೆ. ಇದು ನಮ್ಮ ಆಂತರಿಕ ವಿಚಾರ. ಮಾಧ್ಯಮದವರೇ ದೊಡ್ಡದು ಮಾಡಿದ್ದೀರಿ ಎಂದು ಎಂ ಬಿ ಪಾಟೀಲ್​ ದೂರಿದ್ದಾರೆ.

ಇದನ್ನೂ ಓದಿ : ಹೆಣ್ಣು ಭ್ರೂಣ ಹತ್ಯೆ ದೊಡ್ಡ ಅಪರಾಧ: ಸಚಿವ ಡಾ.ಎಚ್ ಸಿ.ಮಹಾದೇವಪ್ಪ

Last Updated :Nov 30, 2023, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.