ETV Bharat / state

ಹದಗೆಟ್ಟ ಶಿರಸಿ-ಕುಮಟಾ ರಸ್ತೆ: ಜನರಿಂದ ಹಿಡಿಶಾಪ

author img

By

Published : Dec 8, 2022, 6:50 PM IST

kn_kwr
ಹದಗೆಟ್ಟ ಶಿರಸಿ ಕುಮಟಾ ರಸ್ತೆ

ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಷ್ಟವಾಗುತ್ತಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸವಾರರು ಆಗ್ರಹಿಸಿದ್ದಾರೆ.

ಕಾರವಾರ: ಮಲೆನಾಡು-ಕರಾವಳಿ ಸಂಪರ್ಕಿಸುವ ಶಿರಸಿ-ಕುಮಟಾ ರಸ್ತೆ ಹದಗೆಟ್ಟು ದಶಕಗಳೇ ಕಳೆದಿದೆ. ಕಳೆದೆರಡು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ಧೂಳುಮಯ ರಸ್ತೆಯಲ್ಲೇ ನಿತ್ಯ ಓಡಾಟ ನಡೆಸುವವರಿಗೆ ಉಸಿರುಗಟ್ಟುವ ಸ್ಥಿತಿ ಇದ್ದು ಜನರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ಓಡಾಡುತ್ತಿದ್ದಾರೆ.

ಭಾರತ್ ಮಾಲಾ ಫೇಸ್-1ರ ಅಡಿಯಲ್ಲಿ ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೆಕೇರಿ ಬಂದರು ಲಿಂಕ್ ರೋಡ್‌ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 766ಇ ಆಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ 2018ರಲ್ಲಿ ಅನುಮೋದನೆ ನೀಡಿತ್ತು.

ಹದಗೆಟ್ಟ ಶಿರಸಿ ಕುಮಟಾ ರಸ್ತೆ

ಅದರಂತೆ, ವಿಳಂಬವಾಗಿಯಾದರೂ 2021ರಲ್ಲಿ ಗುತ್ತಿಗೆ ಸಂಸ್ಥೆ ಆರ್‌ಎನ್‌ಎಸ್ ಕಾಮಗಾರಿ ಆರಂಭಿಸಿತ್ತಾದರೂ, ಈವರೆಗೆ ಎಲ್ಲಿಯೂ ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ. ಮೊದಲೇ ಕಡಿಮೆ ಅಗಲದ ರಸ್ತೆಯಾಗಿರುವ ಈ ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ಬದಿಯಲ್ಲಿ ವಾಹನಗಳ ಓಡಾಟ ಸಾಹಸಯಮಯವಾಗಿ ಪರಿಣಮಿಸಿದೆ.

ಒಮ್ಮೆ ಸಾರಿಗೆ ಬಸ್ ಅಥವಾ ಬೃಹತ್ ವಾಹನವೊಂದು ಈ ಭಾಗದಲ್ಲಿ ಓಡಾಡಿದರೆ ಅದರ ಹಿಂದೆ ಬೇರಾವ ವಾಹನಗಳೂ ಓಡಾಡಲಾಗದಷ್ಟು ಧೂಳು ಮುಸುಕುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇಲ್ಲಿ ಬೀದಿದೀಪಗಳಿಲ್ಲ. ಒಂದು ಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಯಿಂದ ಸರಳುಗಳನ್ನ ಹಾಗೆಯೇ ಬಿಟ್ಟಿಡಲಾಗಿದ್ದು, ಇದು ಕೂಡ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ.

ಸಂಘಟನೆಗಳು ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಸೂಚಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೂ ಜನಪ್ರತಿನಿಧಿಗಳಾಗಲಿ, ಗುತ್ತಿಗೆ ಸಂಸ್ಥೆಯವರಾಗಲಿ ಇತ್ತ ಕಿವಿಗೊಡುತ್ತಿಲ್ಲ. ಹೀಗಾಗಿ ಇಲ್ಲಿಯೂ ಕಮಿಷನ್ ವ್ಯವಹಾರ ನಡೆಯುತ್ತಿರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ದೂರಿದರು.

ಇದನ್ನೂ ಓದಿ: ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.