ETV Bharat / state

Tulsi Gowda: ಧಾರವಾಡದ ಕೃಷಿ ವಿವಿಯಿಂದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡಗೆ ಡಾಕ್ಟರೇಟ್ ಪದವಿ ಘೋಷಣೆ

author img

By

Published : Jun 10, 2023, 7:46 AM IST

ತುಳಸಿ ಗೌಡ
ತುಳಸಿ ಗೌಡ

ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೃಷಿ ಕ್ಷೇತ್ರದಲ್ಲಿಅವರ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ.

ಅಂಕೋಲಾ(ಉತ್ತರ ಕನ್ನಡ): ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ. ತಾಲೂಕಿನ ಹೊನ್ನಳ್ಳಿಯ ಹಾಲಕ್ಕಿ ಸಮುದಾಯದ ಪದ್ಮಶ್ರೀ ತುಳಸಿ ಗೌಡ ಅವರು ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿದ್ದು, ಕೃಷಿ ವಿಶ್ವವಿದ್ಯಾಲಯದ 36 ನೇ ಘಟಿಕೋತ್ಸವದ ಸಂದರ್ಭದಲ್ಲಿ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರೂ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಥಾವರ್​ಚಂದ್​​ ಗೆಹ್ಲೋಟ್ ಅವರು ಸೂಚಿಸಿದ್ದಾರೆ.

ಜೂನ್ 16 ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು. ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೃಷ ಸಂಶೋಧನಾ ಹಾಗೂ ಶಿಕ್ಷಣ ವಿಭಾಗದ ಮಹಾನಿರ್ದೇಶಕ ಡಾ.ಹಾಮಾಂಶು ಪಾಠಕ್, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ.ಪಿ.ಎಲ್. ಪಾಟೀಲ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವರ ಕಾರ್ಯಾಲಯದಿಂದ ಪದ್ಮಶ್ರೀ ತುಳಸಿ ಗೌಡ ಅವರಿಗೆ ರವಾನಿಸಿರುವ ಆಹ್ವಾನ ಪತ್ರದಲ್ಲಿ ತಿಳಿಸಲಾಗಿದೆ.

ಹಾಲಕ್ಕಿ ಸಮುದಾಯದವರಾದ ತುಳಸಿ ಗೌಡ ಮೂಲತಃ ಅಂಕೋಲಾ ತಾಲೂಕಿನ ಅಗಸೂರಿನ ಹೊನ್ನಳ್ಳಿ ಗ್ರಾಮದ ನಿವಾಸಿ. ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944ರಲ್ಲಿ ಜನಿಸಿದ ತುಳಸಿ ಗೌಡ ಬಡತನದ ಜೊತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಶಾಲೆ ಮೆಟ್ಟಿಲನ್ನು ಏರದೇ ತಾಯಿಯ ಜೊತೆ ಚಿಕ್ಕಂದಿನಿಂದಲೇ ಕೂಲಿ ಕೆಲಸಕ್ಕೆ ಮಾಡಲಾರಂಭಿಸಿದರು.

ಪರಿಸರ ಪ್ರೇಮ ಎನ್ನುವುದು ಇವರಿಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿ ಅವರಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಹಚ್ಚಿತು. ಅಂದಿನಿಂದ ಗಿಡಗಳನ್ನು ಬೆಳೆಸುವ ಕಾಯಕ ಆರಂಭಿಸಿದ ತುಳಸಿ ಗೌಡ ಅವರ ಕೈಯಲ್ಲಿ ಇದುವರೆಗೆ ಲಕ್ಷಾಂತರ ಮರಗಳು ಬೆಳೆದು ನಿಂತಿವೆ. ಅವರ ಪರಿಸರ ಸೇವೆಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯು ದೊರಕಿತ್ತು.

ಕೇವಲ ಪದ್ಮಶ್ರೀ ಅಲ್ಲದೇ, ತುಳಸಿ ಗೌಡರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ತುಳಸಿ ಗೌಡರು ಮೊದಲು ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದ್ದರು. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನು ಮಾಡುತ್ತಿದ್ದ ಅವರಿಗೆ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರೂ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಿರಲಿಲ್ಲ.

ಅಷ್ಟೇ ಅಲ್ಲದೇ ತಾವು ಬೆಳೆಸಿದ ಸಸಿಗಳನ್ನ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದು, ಅವರು ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಜನರಿಗೆ ಗಾಳಿ, ನೆರಳನ್ನ ನೀಡುತ್ತಿವೆ.

ಇದನ್ನೂ ಓದಿ: ಮಂಗಳೂರು ವಿವಿ 41ನೇ ಘಟಿಕೋತ್ಸವ: ಪಿಹೆಚ್​ಡಿ ಪಡೆದ 80ರ ವೃದ್ಧ, ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.