ETV Bharat / state

ವಿಜಯಪುರ ನಗರದ 141 ಎಕರೆ ಪ್ರದೇಶದಲ್ಲಿ ವೈನ್​ ಪಾರ್ಕ್​ ನಿರ್ಮಾಣ: ಸಚಿವ ಮುನಿರತ್ನ

author img

By

Published : Feb 21, 2023, 6:11 PM IST

ವಿಜಯಪುರದ ನಗರದಲ್ಲಿ ವೈನ್​ ಪಾರ್ಕ್​ ನಿರ್ಮಾಣ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ತೋಟಗಾರಿಕಾ ಸಚಿವರು ತಿಳಿಸಿದರು.

ಸಚಿವ ಮುನಿರತ್ನ
ಸಚಿವ ಮುನಿರತ್ನ

ಬೆಂಗಳೂರು: ಸ್ಥಳೀಯ ದ್ರಾಕ್ಷಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯಪುರ ನಗರದಲ್ಲಿ 141 ಎಕರೆ ವಿಸ್ತೀರ್ಣದಲ್ಲಿ ವೈನ್​ ಪಾರ್ಕ್​ ನಿರ್ಮಿಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ವಿಧಾನಸಭೆಯಲ್ಲಿಂದು ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ದೇವಾನಂದ ಪೂಲಸಿಂಗ್ ಚವ್ಹಾಣ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ವೈನ್‌ ಪಾರ್ಕ್‌ ಯಾಕೆ?: ವಿಜಯಪುರ, ಬೆಳಗಾವಿ, ಬಾಗಲಕೋಟೆ, ಮತ್ತಿತರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅಂದಾಜು 3 ರಿಂದ 4 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತದೆ. ಇವೆಲ್ಲವೂ ಮಹಾರಾಷ್ಟ್ರಕ್ಕೆ ಹೋಗುವುದರಿಂದ ಆದಾಯವೂ ಆ ರಾಜ್ಯದ ಪಾಲಾಗುತ್ತಿದೆ. ನಮ್ಮ ರಾಜ್ಯಕ್ಕೆ ವರಮಾನ ಹೆಚ್ಚಿಸುವುದು ಹಾಗೂ ಸ್ಥಳೀಯರಿಗೆ ಪ್ರೋತ್ಸಾಹ ನೀಡಲು ವೈನ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಮುನಿರತ್ನ ವಿವರಿಸಿದರು.

ವಿದೇಶಿ ಬ್ರಾಂಡ್ ಮಾದರಿ ವೈನ್ ಉತ್ಪಾದಿಸಬೇಕು ಎಂಬುದು ಬಹುತೇಕರ ಬೇಡಿಕೆ. ಸರ್ಕಾರ ಇದನ್ನು ಪರಿಗಣಿಸಲಿದೆ. ಅದಕ್ಕೂ ಮುನ್ನ ಈ ಭಾಗದಲ್ಲಿ ದ್ರಾಕ್ಷಿ ಹಣ್ಣು ಹಾಳಾಗದಂತೆ ಸಂಗ್ರಹಿಸಿಡಲು ಶೀಥಲೀಕರಣ ಕೇಂದ್ರ ಪ್ರಾರಂಭಿಸಲಾಗುವುದು. ಪ್ರಸಕ್ತ ಬಜೆಟ್​ನಲ್ಲಿ ಮುಖ್ಯಮಂತ್ರಿಗಳು 100 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ನಬಾರ್ಡ್‌ನಿಂದ 41 ಕೋಟಿ ರೂ. ಆರ್ಥಿಕ ನೆರವಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿಯೂ ಸಿಕ್ಕಿದೆ. ವಿಸ್ತೃತ ಯೋಜನಾ ವರದಿ ತಯಾರಿಸಿ ಶೀಘ್ರದಲ್ಲೇ ಶೀಥಲೀಕರಣ ಕೇಂದ್ರ ಪ್ರಾರಂಭಿಸಲಾಗುವುದು. 10 ಸಾವಿರ ಮೆ.ವ್ಯಾಟ್ ಸಾಮರ್ಥ್ಯ ಇರುವುದರಿಂದ ಸ್ಥಳೀಯರು ದ್ರಾಕ್ಷಿ ಹಣ್ಣನ್ನು ಹೊರ ರಾಜ್ಯಗಳಿಗೆ ಕೊಂಡೊಯ್ಯುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ಚಿರತೆ ಸೆರೆಗೆ ಕ್ರಮ: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಚಿರತೆಗಳನ್ನು ಸೆರೆಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದರು. ಚಿರತೆಗಳನ್ನು ಜೀವಂತವಾಗಿ ಸೆರೆಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರಿಸಲಾಗುತ್ತಿದೆ. ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಚಿರತೆ ಕೊಲ್ಲಲು ಅವಕಾಶವಿಲ್ಲ ಎಂದರು.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಮಂಡ್ಯದಲ್ಲೇ 19 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. 2019-22ರವರೆಗೆ ಒಂದು ಮಾನವ ಪ್ರಾಣ ಹಾನಿಯಾಗಿ ಏಳೂವರೆ ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಒಟ್ಟು 410 ಪ್ರಕರಣಗಳು ದಾಖಲಾಗಿದ್ದು, 28.87 ಲಕ್ಷ ರೂ. ಪರಿಹಾರ ನೀಡಿರುವುದಾಗಿ ಸದನಕ್ಕೆ ಮಾಹಿತಿ ನೀಡಿದರು.

ಬೆಳಗಾವಿಯ ಜಿಲ್ಲೆಯ ಖಾನಾಪುರ ಮತ್ತು ಇತರ ಕಡೆ ಹರಿಯುವ ಮಲಪ್ರಭೆ ನದಿ ಪಾತ್ರದ ಗುಂಟ ಒತ್ತುವರಿಯಾಗಿದೆ. ಕೆಲವು ಕಡೆಗಳಲ್ಲಿ ಇದು ನದಿಯ ಬದಲಾಗಿ ಸಣ್ಣ ಹಳ್ಳದಂತೆ ಕಾಣುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ವಿಷಯವಾಗಿ ನಡೆದ ಚರ್ಚೆಯ ವೇಳೆ ಸದನದ ಗಮನಕ್ಕೆ ತಂದರು. ಇದಕ್ಕೂ ಮುನ್ನ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನೆ ಕೇಳಿ, ರಾಜ್ಯದ ಪ್ರಮುಖ ನದಿಯಾಗಿರುವ ಮಲಪ್ರಭಾ ಮಳೆಗಾಲದಲ್ಲಿ ಖಾನಾಪುರ ಭಾಗದಲ್ಲಿ ವ್ಯಾಪಕ ಪ್ರವಾಹವನ್ನು ಸೃಷ್ಟಿಸುತ್ತಿದೆ. ಇದರಿಂದ ರಸ್ತೆ ಮತ್ತಿತರ ಮೂಲ ಸೌಕರ್ಯಗಳು ಹಾನಿಗೆ ಒಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಅವರು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳಿಗೆ ಪ್ರವಾಹದಿಂದ ಹಾನಿಯಾಗಿದೆ. ಸೇತುವೆಗಳಿಗೂ ಧಕ್ಕೆಯಾಗಿದೆ. ಆದ್ದರಿಂದ 9.75 ಕೋಟಿ ಮೊತ್ತದ ನಾಲ್ಕು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ಇದು ನೀರಾವರಿ ನಿಗಮದ ಪರಿಶೀಲನೆಯಲ್ಲೂ ಇದೆ. ಅನುಮೋದನೆ ದೊರಕಿದ ನಂತರ ಆದಷ್ಟು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಅಕೇಶಿಯಾ ಮರಗಳಿಂದ ಅಂತರ್ಜಲ ಮಟ್ಟ ತಗ್ಗುತ್ತಿದೆ ಎಂಬುದರ ಬಗ್ಗೆ ಇದುವರೆಗೆ ಯಾವುದೇ ಸಂಶೋಧನೆ ನಡೆದಿಲ್ಲ ಎಂದು ಮುಖ್ಯಮಂತ್ರಿಗಳ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಡಾ. ಭರತ್ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: 'ದಮ್ಮು, ತಾಕತ್ತಿದ್ದರೆ ನನ್ನ ಹೊಡೆದು ಹಾಕಿ, ನಿಮ್ಮ ಬೆದರಿಕೆಗೆ ಹೆದರುವುದಿಲ್ಲ': ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.