ETV Bharat / state

ತುರ್ತು ಸಮಯಕ್ಕೆ ಸಿಗದ ಆ್ಯಂಬುಲೆನ್ಸ್​... ರೋಗಗ್ರಸ್ಥ ವಾಹನಗಳಿಗೇ ಬೇಕಿದೆ ಚಿಕಿತ್ಸೆ!

author img

By

Published : Feb 19, 2021, 9:46 PM IST

lack-of-ambulance-facility-in-uttar-kannada-district
ತುರ್ತು ಸಮಯಕ್ಕೆ ಸಿಗದ ಆ್ಯಂಬುಲೆನ್ಸ್

ಅಪಘಾತ ಇಲ್ಲವೇ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಬೇಕಿದ್ದ ವಾಹನಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಲ್ಲದೆ ಹೋದಲ್ಲೆಲ್ಲಾ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಬದಲಿ ವಾಹನ ವ್ಯವಸ್ಥೆ ಮಾಡುವಷ್ಟರಲ್ಲಿ ಅದೆಷ್ಟೋ ಪ್ರಾಣಗಳು ಹೋಗಿವೆ.

ಕಾರವಾರ (ಉತ್ತರ ಕನ್ನಡ): ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ತಲುಪಲು ಸರ್ಕಾರ ಎಲ್ಲೆಡೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಸೇರಿದ ಕಾರಣ ಅದೆಷ್ಟೋ ಮಂದಿ ಸಾವನ್ನೇ ಗೆದ್ದು ಬಂದಿರುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಅದೆಷ್ಟೇ ತುರ್ತು ಪರಿಸ್ಥಿತಿ ಇದ್ದರೂ ಕರೆ ಮಾಡಿದ ಬಳಿಕ ಆ್ಯಂಬುಲೆನ್ಸ್​ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಜನತೆಯ ಆರೋಪವಾಗಿದೆ.

ಅಪಘಾತ ಇಲ್ಲವೇ ತುರ್ತು ಪರಿಸ್ಥಿತಿಯ ವೇಳೆ ಆಗಮಿಸಿ ರೋಗಿಗಳನ್ನು ಕೊಂಡೊಯ್ಯಬೇಕಿರುವ ಜಿಲ್ಲೆಯ ಆ್ಯಂಬುಲೆನ್ಸ್​ಗಳು ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ತುರ್ತು ಸಮಯಕ್ಕೆ ಸಿಗದ ಆ್ಯಂಬುಲೆನ್ಸ್​... ರೋಗಗ್ರಸ್ಥ ವಾಹನಗಳಿಗೆ ಬೇಕಿದೆ ಚಿಕಿತ್ಸೆ

ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಆ್ಯಂಬುಲೆನ್ಸ್​​​ಗಳಿದ್ದು, ಅದರಲ್ಲಿ ಬಹುತೇಕ 108 ಆ್ಯಂಬುಲೆನ್ಸ್​​ಗಳು ಸರಿಯಾದ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಕೆಟ್ಟು ನಿಂತಿವೆ. ಕಳೆದ 2-3 ವರ್ಷದಿಂದ ವಾಹನಗಳ ಸರಿಯಾದ ನಿರ್ವಹಣೆಯಾಗದ ಕಾರಣ ಇಂತಹ ಸ್ಥಿತಿಗೆ ತಲುಪಿವೆ.

ಇದರಿಂದ ಅಪಘಾತ ಇಲ್ಲವೇ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಬೇಕಿದ್ದ ವಾಹನಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಲ್ಲದೆ ಹೋದಲ್ಲೆಲ್ಲಾ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಬದಲಿ ವಾಹನ ವ್ಯವಸ್ಥೆ ಮಾಡುವಷ್ಟರಲ್ಲಿ ಅದೆಷ್ಟೋ ಪ್ರಾಣಗಳು ಹೋಗಿವೆ.

ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಗಳನ್ನು ಕೇಳಿದರೆ ಜಿಲ್ಲೆಯಲ್ಲಿ ಒಟ್ಟು 20 ಆ್ಯಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಖಾಸಗಿ ಜಿವಿಕೆ ಕಂಪನಿ ನಿರ್ವಹಣೆ ಮಾಡುತ್ತಿದೆ. ಇದರ ಜೊತೆಗೆ 10 ನಗು-ಮಗು ವಾಹನಗಳಿವೆ. ಆದರೆ ಮೊದಲು ಬಂದಿದ್ದ ಕೆಲವು ವಾಹನಗಳು ದುರಸ್ತಿಗೆ ಬಂದಿದ್ದು, ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇದೀಗ 8 ಆ್ಯಂಬುಲೆನ್ಸ್​ಗಳು ಮಾತ್ರ ಉತ್ತಮ ಕಂಡೀಷನ್​​​ನಲ್ಲಿದ್ದು, ಅವುಗಳನ್ನು ಬಳಸಲಾಗುತ್ತಿದೆ. ಇನ್ನುಳಿದವುಗಳ ರಿಪೇರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಅಕಾಲಿಕ ಮಳೆ: ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.