ETV Bharat / state

ಗಣೇಶೋತ್ಸವಕ್ಕೆ ದಿನಗಣನೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ತಯಾರಿ

author img

By ETV Bharat Karnataka Team

Published : Sep 15, 2023, 3:20 PM IST

Ganesh Chaturthi preparation at Uttara Kannada
ಸಾರ್ವಜನಿಕ ಗಣೇಶೋತ್ಸವ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಮಾರು 224 ಹಾಗೂ ಸಿದ್ದಾಪುರ ತಾಲೂಕಿನ 169 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಭರ್ಜರಿ ತಯಾರಿ

ಶಿರಸಿ (ಉತ್ತರ ಕನ್ನಡ): ಗಣೇಶ ಚತುರ್ಥಿ ಸಮೀಪಿಸುತ್ತಿದೆ. ರಾಜ್ಯಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡ್ಮೂರು ವರ್ಷಗಳಿಂದ ಸಂಭ್ರಮ ಕಳೆದುಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕಳೆಗಟ್ಟುವ ಲಕ್ಷಣ ಗೋಚರಿಸಿದೆ. ಇದಕ್ಕಾಗಿ ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತಯಾರಿ ಜೋರಾಗಿದೆ. ಉತ್ಸವ ಆಯೋಜಿಸುವ ಸಮಿತಿಗಳು ಸಿದ್ಧತೆಯಲ್ಲಿ ತೊಡಗಿವೆ.

ಕಳೆದ ಎರಡ್ಮೂರು ವರ್ಷಗಳಿಂದ ಉತ್ಸವಕ್ಕೆ ವಿಧಿಸಿದ್ದ ನಿರ್ಬಂಧಗಳು ಈ ಬಾರಿ ಇಲ್ಲದ ಕಾರಣ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಕಳೆದ ವರ್ಷ ಗಣೇಶ ಚತುರ್ಥಿಯಲ್ಲಿ ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶ ಮೂರ್ತಿ 2 ಅಡಿ ಮೀರಬಾರದು ಎಂಬ ನಿಯಮವಿತ್ತು. ಹೀಗಾಗಿ ದೊಡ್ಡ ಮೂರ್ತಿಗಳು ಕಾಣಸಿಗಲಿಲ್ಲ. ಈಗ ಪುನಃ ಎಲ್ಲೆಡೆ ಸಾರ್ವಜನಿಕ ಉತ್ಸವಕ್ಕಾಗಿ ದೊಡ್ಡ ದೊಡ್ಡ ಗಾತ್ರದ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಶಿರಸಿ ತಾಲೂಕಿನಲ್ಲಿ ಸುಮಾರು 224 ಹಾಗೂ ಸಿದ್ದಾಪುರ ತಾಲೂಕಿನಲ್ಲಿ 169 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜನೆಗೊಳ್ಳುತ್ತಿದೆ. ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ಕಲಾವಿದರು ನಿರ್ಮಿಸುತ್ತಿದ್ದಾರೆ.

ಮೂರು ವರ್ಷದ ಬಳಿಕ ಉತ್ಸವವನ್ನು ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಆಕರ್ಷಕ ಕಲಾಕೃತಿಗಳ ಸ್ಥಾಪನೆ, ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ನಡೆಯುತ್ತಿದೆ. ದೇವಿಕೆರೆ, ಮರಾಠಿ ಕೊಪ್ಪ, ಶಿವಾಜಿ ಚೌಕ, ಹನುಮಗಿರಿ ಸೇರಿದಂತೆ ಹಲವೆಡೆಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಾಣಿಸುತ್ತಿದೆ.

ನಿರ್ಬಂಧಗಳಿಂದಾಗಿ ಕಳೆದ ಮೂರು ಹಬ್ಬಗಳಲ್ಲಿ ಸಣ್ಣ ಮೂರ್ತಿಗಳಿಗೆ ಮಾತ್ರ ಬೇಡಿಕೆ ಇತ್ತು. ಆದರೆ ಈ ಬಾರಿ ದೊಡ್ಡ ಗಾತ್ರದ ಮೂರ್ತಿಗಳಿಗೆ ಪುನಃ ಬೇಡಿಕೆ ಬಂದಿದೆ. ಇದರಿಂದ ಕಲಾಕಾರರಿಗೂ ಅನುಕೂಲವಾಗಿದೆ.

ಗಣೇಶೋತ್ಸವ ಮಂಡಳಿಗಳೊಂದಿಗೆ ಪೊಲೀಸ್​ ಇಲಾಖೆ ಶಾಂತಿ ಸಭೆ: ಪೊಲೀಸ್​ ಇಲಾಖೆಯ ಕಾನೂನುಗಳು ಹಬ್ಬ ಹರಿದಿನಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಡೆ-ತಡೆ ಎಂದುಕೊಳ್ಳದೇ ಅದು ನಿಮ್ಮ ಒಳಿತಿಗೆ ಎಂದು ಭಾವಿಸಿ ಇಲಾಖೆಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.

ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ನಿನ್ನೆ (ಗುರುವಾರ) ಸಂಜೆ ಪೊಲೀಸ್​ ಇಲಾಖೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, "ಈ ಬಾರಿ ಸಾರ್ವಜನಿಕವಾಗಿ ಗಣೇಶೋತ್ಸವ ಕಮಿಟಿಗಳಿರುವ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕಲೇಬೇಕು. ಅಗತ್ಯ ಬಿದ್ದಲ್ಲಿ ಸಿಸಿಟಿವಿ ಅಳವಡಿಕೆಗೆ ಇಲಾಖೆಯು ಸಹಕರಿಸಲಿದೆ. ಹಾಗೆಯೇ, ಗಣೇಶನ ಕೂರಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಿಲಿಂಡರ್ ಇಟ್ಟುಕೊಳ್ಳಬೇಕು. ಅದರಂತೆ ಗಣೇಶ ಮಂಡಳಿ ಆಯೋಜಕರು ಅಥವಾ ಅವರ ಪರವಾಗಿ ಓರ್ವರನ್ನು ಆಯಾ ಮಂಡಳಿಗಳಿರುವ ಜಾಗದಲ್ಲಿ ನೇಮಿಸಬೇಕು. ಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿಯೂ ಸಹ ಅಹಿತಕರ ಘಟನೆ ನಡೆಯದಂತೆ ಗಮನ ಹರಿಸಬೇಕು" ಎಂದರು.

ಇದನ್ನೂ ಓದಿ: ಭಟ್ಕಳ: ಸಾರ್ವಜನಿಕ ಗಣೇಶೋತ್ಸವ ಮಂಡಳಿ ಜೊತೆ ಪೊಲೀಸ್​ ಇಲಾಖೆ ಶಾಂತಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.