ETV Bharat / state

ವಲಸೆ ಕಾರ್ಮಿಕರ ಮೇಲೆ ಕಳ್ಳತನ ಆರೋಪ, ಪೊಲೀಸರಿಂದ ಚಿತ್ರಹಿಂಸೆ?: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

author img

By

Published : Jul 1, 2021, 8:40 PM IST

muddebihala
ಮುದ್ದೇಬಿಹಾಳದಲ್ಲಿ ಸ್ಮಶಾನಕ್ಕೆ ತೆರಳಿದ್ದ ಜನ

ನಾಲ್ಕು ದಿನಗಳ ಹಿಂದಷ್ಟೇ ನನಗೆ ಫೋನ್ ಮಾಡಿದ್ದ ನನ್ನ ತಮ್ಮ ಹುಲಗಪ್ಪ ಅಂಬಿಗೇರ, ಪೊಲೀಸರು ಕಳ್ಳತನದ ಆರೋಪದ ಮೇಲೆ ಹಿಡಿದು ಠಾಣೆಗೆ ಕರೆಸಿಕೊಂಡು ನಮಗೆ ಹಿಂಸಿಸುತ್ತಿದ್ದಾರೆ. ನಾಲ್ಕೈದು ಬಾರಿ ಇದೇ ರೀತಿ ಮಾಡಿದ್ದಾರೆ. ನೀನು ಬಂದು ನಮ್ಮನ್ನು ಬಿಡಿಸಿಕೊಂಡು ಹೋಗು ಎಂದಿದ್ದ ಎಂದು ಮೃತನ ಅಕ್ಕ ಗಂಗವ್ವ ಅಂಬಿಗೇರ ತಮ್ಮ ನೋವು ತೋಡಿಕೊಂಡಿದ್ದಾರೆ..

ಮುದ್ದೇಬಿಹಾಳ: ತಾಲೂಕಿನ ಸುಲ್ತಾನಪೂರ ಗ್ರಾಮದ ಒಂದೇ ಕುಟುಂಬದ ಮೂವರು ಗೋವಾದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಮೂವರ ಅಂತ್ಯಸಂಸ್ಕಾರವನ್ನು ಗ್ರಾಮದ ಕೃಷ್ಣಾ ನದಿ ದಡದಲ್ಲಿ ಸಾಮೂಹಿಕವಾಗಿ ನಡೆಸಲಾಯಿತು.

ನೇಣಿಗೆ ಶರಣಾಗಿದ್ದ ಗ್ರಾಮದ ಹುಲಗಪ್ಪ ಅಂಬಿಗೇರ(35), ಆತನ ಪತ್ನಿ ದೇವಮ್ಮ ಅಂಬಿಗೇರ(28) ಸಹೋದರ ಗಂಗಪ್ಪ ಅಂಬಿಗೇರ(29) ಗೋವಾ ರಾಜ್ಯಕ್ಕೆ ಕೂಲಿ ಮಾಡಲೆಂದು ವಲಸೆ ಹೋಗಿದ್ದರು. ಕಳೆದ ಹಲವು ವರ್ಷಗಳಿಂದ ಗೋವಾ ರಾಜ್ಯದಲ್ಲಿಯೇ ಕೂಲಿ ಮಾಡಿಕೊಂಡು ಈ ಕುಟುಂಬ ಜೀವನ ಸಾಗಿಸುತ್ತಿತ್ತು. ಗೋವಾ ಪೊಲೀಸರು ಈ ಕುಟುಂಬದ ಮೇಲೆ ಕಳ್ಳತನ ಆರೋಪ ಹೊರೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಮನನೊಂದು ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತನ ಅಕ್ಕ ಗಂಗವ್ವ ಅಂಬಿಗೇರ

ಘಟನೆಯ ಕುರಿತು ಮಾತನಾಡಿರುವ ಮೃತರ ಸಂಬಂಧಿ ಗಂಗವ್ವ ಅಂಬಿಗೇರ, ನಾಲ್ಕು ದಿನದ ಹಿಂದೆಯಷ್ಟೆ ನನಗೆ ಫೋನ್ ಮಾಡಿದ್ದ ನನ್ನ ತಮ್ಮ ಹುಲಗಪ್ಪ ಅಂಬಿಗೇರ, ಪೊಲೀಸರು ಕಳ್ಳತನದ ಆರೋಪದ ಮೇಲೆ ಹಿಡಿದು ಠಾಣೆಗೆ ಕರೆಸಿಕೊಂಡು ನಮಗೆ ಹಿಂಸಿಸುತ್ತಿದ್ದಾರೆ. ನಾಲ್ಕೈದು ಬಾರಿ ಇದೆ ರೀತಿ ಮಾಡಿದ್ದಾರೆ. ನೀನು ಬಂದು ನಮ್ಮನ್ನು ಬಿಡಿಸಿಕೊಂಡು ಹೋಗು ಎಂದಿದ್ದರು.

ಅದಾದ ನಂತರ ಏಕಾಏಕಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಸಹಕಾರ ನೀಡಿಲ್ಲ ಎಂದು ನನ್ನ ಹಾಗೂ ನನ್ನ ಗಂಡನ ಮೇಲೆ ಕೂಡ ಕಳ್ಳತನ ಪ್ರಕರಣವನ್ನು ಅಲ್ಲಿನ ಪೊಲೀಸರು ದಾಖಲಿಸಿದ್ದಾರೆ. ಅಂತಿಮ ಸಂಸ್ಕಾರ ಮುಗಿದ ತಕ್ಷಣ ಮತ್ತೆ ಪೊಲೀಸ್​ ಠಾಣೆಗೆ ಬರಬೇಕು ಎಂದು ನಮಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸಂಬಂಧವೇ ಇರದಿದ್ದರೂ ಕೇಸ್​ ದಾಖಲು: ಕಳ್ಳತನ ಮಾಡಿದ್ದರೆ ಅದರ ಹಣ, ಒಡವೆ ಅವರ ಬಳಿ ಇರಬೇಕಿತ್ತು. ಕಳೆದ ಮೂವತ್ತು ವರ್ಷಗಳಿಂದ ಗೋವಾದಲ್ಲಿ ದುಡಿಯುತ್ತಿದ್ದೇವೆ. ನಾಲ್ಕೇ ನಾಲ್ಕು ದಿನದಲ್ಲಿ ಕೂಲಿ ಕೆಲಸಕ್ಕೆಂದು ಕರೆಯಿಸಿಕೊಂಡಿದ್ದ ವ್ಯಕ್ತಿ ಹತ್ತು ಲಕ್ಷ ರೂ. ಕಳ್ಳತನದ ಆರೋಪವನ್ನು ನಮ್ಮ ಕುಟುಂಬದ ಮೇಲೆ ಹೊರಿಸಿ ದೂರು ದಾಖಲಿಸಿದ್ದು, ಅದರ ಹಿನ್ನೆಲೆ ಅರಿಯದೆ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಹಾಗೊಂದು ವೇಳೆ ಕಳ್ಳತನ ಮಾಡಿದ್ದರೆ ಆ ವಸ್ತುಗಳು ಸಿಗಬೇಕಿತ್ತು. ವಿನಾಕಾರಣ ಪೊಲೀಸರ ದೌರ್ಜನ್ಯದಿಂದ ಮನನೊಂದಿರುವ ನಮ್ಮ ಸಹೋದರ, ಆತನ ಪತ್ನಿ ನೇಣು ಹಾಕಿಕೊಂಡಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಸಂಬಂಧವೇ ಇರದಿದ್ದರೂ ನನ್ನ ಹೆಸರು ಹಾಗೂ ನಮ್ಮ ಕುಟುಂಬದವರ ಹೆಸರನ್ನೂ ಸಹ ದಾಖಲು ಮಾಡಿದ್ದಾರೆ ಎಂದು ಮೃತ ಹುಲಗಪ್ಪ ಅಂಬಿಗೇರ ಅವರ ಅಕ್ಕ ಗಂಗವ್ವ ತಿಳಿಸಿದರು.

ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು: ಘಟನೆಯಲ್ಲಿ ನೇಣಿಗೆ ಶರಣರಾಗಿರುವ ಹುಲಗಪ್ಪನ ಸಹೋದರ ಗಂಗಪ್ಪ ಅಂಬಿಗೇರನಿಗೆ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಇದೀಗ ಆತನ ಪತ್ನಿ ಚೈತ್ರಾ ವಿಧವೆಯಾಗಿದ್ದಾಳೆ. ಗೋವಾ ಪೊಲೀಸರು ಕಳ್ಳತನದ ಆರೋಪ ಒಪ್ಪಿಕೊಳ್ಳುವಂತೆ ಕಿರುಕುಳ ನೀಡಿದ ದೌರ್ಜನ್ಯದಿಂದಲೇ ತನ್ನ ಪತಿ ಸಾವನ್ನಪ್ಪಿದ್ದು, ನ್ಯಾಯ ಒದಗಿಸಿಕೊಡಬೇಕು ಎಂದು ಮಾಧ್ಯಮಗಳ ಮುಂದೆ ಗೋಳು ತೋಡಿಕೊಂಡಿದ್ದಾಳೆ.

ಹುಲಗಪ್ಪ ಅಂಬೀಗೇರ ದಂಪತಿಗೆ ಎರಡು ಚಿಕ್ಕಮಕ್ಕಳಿದ್ದು, ಅವರು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಭವಿಷ್ಯ ಕೂಡಾ ಅತಂತ್ರದಲ್ಲಿ ಸಿಲುಕಿದ್ದು, ಸರ್ಕಾರ ಚಿಂತನೆ ಮಾಡಿ ಗೋವಾ ರಾಜ್ಯದ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ನ್ಯಾಯ ಕೂಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಿಂಗಳ ಹಿಂದಷ್ಟೇ ಸಪ್ತಪದಿ ತುಳಿದ ವೈದ್ಯ ಜೋಡಿ 'ವೈದ್ಯರ ದಿನವೇ' ಆತ್ಮಹತ್ಯೆಗೆ ಶರಣು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.