ಕಾರವಾರ: ತಡರಾತ್ರಿ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಗರದ ಲಂಡನ್ ಬ್ರಿಡ್ಜ್ ಬಳಿ ಸಂಭವಿಸಿದೆ.
ಚಿಕ್ಕಮಗಳೂರು ಮೂಲದ ಕಿರಣ್(28) ಹಾಗೂ ರಾಕೇಶ್ ಸಿ. ಆರ್(28) ಮೃತಪಟ್ಟವರು. ಗಾಯಗೊಂಡಿದ್ದ ಮತ್ತಿಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾದಿಂದ ಗೋವಾ ಕಡೆ ತೆರಳುತ್ತಿದ್ದವರು ಲಂಡನ್ ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕ್ಗೆ ತೆರಳಿ ಮರಳಿ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ.
ಕಾರು ಎದೆಮಟ್ಟದ ನೀರಿನಲ್ಲಿ ಮುಳುಗಿದ ಪರಿಣಾಮ ಮೇಲೆ ಬರಲಾಗದೆ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಇನ್ನಿಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.