ETV Bharat / state

ಜನತೆ, ಬೈಕ್​ ಸಂಚಾರಕ್ಕೆ ಮಂಜಗುಣಿ - ಗಂಗಾವಳಿ ಸೇತುವೆ ಮುಕ್ತ : ನನಸಾಯ್ತು ಉತ್ತರ ಕನ್ನಡ ಜನತೆಯ ದಶಕಗಳ ಕನಸು

author img

By ETV Bharat Karnataka Team

Published : Oct 26, 2023, 1:43 PM IST

manjaguni gangavali bridge opens
ಮಂಜಗುಣಿ - ಗಂಗಾವಳಿ ಸೇತುವೆ ಮುಕ್ತ

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ - ಗಂಗಾವಳಿ ಸೇತುವೆಯು ಜನರು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಜನತೆ, ಬೈಕ್​ ಸಂಚಾರಕ್ಕೆ ಮಂಜಗುಣಿ - ಗಂಗಾವಳಿ ಸೇತುವೆ ಮುಕ್ತ

ಕಾರವಾರ (ಉತ್ತರಕನ್ನಡ) : ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ - ಗಂಗಾವಳಿ ಸೇತುವೆ ಜನರ ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಈ ಮೂಲಕ ಇಲ್ಲಿನ ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇಲ್ಲಿ ಸೇತುವೆ ಮಂಜೂರಾಗಿದ್ದರೂ ನಿರ್ಮಾಣ ಕಾರ್ಯ ಮಾತ್ರ ವಿಳಂಬವಾಗಿತ್ತು. ಇದೀಗ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸೇತುವೆಯಲ್ಲಿ ಜನರು ಮತ್ತು ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ.

ಅಂಕೋಲಾ ತಾಲ್ಲೂಕಿನ ಮಂಜಗುಣಿ - ಗಂಗಾವಳಿ ಸೇತುವೆ ಈ ಭಾಗದ ಗ್ರಾಮಸ್ಥರ ದಶಕಗಳ ಕನಸಾಗಿತ್ತು. ಸೇತುವೆ ಮಂಜೂರಾದರೂ ನಿರ್ಮಾಣ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗಿತ್ತು. ಜೊತೆಗೆ ಕೊರೊನಾ ಮಹಾಮಾರಿಯಿಂದಾಗಿ ಸೇತುವೆ ನಿರ್ಮಾಣ ವಿಳಂಬವಾಗಿತ್ತು. ಇದೀಗ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಸೇತುವೆಯ ಎರಡೂ ಕಡೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕಿದೆ.

ನದಿ ದಾಟುತ್ತಿದ್ದವರಿಗೆ ಅನುಕೂಲ : ಸೇತುವೆ ನಿರ್ಮಾಣಕ್ಕೂ ಮುನ್ನ ನದಿ ದಾಟಲು ಗ್ರಾಮಸ್ಥರು ಬಾರ್ಜ್ ಅವಲಂಬಿಸಬೇಕಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ನದಿ ದಾಟುವುದು ಅಸಾಧ್ಯವಾಗಿತ್ತು. ಹೀಗಾಗಿ ಗಂಗಾವಳಿ, ಗೋಕರ್ಣ ಭಾಗದ ಜನರು ಹತ್ತಿರದ ಅಂಕೋಲಾ ಪಟ್ಟಣ ತಲುಪಲು 20 ಕಿ.ಮೀ ಸುತ್ತುವರೆದು ಆಗಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಮಳೆಗಾಲ ಆರಂಭದ ವೇಳೆಗೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾದ ರಸ್ತೆಯಲ್ಲಿ ಜನರು ಹಾಗೂ ದ್ವಿಚಕ್ರ ವಾಹನಗಳು ಓಡಾಟ ನಡೆಸುತ್ತಿವೆ. ಇದರಿಂದಾಗಿ ಹತ್ತಾರು ಕಿ.ಮೀ ಸುತ್ತುವರೆದು ಸಂಚರಿಸುತ್ತಿದ್ದ ಗ್ರಾಮಸ್ಥರಿಗೆ, ಬಾರ್ಜ್ ಮೂಲಕ ಜೀವ ಕೈಯಲ್ಲಿ ನದಿ ದಾಟುತ್ತಿದ್ದವರಿಗೆ ಅನುಕೂಲವಾಗಿದೆ.

ಸೇತುವೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಒತ್ತಾಯ : ಪ್ರತಿನಿತ್ಯ ಗಂಗಾವಳಿ, ಗೋಕರ್ಣ ಭಾಗದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಅಂಕೋಲಾಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಈ ಹಿಂದೆ ಬಾರ್ಜ್ ಓಡಾಟ ಇದ್ದ ಸಂದರ್ಭದಲ್ಲಿ ನದಿ ದಾಟಲು ಬಾರ್ಜ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೀಗ ಸೇತುವೆ ನಿರ್ಮಾಣ ಆಗಿರುವುದರಿಂದ ಕೆಲಸಕ್ಕೆ ತೆರಳಲು ಅನುಕೂಲವಾಗಿದೆ. ಸೇತುವೆ ಮೂಲಕ ಅಂಕೋಲಾಕ್ಕೆ ಕೇವಲ 10 ಕಿ.ಮೀ ದೂರವಿರುವುದರಿಂದ ಈ ಭಾಗದ ಜನರಿಗೆ ಸಾಕಷ್ಟು ಸಮಯ ಉಳಿದಂತಾಗುತ್ತದೆ. ಇನ್ನು ಸೇತುವೆಯ ಸಂಪರ್ಕ ರಸ್ತೆ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿದಲ್ಲಿ ದೊಡ್ಡ ವಾಹನಗಳ ಓಡಾಟವೂ ಸಾಧ್ಯವಾಗಲಿದ್ದು, ಈ ಭಾಗದ ಅಭಿವೃದ್ಧಿಗೂ ಸಾಕಷ್ಟು ನೆರವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಸೇತುವೆ ನಿರ್ಮಾಣವಾಗಿರುವುದು ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವನ್ನು ಮಾಡಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ ಮಾಡಿದರೆ ಇನ್ನೂ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ : ಚಳಿಗಾಲದ ಋತು: ಮಂಗಳೂರು ವಿಮಾನ‌ ನಿಲ್ದಾಣದಲ್ಲಿ 26ಶೇ ವಿಮಾನ ಹಾರಾಟ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.