ETV Bharat / state

ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ

author img

By

Published : Mar 22, 2023, 5:19 PM IST

Updated : Mar 22, 2023, 7:22 PM IST

Devotees bath in Krishna River For Ugadi celebration
ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ

ಯುಗಾದಿ ಹಬ್ಬಕ್ಕೆ ಕೃಷ್ಣಾ ನದಿ ತೀರದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನರು.

ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ

ವಿಜಯಪುರ: ಯುಗಾದಿ ಹಬ್ಬದಲ್ಲಿ ಹಿಂದೂಗಳು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಕಾರಣ ನಿನ್ನೆಯಿಂದ ಆಲಮಟ್ಟಿಯ ಕೃಷ್ಣಾ ನದಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಅಮವಾಸ್ಯೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ದಡದಲ್ಲಿ ವಾಹನಗಳನ್ನು ತೊಳೆದು ವಾಹನ ಮಾಲೀಕರು, ಚಾಲಕರು ಪೂಜೆ ಮಾಡಿದರು. ಯುಗಾದಿ ಹಬ್ಬದ ನಿಮಿತ್ತ ಇಂದು ಅವಳಿ ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ್ದ ನೂರಾರು ಪಲ್ಲಕ್ಕಿಗಳು ಹಾಗೂ ದೇವರ ಉತ್ಸವ ಮೂರ್ತಿ, ಪರಿಕರಗಳ ಶುಧ್ಧೀಕರಣ ಕಾರ್ಯವೂ ಇಲ್ಲಿ ಕಂಡುಬಂತು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬ.ಬಾಗೇವಾಡಿ, ಕೊಲ್ಹಾರ, ಬಾಗಲಕೋಟೆ ಜಿಲ್ಲೆಯ ರಾಂಪೂರ, ಸೀತಿಮನಿ, ಬೇವೂರ, ಹೊಸೂರು ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುಕೊಂಡು, ಕೆಲವರು ಟಂಟಂ, ಟ್ರ್ಯಾಕ್ಟರ್, ಎತ್ತಿನ ಬಂಡಿಯ ಮೂಲಕ ಕರೆತಂದು ಸಂಪ್ರದಾಯದಂತೆ ಶುದ್ಧೀಕರಣ ಕಾರ್ಯ ಮಾಡಿದರು. ಕೃಷ್ಣಾ ನದಿ ತೀರದಲ್ಲಿ ಪಲ್ಲಕ್ಕಿಗಳು ಭಕ್ತಿ ಭಾವರಸಗಳ ಪರಿಮಳ ಬೀರಿದವು. ಎಲ್ಲೆಲ್ಲೂ ಪಲ್ಲಕ್ಕಿಗಳ ಕಂಡುಬಂದವು. ಅರಿಶಿನ ಭಂಡಾರದಲ್ಲಿ ಮಿಂದೆದ್ದವು. ದೇವರ ಉತ್ಸವ ಮೂರ್ತಿಗಳಿಗೆ ಸ್ನಾನ ಮಾಡಿಸುವ ದೃಶ್ಯಗಳು ಭಕ್ತಿಪರವಶತೆ ಬೀರುತ್ತಿದ್ದವು.

Devotees bath in Krishna River For Ugadi celebration
ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ

ಉತ್ತರ ಕರ್ನಾಟಕದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ತಾಲ್ಲೂಕಿನ ಹಲವಾರು ಗ್ರಾಮಗಳ ನೂರಾರು ದೇವರುಗಳ ಉತ್ಸವ ಮೂರ್ತಿಗಳನ್ನು, ಪಲ್ಲಕ್ಕಿಗಳನ್ನು ಊರಿನ ಜನರು ಸೇರಿ ಡೊಳ್ಳು ಬಾರಿಸುತ್ತ ಆಲಮಟ್ಟಿ ಆಣೆಕಟ್ಟೆ, ಚಂದ್ರಗಿರಿಯ ಕೃಷ್ಣಾ ನದಿ ತೀರ, ಯಲಗೂರಿನ ನದಿ ತೀರ, ಜಲಾಶಯದ ಬಲಭಾಗಕ್ಕೆ ಆಗಮಿಸಿದ್ದರು. ನದಿಯ ಎರಡು ದಂಡೆಯ ಮೇಲೆ ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ, ಕೊಂಬು ಊದುವುದು ಸೇರಿದಂತೆ ನಾನಾ ಬಗೆಯ ಸದ್ದುಗಳು ಮಾರ್ದನಿಸಿದವು. ಇಲ್ಲಿನ ದೃಶ್ಯ ಜನರನ್ನು ಭಕ್ತಿಯ ಭಾವುಕತೆಯಲ್ಲಿ ತೇಲಿಸಿದವು.

ಅಮವಾಸ್ಯೆ ದಿನ ರಾತ್ರಿ ಒಂದು ದಿನ ವಸತಿ ಇದ್ದು, ಕೃಷ್ಣೆಯಲ್ಲಿ ಯುಗಾದಿ ಅಮವಾಸ್ಯೆ, ಇಲ್ಲವೇ ಯುಗಾದಿ ಪಾಡ್ಯ ದಿನದಂದು ಮೂರ್ತಿಗಳಿಗೆ ಸ್ನಾನ ಮಾಡಿಸಿ, ತಾವೂ ಸ್ನಾನ ಮಾಡಿ ಮರಳಿ ಹೋಗುವ ಸಂಪ್ರದಾಯವನ್ನು ಭಕ್ತರು ಪಾಲಿಸಿದರು. ಇಂಡಿ, ಜಮಖಂಡಿ, ಸಿಂದಗಿ, ಬಾಗೇವಾಡಿ, ಮುದ್ದೇಬಿಹಾಳ, ಬಾಗಲಕೋಟೆ, ಬೀಳಗಿ ಮೊದಲಾದ ತಾಲ್ಲೂಕಿನ ಅನೇಕ ಗ್ರಾಮಗಳ ದೇವರುಗಳು ಈ ಆಲಮಟ್ಟಿ ಜಲಾಶಯಕ್ಕೆ ಬರುವುದು ಹಿಂದಿನಿಂದ ಬಂದ ವಾಡಿಕೆಯಾಗಿದೆ.

ಶಿವ, ಪಾರ್ವತಿ, ದುರ್ಗವ್ವ, ದ್ಯಾಮವ್ವ, ಶೆಟಗೆವ್ವಾ, ಹನುಮಪ್ಪ, ಆಂಜನೇಯ, ಬನಶಂಕರಿ, ಚಂದ್ರಮ್ಮಾ, ಬಸವೇಶ್ವರ, ಪರಮಾನಂದ, ವೀರೇಶ ಪ್ರಭು, ಅಂಬಾ ಭವಾನಿ, ರೇಣುಕಾ ದೇವಿ, ಮಲ್ಲಿಕಾರ್ಜುನ, ಲಕ್ಷ್ಮಿ, ಲಕ್ಕವ್ವ, ಮರಗಮ್ಮ, ಮಾಳಿಂಗರಾಯ, ಮಡಿವಾಳಪ್ಪ, ಹುಚ್ಚಯ್ಯ ಸ್ವಾಮಿ, ವೆಂಕಟಪ್ಪ, ವೀರೇಶ್ವರ, ಮಲ್ಲಯ್ಯ, ಅಮೋಘಸಿದ್ಧ ಹೀಗೆ ಅನೇಕ ದೇವರುಗಳನ್ನು ಆಲಮಟ್ಟಿಗೆ ಕರೆತಂದು ಸ್ನಾನ ಮಾಡಿಸಿದರು. ದೇವತಾರಾಧನೆಯ ಭಕ್ತಿಯಲ್ಲಿ ಪೂಜಿಸಿ ಧನ್ಯತೆ ಅರ್ಪಿಸುತ್ತಿದ್ದ ನೋಟ ಸಾಮಾನ್ಯವಾಗಿತ್ತು.

ಜಾತಿ ಭೇದವಿಲ್ಲದೇ ಎಲ್ಲ ಜಾತಿಯ ದೇವರು ಇಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಯುವಕ, ಯುವತಿಯರು, ಹಿರಿಯರೆಲ್ಲರೂ ಕೃಷ್ಣೆಯಲ್ಲಿ ಸ್ನಾನ ಮಾಡಿ, ಮಡಿಯಲ್ಲಿಯೇ ದೇವರುಗಳನ್ನು ಶುಚಿಗೊಳಿಸಿ ನಂತರ ಪಲ್ಲಕ್ಕಿಗಳನ್ನು ಹೂವಿನಿಂದ ಅಲಂಕರಿಸಿದರು. ಬಹುತೇಕ ಗ್ರಾಮಗಳ ಜನರು ನದಿ ದಂಡೆಯಲ್ಲಿ ಹೋಳಿಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ, ಪ್ರಸಾದ ಸ್ವೀಕರಿಸುತ್ತಿದ್ದ ದೃಶ್ಯ ಎಲ್ಲೆಡೆ ವಿಜೃಂಭಿಸಿತ್ತು.

ಇದನ್ನೂ ಓದಿ: ರೈತರಲ್ಲಿ ಹೊನ್ನೇರು ಸಂಭ್ರಮ: ಯುಗಾದಿಯಂದು ಗದ್ದೆಗಳಲ್ಲಿ ಕೃಷಿ ಚಟುವಟಿಕೆಗೆ ಶ್ರೀಕಾರ

Last Updated :Mar 22, 2023, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.