ETV Bharat / state

ಕಾರವಾರ ನಗರಸಭೆ ಎಡವಟ್ಟು; ಕೆಲಸ ಮಾಡಿ ಹಣ ಸಂದಾಯವಾಗದೆ ಗುತ್ತಿಗೆದಾರರಿಗೆ ಸಂಕಷ್ಟ

author img

By ETV Bharat Karnataka Team

Published : Sep 15, 2023, 3:39 PM IST

ಕಾರವಾರ ನಗರಸಭೆ ಎಡವಟ್ಟು
ಕಾರವಾರ ನಗರಸಭೆ ಎಡವಟ್ಟು

ಕಾರವಾರ ನಗರಸಭೆಯಲ್ಲಿ ಹಣವಿಲ್ಲ. ಅಧಿಕಾರಿಗಳು 10 ಕೋಟಿ ರೂ ವೆಚ್ಚದ 300ಕ್ಕೂ ಅಧಿಕ ಕಾಮಗಾರಿ ಮಾಡಿಸಿದ್ದು, ಇದೀಗ ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಗುತ್ತಿಗೆದಾರರು ಮತ್ತು ಜಿಲ್ಲಾಧಿಕಾರಿಯ ಪ್ರತಿಕ್ರಿಯೆ

ಕಾರವಾರ: ಕಡಲ ನಗರಿ ಕಾರವಾರದ ನಗರಸಭೆ ಅಧಿಕಾರಿಗಳ ಎಡವಟ್ಟಿನಿಂದ ಇದೀಗ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಗರಸಭೆಯಲ್ಲಿ ಹಣ ಇಲ್ಲದಿದ್ದರೂ ಅಧಿಕಾರಿಗಳು ಕೋಟಿಗಟ್ಟಲೆ ವೆಚ್ಚದ ಕಾಮಗಾರಿಗಳನ್ನು ಮಾಡಲು ಆದೇಶ ಪತ್ರ ನೀಡಿದ್ದರು. ಸದ್ಯ ಕಾಮಗಾರಿ ಮಾಡಿ ಮುಗಿಸಿದ ಗುತ್ತಿಗೆದಾರರು ತಮ್ಮ ಹಣಕ್ಕಾಗಿ ಪ್ರತಿನಿತ್ಯ ಇಲಾಖೆಗೆ ಅಲೆದಾಡುತ್ತಿದ್ದು, ಇತ್ತ ನಗರಸಭೆಯಲ್ಲಿ ಹಣವೇ ಇಲ್ಲವೆಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ನಗರಸಭೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು 10 ಕೋಟಿ ರೂ ವೆಚ್ಚದ 300ಕ್ಕೂ ಅಧಿಕ ಕಾಮಗಾರಿಗಳನ್ನು ಮಾಡಿಸಲಾಗಿದೆ. ನಗರಸಭೆ ನಿಧಿಯಲ್ಲಿ ಕಾಮಗಾರಿಗಳನ್ನು ಮಾಡಿಸಿದ್ದು ಕಾಮಗಾರಿ ಕೊಡುವ ಮುನ್ನ ಟೆಂಡರ್ ಕರೆದು ಕಾಮಗಾರಿಯ ಆದೇಶ ಪತ್ರವನ್ನು ನೀಡಿ ಗುತ್ತಿಗೆ ಕೆಲಸ ನೀಡಲಾಗಿತ್ತು. ಅದರಂತೆ ಕಾರವಾರ ನಗರದಲ್ಲಿ ಸುಮಾರು 50ಕ್ಕೂ ಅಧಿಕ ಗುತ್ತಿಗೆದಾರರು ಹತ್ತು, ಇಪ್ಪತ್ತು, ಐವತ್ತು ಲಕ್ಷ ಎನ್ನುವಂತೆ ನಗರಸಭೆ ನೀಡಿದ ಅನೇಕ ಕಾಮಗಾರಿಗಳನ್ನು ಮಾಡಿದ್ದರು. ಆದರೆ ನಗರಸಭೆಯ ನಿಧಿಯಲ್ಲಿ ದುಡ್ಡೇ ಇಲ್ಲದಿರುವುದು ಇದೀಗ ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಸುಮಾರು 10 ಕೋಟಿ ರೂಪಾಯಿ ಕಾಮಗಾರಿ ಮಾಡಿದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಗುತ್ತಿಗೆದಾರರು ನಗರಸಭೆಯ ಬಳಿ ಅಲೆದಾಡುತ್ತಿದ್ದು ಇತ್ತ ಹಣ ಇಲ್ಲದೇ ಅಧಿಕಾರಿಗಳು ನಾಳೆ ನಾಡಿದ್ದು ಎಂದು ದಿನ ದೂಡುತ್ತಿದ್ದು ನಗರಸಭೆಯ ಎಡವಟ್ಟಿಗೆ ಗುತ್ತಿಗೆದಾರ ದೀಪಕ್ ಕುಡಾಳಕರ್ ಆಕ್ರೋಶ ವ್ಯಕ್ತಪಡಿಸಿದರು.

ಈಟಿವಿ ಭಾರತ್​ ಜೊತೆ ಮಾತನಾಡಿದ ದೀಪಕ್ ಕುಡಾಳಕರ್, ಕಳೆದ ಎರಡು ಮೂರು ವರ್ಷಗಳಿಂದ ಕಾಮಗಾರಿ ಮುಗಿದರೂ ಬಿಲ್ ಮಾತ್ರ ನೀಡಲ್ಲ. ನಗರಸಭೆಯ ಬಳಿ ಕೇವಲ 24 ಲಕ್ಷ ರೂ ಮಾತ್ರ ಇದ್ದು ಅದರಲ್ಲೂ ಅರ್ಧ ಸಂಭಳಕ್ಕಾಗಿ ತೆಗೆದರೆ ಇನ್ನು ಉಳಿದ 12 ಲಕ್ಷ ಹಣವನ್ನೇ ಗುತ್ತಿಗೆದಾರರಿಗೆ ನೀಡುವ ಪರಿಸ್ಥಿತಿ ಇದೆ. ನಗರಸಭೆಯ ನಿಧಿಯಲ್ಲಿ ಹಣ ಇಲ್ಲದಿದ್ದರೂ ನೂರಾರು ಕಾಮಗಾರಿ ಯಾಕೆ ಮಾಡಿಸಿಕೊಳ್ಳಬೇಕಿತ್ತು?. ನಾವು ಕೈಯಿಂದ ಹಣ ಹಾಕಿ ಮಾಡಿದ ಕೆಲಸಕ್ಕೆ ಹಣ ವಾಪಸ್ ಆಗುತ್ತದೆಯೋ ಇಲ್ಲವೋ ಎನ್ನುವ ಭಯದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಹೇಳಿದರು.

ಗುತ್ತಿಗೆ ಕಾಮಗಾರಿ ಮಾಡಿದ ತಕ್ಷಣ ಶೇ 18 ಜಿಎಸ್‌ಟಿ ಹಣ ಕಟ್ಟಬೇಕು. ಬಿಲ್ ಆಗದೇ ಕೈಯಿಂದ ಜಿಎಸ್‌ಟಿ ಹಣ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಎಸ್‌ಟಿ ಕಟ್ಟದೇ ಬಡ್ಡಿ ಕಟ್ಟುವ ಸ್ಥಿತಿ ಇದ್ದು ಸರ್ಕಾರವೇ ವಿಶೇಷ ಅನುದಾನ ಬಿಡುಗಡೆ ಮಾಡಿ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಗುತ್ತಿಗೆದಾರರು ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ, ತೆರಿಗೆ ಹಣ ಸಂಗ್ರಹ ಮಾಡಲಾಗುತ್ತಿದೆ. ಬಂದ ಅಲ್ಪ ಹಣವನ್ನು ಗುತ್ತಿಗೆದಾರರಿಗೆ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ರಾಜ್ಯಪಾಲರಿಗೆ ಪತ್ರ ಬರೆದ ಗುತ್ತಿಗೆದಾರರಿಗೆ ನೊಟೀಸ್ ನೀಡಿ ವಿಚಾರಣೆಗೊಳಪಡಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.