ETV Bharat / state

ಸ್ಮಶಾನ ಭೂಮಿ ಅತಿಕ್ರಮಣ ತೆರವಿಗೆ ಆದೇಶ : ಸೀಮೆ ಎಣ್ಣೆ, ಹಗ್ಗ ಹಿಡಿದು ಆತ್ಮಹತ್ಯೆ ಎಚ್ಚರಿಕೆ ನೀಡಿದ ಜನ

author img

By

Published : Oct 23, 2021, 9:21 PM IST

Updated : Oct 23, 2021, 10:22 PM IST

residents-of-kotewada-protest
ಕೋಟೆವಾಡದ ನಿವಾಸಿಗಳು

ಹಿಂದೂ ಸ್ಮಶಾನ ಭೂಮಿಯ ಬೇಡಿಕೆಯ ಅನ್ವಯ ಕಾನೂನಿನ ಪ್ರಕಾರ ಅತಿಕ್ರಮಣ ವಾದ ಮನೆಗಳನ್ನು ತೆರವುಗೊಳಿಸಲು ತಹಶೀಲ್ದಾರರು ಕಳೆದ ಒಂದು ವರ್ಷದಿಂದ ಹಲವು ಬಾರಿ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ ಅಲ್ಲಿನ 40ಕ್ಕೂ ಅಧಿಕ ಕುಟುಂಬಗಳಿಗೆ ನೋಟಿಸ್ ನೀಡಿ ಅತಿಕ್ರಮಣದ ಕುರಿತು ಸ್ಪಷ್ಟನೆ ಒದಗಿಸಲು ಏಳು ದಿನಗಳ ಕಾಲಾವಕಾಶ ನೀಡಿದ್ದರು. ಇಲ್ಲವಾದಲ್ಲಿ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಸೂಚಿಸಿದ್ದರು..

ಕಾರವಾರ: ಹಿಂದೂ ಸ್ಮಶಾನ ಭೂಮಿ ಅತಿಕ್ರಮಣ ತೆರವುಗೊಳಿಸುವಂತೆ ಪುರಸಭೆಯ ಆದೇಶ ಖಂಡಿಸಿ ಅಂಕೋಲಾ ಪುರಸಭೆ ವ್ಯಾಪ್ತಿಯ ಕೋಟೆವಾಡದ ನಿವಾಸಿಗಳು ಶನಿವಾರ ಹಠಾತ್ ಪ್ರತಿಭಟನೆ ನಡೆಸಿ ಮನೆ ತೆರವುಗೊಳಿಸಲು ಮುಂದಾದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೀಮೆ ಎಣ್ಣೆ, ಹಗ್ಗ ಹಿಡಿದು ಎಚ್ಚರಿಸಿದ ಘಟನೆ ನಡೆದಿದೆ.

ಸೀಮೆ ಎಣ್ಣೆ, ಹಗ್ಗ ಹಿಡಿದು ಆತ್ಮಹತ್ಯೆ ಎಚ್ಚರಿಕೆ ನೀಡಿದ ಜನ

ಕೋಟೆವಾಡದ ಬಳಿಯ ಹಿಂದೂ ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ. ಅಲ್ಲಿ ಮನೆಯಗಳನ್ನು ಕಟ್ಟಲಾಗಿದೆ. ಸ್ಮಶಾನ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಸ್ಮಶಾನ ಸುರಕ್ಷಾ ಸಮಿತಿ ಅಧ್ಯಕ್ಷ ಸುರೇಶ ವೆರ್ಣೇಕರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು.

ಈ ಸಂಬಂಧ ತಮಟೆ ಬಾರಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಹಿಂದೂ ಸ್ಮಶಾನ ಭೂಮಿಯ ಬೇಡಿಕೆಯ ಅನ್ವಯ ಕಾನೂನಿನ ಪ್ರಕಾರ ಅತಿಕ್ರಮಣವಾದ ಮನೆಗಳನ್ನು ತೆರವುಗೊಳಿಸಲು ತಹಶೀಲ್ದಾರರು ಕಳೆದ ಒಂದು ವರ್ಷದಿಂದ ಹಲವು ಬಾರಿ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಹೀಗಾಗಿ, ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ ಅಲ್ಲಿನ 40ಕ್ಕೂ ಅಧಿಕ ಕುಟುಂಬಗಳಿಗೆ ನೋಟಿಸ್ ನೀಡಿ ಅತಿಕ್ರಮಣದ ಕುರಿತು ಸ್ಪಷ್ಟನೆ ಒದಗಿಸಲು ಏಳು ದಿನಗಳ ಕಾಲಾವಕಾಶ ನೀಡಿದ್ದರು. ಇಲ್ಲವಾದಲ್ಲಿ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಸೂಚಿಸಿದ್ದರು.

ಅದರಂತೆ ಇಂದು ಪುರಸಭೆಯ ಮುಖ್ಯ ಅಧಿಕಾರಿಗಳ ಆದೇಶದ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು. 40 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಸರ್ಕಾರದಿಂದ ಮನೆ ಹಕ್ಕು ಪತ್ರ, ಕರವಸೂಲಿ ರಸೀದಿ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸೇರಿ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಆದಾಗಿಯೂ ಸಮಿತಿಯ ಒತ್ತಾಯದಿಂದ ನಮ್ಮನ್ನು ಬೀದಿಗಿಳಿಸಲು ಪ್ರಯತ್ನಿಸಲಾಗುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮ್ಮನ್ನು ಒಕ್ಕಲೆಬ್ಬಿಸಿದರೆ ಆತ್ಮಹತ್ಯೆಯೊಂದೇ ಕೊನೆಯ ದಾರಿಯಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪೊಲೀಸರೇದುರು ಸಮಸ್ಯೆ ಹೇಳಿಕೊಂಡ ನಿವಾಸಿಗಳು: ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪಿಎಸ್‌ಐ ಪ್ರೇಮನ ಗೌಡ ಪಾಟೀಲ್ ಹಾಗೂ ಪ್ರವೀಣಕುಮಾರ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. ಪರವಾನಿಗೆ ಇಲ್ಲದೆ ಪ್ರತಿಭಟನೆ ಮಾಡಬಾರದು. ಕಾನೂನಿನ ಪ್ರಕಾರವಾಗಿ ಹೋರಾಟ ಮಾಡಿ ಎಂದು ತಿಳಿಸಿದರು.

ಕೊನೆಗೆ ಪೊಲೀಸರ ಎದುರು ಸಮಸ್ಯೆ ಹೇಳಿಕೊಂಡ ನಿವಾಸಿಗಳು ಯಾರದ್ದೋ ಒತ್ತಾಯಕ್ಕೆ ತಮ್ಮನ್ನು ಎಬ್ಬಿಸದಂತೆ ಮನವಿ ಮಾಡಿದರು. ಬಳಿಕ ಪೊಲೀಸರು ಈ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಸದ್ಯ ಪ್ರತಿಭಟನೆ ಕೈ ಬಿಡುವಂತೆ ತಿಳಿಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

Last Updated :Oct 23, 2021, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.