ETV Bharat / state

ಬಜರಂಗದಳ ನಿಷೇಧ ಪಿಎಫ್​ಐ, ಐಎಸ್‌ಐಗೆ ಆಹ್ವಾನ ನೀಡಿದಂತೆ: ಸಿಎಂ ಯೋಗಿ ಆದಿತ್ಯನಾಥ್​

author img

By

Published : May 6, 2023, 9:18 PM IST

Updated : May 6, 2023, 10:55 PM IST

yogi-adityanath-reaction-on-bajrang-dal-ban
ಬಜರಂಗದಳ ನಿಷೇಧ ಪಿಎಫ್​ಐ, ಐಎಸ್‌ಐಗೆ ಆಹ್ವಾನ ನೀಡಿದಂತೆ: ಸಿಎಂ ಯೋಗಿ ಆದಿತ್ಯನಾಥ್​

ಉತ್ತರಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ಹಾಗೂ ಮಾಫಿಯಾಕ್ಕೆ ಮಾಡಿದಂತೆ, ಪಿಎಫ್ಐ, ಐಎಸ್ಐ ಸೊಂಟ ಮುರಿಯುತ್ತೇವೆ ಎಂದು ಸಿಎಂ ಯೋಗಿ ಆದಿತ್ಯನಾಥ್​ ಗುಡುಗಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್​

ಕಾರವಾರ: ಬಜರಂಗದಳ ನಿಷೇಧ ಮಾಡುವುದರ ಅರ್ಥ ಪಿಎಫ್​ಐ, ಐಎಸ್‌ಐಗೆ ಆಹ್ವಾನ ನೀಡಿದಂತೆ. ಇಂತಹ ಪ್ರಯತ್ನಕ್ಕೆ ಮುಂದಾದರೆ ಉತ್ತರಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ಹಾಗೂ ಮಾಫಿಯಾಕ್ಕೆ ಮಾಡಿದಂತೆ ಪಿಎಫ್ಐ, ಐಎಸ್ಐ ಸೊಂಟ ಮುರಿಯುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಎಚ್ಚರಿಕೆ ನೀಡಿದರು. ಹೊನ್ನಾವರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉಡುಪಿಯಿಂದ‌ ಹೆಲಿಕಾಪ್ಟರ್ ಮೂಲಕ ಹೊನ್ನಾವರಕ್ಕೆ ಆಗಮಿಸಿದ ಅವರು ಜೈ ಬಜರಂಗಬಲಿ ಎಂದು ಘೋಷಣೆ ಹಾಕಿ, ಭಟ್ಕಳ ಕ್ಷೇತ್ರದ ಎಲ್ಲ ಬಂಧು ಭಗಿನಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಶ್ರೀರಾಮನ ಪವಿತ್ರ ಸ್ಥಳ ಅಯೋಧ್ಯೆಯಿಂದ ಹನುಮನ ಜನ್ಮ ಸ್ಥಳ ಕರ್ನಾಟಕಕ್ಕೆ ಆಗಮಿಸಿ ಎಲ್ಲರಿಗೂ ಹೃದಯಪೂರ್ವಕವಾಗಿ ವಂದಿಸುತ್ತೇನೆ ಎಂದರು.

ಭಾರತದ ಅಭಿವೃದ್ಧಿ ಸಹಿಸದೇ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧ ಮಾಡುವವರು ಪಿಎಫ್‌ಐ, ಐಎಸ್ಐ ಸ್ಲೀಪರ್ ಸೆಲ್‌ಗಳನ್ನ ಬೆಂಬಲಿಸುತ್ತಿದ್ದಾರೆ. ಇನ್ನೊಂದೆಡೆ ಬಜರಂಗದಳದಂತಹ ಸಾಮಾಜಿಕ, ರಾಷ್ಟ್ರವಾದದ ಸಂಘಟನೆಗಳನ್ನ ಬಂದ್ ಮಾಡಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಬಜರಂಗದಳ ನಿಷೇಧ ಮಾಡುವುದರ ಅರ್ಥ ಪಿಎಫ್​ಐ, ಐಎಸ್‌ಐಗೆ ಆಹ್ವಾನ ನೀಡಿದಂತೆ. ಒಂದು ವೇಳೆ ಇಂತಹ ಪ್ರಯತ್ನಕ್ಕೆ ಮುಂದಾದರೆ ಉತ್ತರಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ಹಾಗೂ ಮಾಫಿಯಾಕ್ಕೆ ಮಾಡಿದಂತೆ, ಪಿಎಫ್ಐ, ಐಎಸ್ಐ ಸೊಂಟ ಮುರಿಯುತ್ತೇವೆ ಎಂದು ಗುಡುಗಿದರು.

ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರದ ನಿರ್ಮಾಣ ಕಾರ್ಯಕ್ಕೆ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಚಾಲನೆ‌ ನೀಡಿದೆ. ಕಾಂಗ್ರೆಸ್ ಹನುಮನನ್ನ ಏಕೆ ವಿರೋಧ ಮಾಡುತ್ತಿದೆ‌ ಎಂದು ಈಗ ಅರ್ಥವಾಗುತ್ತಿದೆ. ಹನುಮ ಇರುವಲ್ಲಿ ಭೂತಪ್ರೇತಗಳು ಹತ್ತಿರವೂ ಸುಳಿಯಲ್ಲ. ಹೀಗಾಗಿ ರಾಕ್ಷಸಿ ಪ್ರವೃತ್ತಿಯ ಕಾಂಗ್ರೆಸ್ ನಾಶವಾಗುವ ಆತಂಕದಿಂದ ವಿರೋಧ ಮಾಡುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ಅಭಿವೃದ್ಧಿ, ರಾಷ್ಟ್ರವಾದದ ಚಿಂತನೆಯ ಡಬಲ್ ಇಂಜಿನ್‌ನ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಇನ್ನು ಭಟ್ಕಳ ಕ್ಷೇತ್ರದ ಅಭ್ಯರ್ಥಿ ಸುನೀಲ್ ನಾಯ್ಕ್ ಹಾಗೂ ಕುಮಟಾ ಕ್ಷೇತ್ರದ ಅಭ್ಯರ್ಥಿ ದಿನಕರ ಶೆಟ್ಟಿ ಅವರನ್ನು ಬಹುಮತದಿಂದ ಆರಿಸಿ ತರುವಂತೆ ಕರೆಕೊಟ್ಟ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಮುಂಬರುವ ಜನವರಿ 24ರಂದು ಲೋಕಾರ್ಪಣೆಗೊಳ್ಳಲಿದೆ. ಕರಸೇವೆಯಲ್ಲಿ ಕರ್ನಾಟದ ಭಕ್ತರು ಭಾಗವಹಿಸಿದ್ದರು. ಅದರಂತೆ ರಾಮಮಂದಿರ ಉದ್ಘಾಟನೆಯಲ್ಲೂ ಕರ್ನಾಟಕ ಜನತೆ ಉಪಸ್ಥಿತರಿರಬೇಕು ಎಂದು ಯೋಗಿ ಆದಿತ್ಯನಾಥ ಆಹ್ವಾನ ನೀಡಿದರು.

ಯೋಗಿ ಆದಿತ್ಯನಾಥ್​ಗೆ ಯಕ್ಷಗಾನ ಕಿರೀಟ ತೊಡಿಸಿ ಸ್ವಾಗತ: ಹೊನ್ನಾವರಕ್ಕೆ ಆಗಮಿಸಿದ ಯೋಗಿಗೆ ಜಿಲ್ಲಾ ಬಿಜೆಪಿ ವತಿಯಿಂದ ಬಡಗುತಿಟ್ಟಿನ ಯಕ್ಷಗಾನ ಕಿರೀಟ ತೊಡಿಸಿ ಇಡಗುಂಜಿ ಮಹಾಗಣಪತಿಯ ವಿಗ್ರಹ ನೀಡಿ ಸ್ವಾಗತ ಮಾಡಲಾಯಿತು. ಈ ಸಂದರ್ಭದಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿನಕರ್ ಶೆಟ್ಟಿ, ಭಟ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ನಾಯ್ಕ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ: ಸೋನಿಯಾ ಗಾಂಧಿ ಕರೆ

Last Updated :May 6, 2023, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.